ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಲು ಪ್ರಶ್ನೆ ಪತ್ರಿಕೆ ನೀಲನಕ್ಷೆ (ಬ್ಲೂ ಪ್ರಿಂಟ್) ಒಂದು ಮಾದರಿ ಅಷ್ಟೆ. ಎಲ್ಲ ವಿಷಯಗಳಲ್ಲೂ ಬ್ಲೂಪ್ರಿಂಟ್ ಮಾದರಿಯಲ್ಲಿ ಪ್ರಶ್ನೆಗಳನ್ನು ಕೇಳಿದರೂ ಸ್ವರೂಪ ಬದಲಾಗಲಿದೆ. ಹೀಗಾಗಿ, ಸಂಪೂರ್ಣ ಪಠ್ಯಕ್ರಮ ಅನುಸರಿಸಿ ಪರೀಕ್ಷೆ ಎದುರಿಸಲಿರುವುದರಿಂದ ಹೆಚ್ಚಿನ ಅಂಕ ಪಡೆಯಲು ಸಾಧ್ಯವಾಗಲಿದೆ ಎಂದು ನಾನಾ ವಿಷಯ ತಜ್ಞರು ಸಲಹೆ- ಮಾರ್ಗದರ್ಶನ ನೀಡಿದ್ದಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 'ವಿಜಯ ಕರ್ನಾಟಕ' ಶನಿವಾರ ಹಮ್ಮಿಕೊಂಡಿದ್ದ ನೇರ ಫೋನ್-ಇನ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿತು. ರಾಜ್ಯದ ನಾನಾ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಕರೆ ಮಾಡಿ ವಿಷಯ ತಜ್ಞರಿಂದ ಸಲಹೆ ಪಡೆದರು. ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿನ ಗೊಂದಲ-ಆತಂಕ ನಿವಾರಣೆಗೆ ಪತ್ರಿಕೆ ಉತ್ತಮ ವೇದಿಕೆಯಾಯಿತು.
'ದ್ವಿತೀಯ ಪಿಯು ಪರೀಕ್ಷೆಯಲ್ಲಿ ಇಲಾಖೆಯ ಪಠ್ಯಕ್ರಮ ಬಿಟ್ಟು ಹೊರಗಿನ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇಲ್ಲ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಅಲ್ಲದೆ, ಸಮಯ ಹೊರತುಪಡಿಸಿದರೆ ಪಠ್ಯಕ್ರಮದಲ್ಲಿಯೂ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗದೆ ನಿರ್ಭೀತಿಯಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಪಡೆಯಲು ಮುಂದಾಗಬೇಕು'ಎಂದು ವಿಷಯ ತಜ್ಞರು ಸಲಹೆ ಮಾಡಿದರು.
ಬಹುತೇಕರ ಪ್ರಶ್ನೆಗಳು ಪ್ರಶ್ನೆಪತ್ರಿಕೆಯ ಬ್ಲೂಪ್ರಿಂಟ್ ಹಾಗೂ ಮಾದರಿ ಪ್ರಶ್ನೆಗಳನ್ನು ಅನುಸರಿಸಿದರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಲಿದೆಯೇ ಎಂಬುದಾಗಿದ್ದವು. ಇದಕ್ಕೆಲ್ಲಾ ನಾನಾ ವಿಷಯ ತಜ್ಞರ ಉತ್ತರ ಒಂದೇ ಆಗಿತ್ತು. ''ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಂಪೂರ್ಣ ಅವಲಂಬಿಸುವುದು ಸರಿಯಲ್ಲ. ಬ್ಲೂ ಪ್ರಿಂಟ್ ಮಾದರಿಯಲ್ಲಿ ಪ್ರಶ್ನೆಗಳನ್ನು ಕೇಳಿದರೂ ಅವುಗಳ ಸ್ವರೂಪ ಕೂಡ ಬದಲಾಗಲಿದೆ. ಯಥಾವತ್ತು ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯೂ ಕಡಿಮೆ. ಅಲ್ಲದೆ, ಐದು ಅಂಕಗಳ ಪ್ರಶ್ನೆಗಳನ್ನು 3 ಮತ್ತು 2 ಅಂಕಗಳನ್ನಾಗಿ ಪ್ರತ್ಯೇಕಿಸಿ ಕೇಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ, ಪಠ್ಯಕ್ರಮ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತ'' ಎಂದು ಮಾರ್ಗದರ್ಶನ ನೀಡಿದರು.
ಇನ್ನು, ಪರೀಕ್ಷೆಗೆ ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಕೊನೇ ಹಂತದಲ್ಲಿ ಒತ್ತಡ ಹೆಚ್ಚುತ್ತಿದೆ. ಈ ಬಗ್ಗೆ ಪರಿಹಾರ ಸೂಚಿಸಿ ಎಂದು ವಿದ್ಯಾರ್ಥಿಗಳು ಕೋರಿದರು. ಈ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೊನೇ ಗಳಿಗೆಯಲ್ಲಿ ಹೊಸದನ್ನು ಕಲಿಯಲು ಸಮಯವಿಲ್ಲ. ಹೀಗಾಗಿ, ಈಗಾಗಲೇ ಉಪನ್ಯಾಸಕರು ತರಗತಿಗಳಲ್ಲಿ ಮಾಡಿದ ಪಠ್ಯಕ್ರಮವನ್ನು ಪುನರ್ಮನನ ಮಾಡಿಕೊಂಡರೆ ಸಾಕು ಎಂದು ಹೇಳಿದರು.
ಕಬ್ಬಿಣದ ಕಡಲೆಯಾದ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಶ್ನೆಗಳು ತೂರಿ ಬಂದವು. ರಾಜಧಾನಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಕರೆ ಮಾಡಿ ಸಲಹೆ ಪಡೆದರು. 100ಕ್ಕೆ 100 ಅಂಕ ಪಡೆಯಬೇಕಾದರೆ ಸ್ಪಷ್ಟ ಉತ್ತರ ಗೊತ್ತಿರವಿರುವ 10, 5, 6, 4 ಅಂಕಗಳ ಪ್ರಶ್ನೆಗಳನ್ನು ಮೊದಲು ಉತ್ತರಿಸಲು ಪ್ರಯತ್ನಿಸಬೇಕು. ಹಾಗೆಯೇ, ಸಮಯ ನಿರ್ವಹಣೆ ಕೂಡ ಬಹಳ ಮುಖ್ಯ. ಹೀಗಾಗಿ, ನಿಖರವಾದ ಉತ್ತರ ಬರೆಯುವ ಮೂಲಕ ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸಿ ಎಂದು ಹೇಳಿದರು.
ಕಾಲೇಜುಗಳಲ್ಲಿ ನೀಡಿದ 'ಹ್ಯಾಂಡ್ ಬುಕ್' ಕೂಡ ಸಹಾಯಕ್ಕಷ್ಟೆ. ಅವು ಪೂರ್ತಿ ಅಂಕ ತಂದುಕೊಡಲಾರವು. ಅಂತೆಯೇ, ಗಣಿತದಲ್ಲಿನ ಚಾಪ್ಟರ್ಗಳ ಪೈಕಿ 5 ಚಾಪ್ಟರ್ಗಳ ಪ್ರಶ್ನೆಗಳಿಗೆ ಸರಿಯಾಗಿ ಸಿದ್ಧರಾದರೆ 70 ಅಂಕ ಪಡೆಯಬಹುದು. ಎಲ್ಲದಕ್ಕೂ ನಿಖರ ಉತ್ತರ ಗೊತ್ತಿದ್ದರೆ ಗಣಿತ ಪ್ರಶ್ನೆ ಪತ್ರಿಕೆಯನ್ನು ಕೇವಲ 2 ಗಂಟೆಯೊಳಗೆ ಉತ್ತರಿಸಿ ಮುಗಿಸಬಹುದು ಎಂದು ಗಣಿತ ವಿಷಯ ತಜ್ಞರು ಸಲಹೆ ಮಾಡಿದರು. ಅಲ್ಲದೆ, ಇತರೆ ವಿಷಯಗಳಲ್ಲೂ ಪ್ರಶ್ನೆಗೆ ಮೀರಿದ ಉತ್ತರ ಬರೆಯಲು ಪ್ರಯತ್ನಿಸಬಾರದು ಎಂದು ಸಲಹೆ ಮಾಡಿದರು.
ಇನ್ನು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಷಾ ವಿಷಯಗಳನ್ನು ನಿರ್ಲಕ್ಷಿಸುವುದರಿಂದ ಒಟ್ಟಾರೆ ಶೇ 100ರಷ್ಟು ಅಂಕ ಪಡೆಯಲು ಸಾಧ್ಯವಾಗುತ್ತಿಲ್ಲ. ಪಿಸಿಎಂಬಿಯಲ್ಲಿ 100ಕ್ಕೆ 100 ಅಂಕ ಪಡೆಯುವ ವಿದ್ಯಾರ್ಥಿಗಳು, ಕನ್ನಡ ಹಾಗೂ ಇಂಗ್ಲಿಷ್ನಲ್ಲಿ 90 ಅಂಕ ಪಡೆಯಲು ವ್ಯಾಕರಣ, ವಾಕ್ಯಗಳ ರಚನೆ ಮುಖ್ಯ ಎಂದು ಕಿವಿಮಾತು ಹೇಳಿದರು.
ಏನಿದು ಬ್ಲೂ ಪ್ರಿಂಟ್?
ಪಿಯುಸಿ ಶಿಕ್ಷಣದ ಪ್ರತಿಯೊಂದು ವಿಷಯದ ಪಠ್ಯಕ್ರಮ ಬೋಧಿಸಲು ಮತ್ತು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ನಿಗದಿ ಮಾಡಿರುವ ಮಾದರಿಗಳನ್ನು ಕ್ರಮವಾಗಿ ಪ್ರೋಗ್ರಾಮ್ ಆಫ್ ವರ್ಕ್ ಹಾಗೂ ಪ್ರಶ್ನೆಪತ್ರಿಕೆ ನೀಲನಕ್ಷೆ ಎಂದು ಕರೆಯುತ್ತಾರೆ. ಇವೆರಡೂ ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ. ಅದರ ಪ್ರಕಾರ, ಇಂತಿಂಥ ಪಾಠವನ್ನು ಇಂತಿಷ್ಟು ಗಂಟೆಗಳ ಕಾಲ ಬೋಧಿಸಬೇಕು ಮತ್ತು ಆಯಾ ಪಾಠದಿಂದ ಇಂತಿಷ್ಟು ಅಂಕಗಳಿಗೆ ಸಮನಾದ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ಮಾದರಿಯಲ್ಲಿ ವಿವರಿಸಲಾಗಿದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವವರು ಯಾವ್ಯಾವ ಪಾಠಗಳಿಗೆ ಎಷ್ಟೆಷ್ಟು ಅಂಕಗಳನ್ನು ನಿಗದಿಪಡಿಸಲಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆಪತ್ರಿಕೆಯ ನೀಲನಕ್ಷೆ ತಯಾರಿಸಿ ಅದರ ಪ್ರಕಾರವೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು.
ಉದಾಹರಣೆಗೆ ಗಣಿತದ ಮೊದಲ ಪಾಠದಿಂದ 11 ಅಂಕಗಳಿಗೆ ಸಮನಾದ ಪ್ರಶ್ನೆಗಳಿರಬೇಕು ಎಂದಿದ್ದರೆ ಅಷ್ಟು ಇರಲೇಬೇಕು. ಗಣಿತದ ರೀತಿ ಇತರ ಎಲ್ಲ ವಿಷಯಗಳಿಗೂ ಇದು ಅನ್ವಯವಾಗಲಿದೆ. ಪ್ರತಿಯೊಂದು ಪ್ರಶ್ನೆ ಪತ್ರಿಕೆಗೂ ತನ್ನದೇ ಆದ ನೀಲನಕ್ಷೆ ಇರುತ್ತದೆ. ಪ್ರಶ್ನೆಗಳ ಸ್ವರೂಪ ಬದಲಾಗಬಹುದೇ ಹೊರತು ಪಾಠಗಳಿಗೆ ನೀಡಲಾದ ಅಂಕಗಳ ಪ್ರಮಾಣ (ವೈಟೇಜ್) ಯಾವ ಕಾರಣಕ್ಕೂ ಬದಲಾಗುವುದಿಲ್ಲ. ಒಂದು ವೇಳೆ ಬದಲಾವಣೆ ಇದ್ದರೂ ಅದು ಕನಿಷ್ಠ ಪ್ರಮಾಣದಲ್ಲಿರುತ್ತದೆ.
ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆಯ ಹೊಸ್ತಿಲಲ್ಲಿದ್ದಾರೆ. ಅಧ್ಯಯನ ಸಿದ್ಧತೆ ಪೂರ್ಣಗೊಳಿಸಿರುವ ಅವರಿಗೆ ಕಾಡುತ್ತಿರುವ ಅನುಮಾನಗಳನ್ನು ಪರಿಹರಿಸುವ ಕೆಲಸವನ್ನು 'ವಿಜಯ ಕರ್ನಾಟಕ'ವು 'ನೇರ ಫೋನ್ ಇನ್ ಕಾರ್ಯಕ್ರಮ' ಮೂಲಕ ಮಾಡಿತು.
ನಮ್ಮ ಈ ಪ್ರಯತ್ನಕ್ಕೆ ಅಭೂತಪೂರ್ವ ಸ್ಪಂದನೆ ದೊರೆಯಿತು. ಕರೆ ಮಾಡಿದ ಬಹುತೇಕ ವಿದ್ಯಾರ್ಥಿಗಳು, ಪ್ರಶ್ನೆಪತ್ರಿಕೆಯ ಬ್ಲೂ ಪ್ರಿಂಟ್ ಹಾಗೂ ಮಾದರಿ ಪ್ರಶ್ನೆಗಳನ್ನು ಅನುಸರಿಸುವ ಬಗ್ಗೆಯೇ ಕೇಳಿದರು. ಅವರ ಎಲ್ಲ ಗೊಂದಲ ಮತ್ತು ಆತಂಕವನ್ನು ವಿಷಯ ತಜ್ಞರು ನಿವಾರಿಸಿದರು. ನೂರಾರು ಕರೆಗಳು ಬಂದರೂ 50 ಕರೆಗಳಿಗೆ ಮಾತ್ರ ಉತ್ತರಿಸಲು ಸಾಧ್ಯವಾಗಿದ್ದು, ಆ ಪೈಕಿ ಆಯ್ದ ಕೆಲವು ಪಶ್ನೋತ್ತರಗಳನ್ನು ಇಲ್ಲಿ ಕೊಡಲಾಗಿದೆ.
ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ
'ಈ ಬಾರಿ ಜಿಲ್ಲಾ ಖಜಾನೆಗಳಿಂದ ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗುತ್ತದೆ. ಈ ರೀತಿ ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನಗಳಿಗೆ ಜಿಪಿಎಸ್ ಸೌಲಭ್ಯ ಅಳವಡಿಸಲಾಗುತ್ತಿದೆ. ಹೀಗಾಗಿ, ಯಾವುದೇ ಅಕ್ರಮಗಳಿಗೆ ಅವಕಾಶ ಕೊಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ,' ಎಂದು ಎಸ್.ಜಯಕುಮಾರ್ ಅವರು ಹೇಳಿದರು.
'ಈ ಬಾರಿ ಜಿಲ್ಲಾ ಖಜಾನೆಗಳಲ್ಲಿ ಮಾತ್ರ ಪ್ರಶ್ನೆ ಪತ್ರಿಕೆಗಳನ್ನು ಇಡಲಾಗುತ್ತಿದೆ. ಅತ್ಯಂತ ದೊಡ್ಡ ಜಿಲ್ಲೆಗಳಾದ ಬೆಳಗಾವಿ, ತುಮಕೂರು, ಉತ್ತರ ಕನ್ನಡ ಹಾಗೂ ಬಳ್ಳಾರಿಯಲ್ಲಿ ಮಾತ್ರ ತಲಾ ಎರಡು ಖಜಾನೆಗಳನ್ನು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ಜಿಲ್ಲಾ ಕೇಂದ್ರಕ್ಕೆ 100 ಕಿ.ಮೀ. ದೂರ ಇರುವುದರಿಂದ ಸಕಾಲದಲ್ಲಿ ಪ್ರಶ್ನೆ ಪತ್ರಿಕೆ ಪೂರೈಸುವುದು ಕಷ್ಟವಾಗುತ್ತದೆ. ಅದೇ ರೀತಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕೂಡ ಜಿಲ್ಲಾ ಕೇಂದ್ರಕ್ಕೆ ದೂರ ಇರುವುದರಿಂದ ಅಲ್ಲಿ ಖಜಾನೆ ಗುರುತಿಸಲಾಗಿದೆ. ಈ ರೀತಿ ನಾಲ್ಕು ಕಡೆಗಳಲ್ಲಿ ಮಾತ್ರ ಜಿಲ್ಲಾ ಕೇಂದ್ರ ಹೊರತುಪಡಿಸಿ ಹೆಚ್ಚುವರಿ ಖಜಾನೆಗಳನ್ನು ತೆರೆಯಲಾಗಿದೆ' ಎಂದರು.
'ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಹೊರ ತೆಗೆದ ಬಂಡಲ್ಗಳನ್ನು ನಿರ್ದಿಷ್ಟ ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೇ ತಲುಪಿಸಲಾಗುತ್ತದೆ. ಹೀಗಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಮೇಲೆ ಕಣ್ಗಾವಲಿಡಲಿರುವುದರಿಂದ ಸೋರಿಕೆಗೆ ಅವಕಾಶ ಇರುವುದಿಲ್ಲ,' ಎಂದು ಹೇಳಿದರು.
ಒತ್ತಡ ನಿಭಾಯಿಸುವುದು ಹೇಗೆ?
ವಿದ್ಯಾರ್ಥಿಗಳು ಸತತವಾಗಿ ಓದುವುದರಿಂದ ಒತ್ತಡಕ್ಕೆ ಒಳಗಾಗುವುದು ಸಹಜ. ಆದರೆ ಆ ಒತ್ತಡದಿಂದ ಹೊರಬರಬೇಕಾದರೆ ಅಗ್ಗಾಗ್ಗೆ ಸ್ವಲ್ಪ ಬಿಡುವು ಮಾಡಿಕೊಂಡು ಸಂಗೀತ ಆಲಿಸುವುದು, ಸ್ವಲ್ಪ ಟಿ.ವಿ. ನೋಡುವುದು ಮಾಡಬೇಕು, ಇಲ್ಲವೇ ಏಕಾಗ್ರತೆಯಿಂದ ದೇವರ ಸ್ಮರಣೆ ಮಾಡಬಹುದು ಎನ್ನುತ್ತಾರೆ ತಜ್ಞರು. ತೀರಾ ಒತ್ತಡವಾಗುತ್ತಿದೆ ಎಂದಾದರೆ, ವಿದ್ಯಾರ್ಥಿಗಳು ಹದಿನೈದು ನಿಮಿಷಗಳ ಕಾಲ ಓದಿದರೆ ಮತ್ತೆ ಹದಿನೈದು ನಿಮಿಷಗಳ ಕಾಲ ಓದಿದ್ದನ್ನು ಬರೆಯುವುದರಿಂದಲೂ ಸಹ ಒತ್ತಡ ನಿವಾರಣೆಯಾಗುತ್ತದೆ.
ಆಪ್ಟಿಟ್ಯೂಡ್ ಪ್ರಶ್ನೆಗಳಿಗೆ ಉತ್ತರಿಸುವಾಗ ಭಯ ಆಗುತ್ತದೆ. ಏನು ಮಾಡಬೇಕು?
- ನಿಮಗೆ ಪ್ರಶ್ನೆ ಪತ್ರಿಕೆ ಕೊಟ್ಟ ಕೂಡಲೇ ಒಮ್ಮೆ ನಿಧಾನವಾಗಿ ಓದಿಕೊಳ್ಳಿ.ಯಾವ ಪ್ರಶ್ನೆಗಳು ಅತ್ಯಂತ ಸುಲಭವಾಗಿವೆ, ನಿಮಗೆ ಉತ್ತರ ಗೊತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.ನಿಮಗೆ ಐದು ಅಂಕದ ಪ್ರಶ್ನೆಗಳು ಸರಳ ಎನಿಸಿದರೆ ಅವುಗಳನ್ನೇ ಮೊದಲು ಬರೆದು ಆನಂತರ ಕಷ್ಟಕರ ಪ್ರಶ್ನೆಗಳಿಗೆ ಉತ್ತರಿಸಿ.
ಚೈತ್ರ- ಕೊಡಿಗೇಹಳ್ಳಿ, ಚಿರಂತ್- ಬೆಂಗಳೂರು, ರಾಜು-ಧಾರವಾಡ
-ಪಠ್ಯಕ್ರಮ ಓದಿಕೊಂಡರೆ ಪರೀಕ್ಷೆ ಎದುರಿಸುವುದು ಸುಲಭವಾಗುತ್ತದೆಯೋ ಅಥವಾ ಕಾಲೇಜು ನೀಡಿರುವ ಹ್ಯಾಂಡ್ಬುಕ್ ಓದಿದರೆ ಹೆಚ್ಚು ಸಹಕಾರಿಯಾಗುತ್ತದೋ?
- ಪಠ್ಯಕ್ರಮ ಓದುವುದು ಅತಿಮುಖ್ಯ. ಪ್ರಶ್ನೆಗಳನ್ನು ಪಠ್ಯ ಆಧರಿಸಿಯೇ ಕೇಳಲಾಗುತ್ತದೆ. ಹೆಚ್ಚಿನ ಅಂಕ ಗಳಿಸಬೇಕಾದರೆ ಇಡೀ ಪಠ್ಯವನ್ನು ಸಮಗ್ರವಾಗಿ ಅಭ್ಯಾಸ ಮಾಡಿರಬೇಕು. ಕಾಲೇಜು ನೀಡುವ ಹ್ಯಾಂಡ್ಬುಕ್ ಅನ್ನು ಪೂರಕವಾಗಿ ಬಳಸಿಕೊಳ್ಳಬಹುದು.
ಸುಪ್ರೀತ, ಬೆಂಗಳೂರು
- ಗಣಿತದಲ್ಲಿ ಸರಳ ರೀತಿಯಲ್ಲಿ ಲೆಕ್ಕಗಳನ್ನು ಬಿಡಿಸಿದರೆ ಅಂಕಗಳು ಸಿಗುತ್ತವೆಯೇ?
- ಉತ್ತರ ಸರಿ ಇದ್ದರೆ ಖಂಡಿತಾ ಸಿಗುತ್ತದೆ. ಲೆಕ್ಕವನ್ನು ಮಾಡುವಾಗ ಪರಾರಯಯ ಸೂತ್ರಗಳನ್ನು ಬಳಸಿ ಮಾಡಬಹುದು. ಆದರೆ ಪ್ರತಿಯೊಂದು ಹಂತವೂ ಸರಿಯಾಗಿರಬೇಕು. ಕೊನೆಗೆ ಉತ್ತರಕ್ಕೆ ತಾಳೆಯಾಗಬೇಕು. ಸ್ಕೀಂ ಆಫ್ ವ್ಯಾಲುಯೇಷನ್ ಉತ್ತರಕ್ಕೆ ಹೊಂದಿಕೆಯಾಗಬೇಕು.
ಮಲ್ಲಿಕ್ ಜಾನ್, ಬೈಲಹೊಂಗಲ
- ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆಯೇ?
-ಇಲಾಖೆಯಿಂದ ಯಾವುದೇ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡುವುದಿಲ್ಲ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ಹಾಕಲಾಗಿದೆ. ಅವುಗಳನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಅಗತ್ಯ ತಯಾರಿ ಮಾಡಿಕೊಳ್ಳಬೇಕು.
ಮೇಘಶ್ರೀ,ರಾಯಚೂರು
- ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ತುಂಬಾ ಟೆನ್ಷನ್ ಆಗ್ತಿದೆ? ರಿವಿಷನ್ ಟೈಂನಲ್ಲಿ ಮರೆತುಹೋಗುತ್ತದೆ?
- ಟೆನ್ಸನ್ ಮಾಡಿಕೊಳ್ಳಬೇಡಿ. ಮೊದ್ಲು ಕೂಲ್ ಆಗಿರಿ. ಆತಂಕ ಮಾಡಿಕೊಂಡರೆ ಗೊತ್ತಿರುವುದು ಮರೆತು ಹೋಗುತ್ತದೆ. ತಾಳ್ಮೆಯಿಂದ ಸಮಾಧಾನ ಶಾಂತಚಿತ್ತದಿಂದ ಪರೀಕ್ಷೆ ಎದುರಿಸಿ.
ಮಧುಮಿತ-ಮೈಸೂರು, ಮಹಮ್ಮದ್ ಅಲಿ-ಕಾಸರಗೋಡು, ಸಂಕೇತ್-ಕುಮಟ, ಮಂಜುನಾಥ್-ಹೂವಿನ ಹಡಗಲಿ, ಸಂಪ್ರೀತ್-ಬೈಲಹೊಂಗಲ, ಹಸನಬ್-ಕುಂಬ್ಳೆ, ಪ್ರವೀಣ್-ಬಾಗಲಕೋಟೆ.
- ಬ್ಲೂಪ್ರಿಂಟ್ ಆಧಾರವಾಗಿಟ್ಟುಕೊಂಡು ಓದಿದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬಹುದೇ?
- ವಿದ್ಯಾರ್ಥಿಗಳಿಗೆ ಓದಲು ಮಾರ್ಗದರ್ಶನ ದೊರೆಯಲು ಹಾಗೂ ಸಾಧನವಾಗಿ ಬಳಕೆ ಮಾಡಿಕೊಳ್ಳಲು ಬ್ಲೂಪ್ರಿಂಟ್ ನೀಡಲಾಗಿದೆ. ಆದರೆ ಇದರಲ್ಲಿರುವ ಪ್ರಶ್ನೆಗಳನ್ನೇ ಪ್ರಶ್ನೆಪತ್ರಿಕೆಯಲ್ಲಿ ನೀಡುವುದಿಲ್ಲ. ಪರೀಕ್ಷೆಯಲ್ಲಿ ಪ್ರಶ್ನೆಗಳು ಹೇಗೆ ಬರುತ್ತವೆ ಎಂಬ ಮಾದರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಬ್ಲೂಪ್ರಿಂಟ್ ನೀಡಲಾಗಿದೆ. ಪಠ್ಯಪುಸ್ತಕದಿಂದಲೇ ಪ್ರಶ್ನೆ ರೂಪಿಸಲಾಗುತ್ತದೆ.
ಆಕರ್ಷ್-ನಾಗರಬಾವಿ, ಅನೂಪ್-ಬೆಂಗಳೂರು, ನಿತಿನ್-ಬೆಂಗಳೂರು, ದಿವ್ಯ-ಹೊಳೆನರಸೀಪುರ
- ಯಾವ ಅಧ್ಯಾಯಗಳನ್ನು ಹೆಚ್ಚು ಓದಿದರೆ ಉತ್ತಮ? ಯಾವ ಅಧ್ಯಾಯಗಳಿಂದ ಹೆಚ್ಚು ಪ್ರಶ್ನೆಗಳು ಬರುತ್ತವೆ?
- ಪ್ರತಿ ಪಠ್ಯಪುಸ್ತಕದಲ್ಲಿ ಕೆಲವು ಪ್ರಮುಖವಾದ ಅಧ್ಯಾಯಗಳನ್ನು ಗುರುತಿಸಲಾಗಿದೆ. ಹೆಚ್ಚು ಪ್ರಶ್ನೆಗಳನ್ನು ಕೇಳುವ ಅಧ್ಯಾಯಗಳನ್ನು ಹೆಚ್ಚು ಓದಿಕೊಳ್ಳಬೇಕು.
ಭೂಮಿಕಾ, ಭದ್ರಾವತಿ
- ಬಿಸಿನೆಸ್ ಸ್ಟಡೀಸ್ ಮತ್ತು ಅರ್ಥಶಾಸ್ತ್ರದ ಒಂದೇ ರೀತಿಯಂತೆ ಭಾಸವಾಗಿ ಓದುವಾಗ ಗೊಂದಲವಾಗುತ್ತಿದೆ. ಇದಕ್ಕೇನು ಪರಿಹಾರ?
- ಎರಡೂ ವಿಷಯಗಳ ಪಠ್ಯದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಉದಾಹರಣೆಗೆ ಬಿಸಿನೆಸ್ ಸ್ಟಡೀಸ್ನ ಮಾರುಕಟ್ಟೆ ಪರಿಕಲ್ಪನೆಗೂ ಅರ್ಥಶಾಸ್ತ್ರದ ಮಾರುಕಟ್ಟೆ ಪರಿಕಲ್ಪನೆಗೂ ಬಹಳ ವ್ಯತ್ಯಾಸವಿದೆ. ಅರ್ಥಶಾಸ್ತ್ರ ಸಿದ್ಧಾಂತ(ಥಿಯರಿ) ವಾಗಿದ್ದರೆ, ಬಿಸಿನೆಸ್ ಸ್ಟಡೀಸ್ ಪ್ರಾಯೋಗಿಕ (ಪ್ರಾಕ್ಟಿಕಲ್)ದಂತಿರುತ್ತದೆ. ಓದಿದ ಬಳಿಕ ಒಮ್ಮೆ ಮುಖ್ಯಾಂಶಗಳನ್ನು ಬರೆದು ಅಭ್ಯಾಸ ಮಾಡಿ.
ವಿಭಾ , ಶಿವಮೊಗ್ಗ
- ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದು ಹೇಗೆ?
- ಬೇರೆ ವಿಷಯಗಳನ್ನು ಒಂದು ಗಂಟೆ ಓದಿದರೆ ಗಣಿತವನ್ನು 2 ಗಂಟೆ ಓದಬೇಕು. ಸಮಸ್ಯೆಗಳನ್ನು ಬಿಡಿಸುವಾಗ ಪಠ್ಯವನ್ನು ಓದದೆ, ಬರೆದು ಅಭ್ಯಾಸ ಮಾಡಬೇಕು. ಗಣಿತ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ.
ಮಹಮ್ಮದ್ ರಫಿ-ಹಾವೇರಿ, ಸುದರ್ಶನ್-ಕುಮಟ
- ಗಣಿತ ಮತ್ತು ಭೌತಶಾಸ್ತ್ರಕ್ಕಾಗಿ ಎನ್ಸಿಇಆರ್ಟಿ ಪಠ್ಯಪುಸ್ತಕ ಓದಿದರೆ ಸಾಕೇ?
- ಎನ್ಸಿಇಆರ್ಟಿ ಪಠ್ಯವನ್ನು ಮಾದರಿಯಾಗಿಟ್ಟುಕೊಂಡು ರಾಜ್ಯ ಶಿಕ್ಷಣ ಇಲಾಖೆ ಪಠ್ಯ ರೂಪಿಸಿದೆ. ಇಲಾಖೆಯಿಂದ ನೀಡಿದ ಪಠ್ಯಪುಸ್ತದಿಂದಲೇ ಅಭ್ಯಾಸ ಮಾಡಿ.
ಅಕ್ಷತಾ, ಧಾರವಾಡ
- ಈ ಬಾರಿ ಪರೀಕ್ಷೆಯಲ್ಲಿ ಎಲ್ಲವೂ ಬದಲಾಗಿದೆಯೇ?
- ಪರೀಕ್ಷಾ ಸಮಯ ಮತ್ತು ವೇಳಾಪಟ್ಟಿ ಮಾತ್ರ ಬದಲಾಗಿದೆ. ಪ್ರತಿ ಪರೀಕ್ಷೆ ನಡುವೆ ಓದಿಕೊಳ್ಳಲು ಹೆಚ್ಚು ದಿನಗಳ ಅಂತರ ನೀಡಲಾಗಿದೆ.
ಸಂಜನಾ, ಬೆಂಗಳೂರು
-ಉತ್ತರವನ್ನು ಕ್ರಮಬದ್ಧವಾಗಿಯೇ ಬರೆಯಬೇಕೆ?
- ಹಾಗೇನಿಲ್ಲ. ಕೊನೆಯ ಪ್ರಶ್ನೆಗೆ ಮೊದಲು ಉತ್ತರ ನೀಡಿದರೂ ತೊಂದರೆಯಿಲ್ಲ. ಪ್ರಶ್ನೆ, ಪ್ರಶ್ನೆಯ ವಿಭಾಗದ ಸಂಖ್ಯೆಯನ್ನು ಸರಿಯಾಗಿ ಉಲ್ಲೇಖಿಸಬೇಕು.
ಸಂಗೀತ, ತುಮಕೂರು
- ಅಕೌಂಟೆನ್ಸಿ ಮತ್ತು ಅರ್ಥಶಾಸ್ತ್ರದಲ್ಲಿ ಮುಖ್ಯವಾಗಿ ಯಾವ ಪ್ರಶ್ನೆಗಳು ಬರಬಹುದು?
- ಪಠ್ಯಪುಸ್ತಕದಲ್ಲಿರುವ ಎಲ್ಲವೂ ಮುಖ್ಯ ಪ್ರಶ್ನೆಗಳಾಗಿ ಬರುವ ಸಾಧ್ಯತೆಯಿದೆ. ಎಲ್ಲವನ್ನೂ ಚೆನ್ನಾಗಿ ಓದಿ.
ಕಮಲಾಕ್ಷಿ, ರಾಯಚೂರು
- ಎಷ್ಟೇ ಓದಿದರೂ ನೆನಪಿನಲ್ಲಿ ಉಳಿಯುವುದಿಲ್ಲವಲ್ಲ?
- ಶಾಂತವಾದ ವಾತಾವರಣದಲ್ಲಿ ಕನಿಷ್ಠ 15 ನಿಮಿಷ ಏಕಾಗ್ರತೆಯಿಂದ ಓದಿ. ನಂತರ ಓದಿರುವ ಪ್ರಮುಖಾಂಶಗಳನ್ನು ಬರೆದಿಡಿ. ಏನು ಓದಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು.
ಮಧುಶ್ರೀ, ರಾಯಚೂರು
- ಕಳೆದ ವರ್ಷ ಪರೀಕ್ಷೆಯ ಪ್ರಶ್ನೆಗಳೇ ಬರಬಹುದೇ?
- ಹಿಂದಿನ ವರ್ಷಗಳ ಎಲ್ಲ ಪ್ರಶ್ನೆಪ್ರತ್ರಿಕೆಗಳನ್ನು ಅಭ್ಯಾಸ ಮಾಡಿ. ಇದರಿಂದ ಸ್ವಲ್ಪಮಟ್ಟಿಗೆ ನೆರವಾಗುತ್ತದೆ. ಆದರೆ ಇದೇ ಪ್ರಶ್ನೆಗಳು ಬರಬಹುದು ಎಂಬ ಭ್ರಮೆ ಬೇಡ.
ಸುಷ್ಮಾ, ಹುಬ್ಬಳ್ಳಿ
- ಚೆನ್ನಾಗಿ ಓದುತ್ತಿದ್ದರೂ ಪರೀಕ್ಷೆ ಬಗ್ಗೆ ಭಯವಾಗುತ್ತಿದೆಯಲ್ಲ?
- ಪೂರ್ವಭಾವಿ ಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆಯಂತೆ ಇದೂ ಒಂದು ಪರೀಕ್ಷೆಯಷ್ಟೆ. ವಿನಾಕಾರಣ ಭಯಪಡುವ ಅಗತ್ಯವಿಲ್ಲ.
ಸಮೀರ್, ಕೊಪ್ಪಳ
- 10 ಅಂಕದ ಪ್ರಶ್ನೆ 5 ಅಂಕದ ವಿಭಾಗದಲ್ಲೂ ಬರಬಹುದೇ?
- ಬರುವ ಸಾಧ್ಯತೆಯಿದೆ. ಆಗ 5 ಅಂಕಕ್ಕೆ ಬೇಕಾಗುವಷ್ಟು ಮಾತ್ರ ಬರೆದರೆ ಸಾಕು. 10 ಅಂಕಕ್ಕೆ ಸ್ವಲ್ಪ ದೀರ್ಘವಾಗಿ ಬರೆಯಬೇಕು.
ಅಜಯ್, ಬೆಂಗಳೂರು
- ಕನ್ನಡ ಪತ್ರಲೇಖನದಲ್ಲಿ ಮೊದಲು 'ಇವರಿಂದ' ಬಳಸಿ ನಂತರ 'ಇವರಿಗೆ' ಬಳಸುವ ವಿಧಾನವನ್ನು ಅನುಸರಿಸುವುದು ಸರಿಯೇ?
- ಪತ್ರದಲ್ಲಿ ಮೊದಲು 'ಇವರಿಂದ' ನಂತರ 'ಇವರಿಗೆ' ಬಳಸಲಾಗುತ್ತದೆ. ಆದರೆ ಇದು ಮೇಲೆ ಕೆಳಗಾದರೆ ಅಂಕ ಕಳೆಯುವುದಿಲ್ಲ.
- ತಮ್ಮನಿಗೆ ಅಣ್ಣನ ನೆರವು -
ತಮ್ಮನಿಗೆ ಇಂಗ್ಲಿಷ್ ಗ್ರಾಮರ್ ಕಷ್ಟವಾಗಿದೆ ಎಂದು ಕುಷ್ಟಗಿಯ ವೆಂಕಪ್ಪ ಸಮಸ್ಯೆ ಹೇಳಿಕೊಂಡರು. 1, 2 ಅಂಕದ ಪ್ರಶ್ನೆಗಳನ್ನು ಸುಲಭವಾಗಿ ಬರೆಯಬಹುದು. ಡೈರೆಕ್ಟ್, ಇಂಡೈರೆಕ್ಟ್ ಸ್ಪೀಚ್, ಪ್ಯಾಸೇಜ್ ಬಗ್ಗೆ ಒತ್ತು ನೀಡಿ ಎಂದು ತಜ್ಞರು ಸಲಹೆ ನೀಡಿದರು.
- ಸಮಸ್ಯೆ ಬಗೆಹರಿಸಿಕೊಂಡ ಪುನರಾವರ್ತಿತ ಅಭ್ಯರ್ಥಿ -
ಉತ್ತೀರ್ಣಗೊಂಡರೂ ಹೆಚ್ಚು ಅಂಕ ಗಳಿಸಲು ಮರಳಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡ ಪುನರಾವರ್ತಿತ ಅಭ್ಯರ್ಥಿ, ಮಂಗಳೂರಿನ ಸೌಮ್ಯ ಹಿಂದಿನ ಪಠ್ಯವೇ ಈ ಬಾರಿಯ ಪರೀಕ್ಷೆಯಲ್ಲಿ ಬರುತ್ತದೆಯೇ ಎಂದು ಪ್ರಶ್ನೆ ಮಾಡಿದರು. ''ಪಿಸಿಎಂಬಿಯಲ್ಲಿ ಶೇ.65 ರಷ್ಟು ಅಂಕ ಗಳಿಸಿದ್ದರೂ, ಹೆಚ್ಚು ಅಂಕ ಪಡೆಯಲು ಮರಳಿ ಪರೀಕ್ಷೆ ಬರೆದೆ. ಆದರೆ ಮೂರು ವಿಷಯಗಳಲ್ಲಿ ಅನುತ್ತೀರ್ಣಗೊಂಡೆ. ಈ ಬಾರಿ ಚೆನ್ನಾಗಿ ಓದಿ ಪರೀಕ್ಷೆ ಬರೆಯುತ್ತಿದ್ದೇನೆ. ಆದರೆ ಈ ವರ್ಷದ ಪ್ರಶ್ನೆಪತ್ರಿಕೆ ಹಳೆಯ ಪಠ್ಯವನ್ನೇ ಹೊಂದಿರುವ ಬಗ್ಗೆ ಅನುಮಾನವಿದೆ'' ಎಂದು ಸಮಸ್ಯೆ ತೋಡಿಕೊಂಡರು. ಎರಡು ವರ್ಷಗಳ ಹಿಂದೆ ಓದಿದ್ದ ಪಠ್ಯದ ಬಗ್ಗೆಯೇ ಈ ವರ್ಷದ ಪರೀಕ್ಷೆಯಲ್ಲಿ ಪ್ರಶ್ನೆಗಳಿರುತ್ತವೆ. ಕ್ವೆಶ್ಚನ್ ಬ್ಯಾಂಕ್, ಹ್ಯಾಂಡ್ಬುಕ್ ಓದುವುದರ ಜತೆಗೆ ಪಠ್ಯಪುಸ್ತವನ್ನು ಹೆಚ್ಚು ಓದಿ ಎಂದು ತಜ್ಞರು ಸಲಹೆ ನೀಡಿದರು.
ಬ್ಲೂಪ್ರಿಂಟ್ಟೇ ಫೈನಲ್ ಅಲ್ಲ!
ಚರ್ಚೆಯ ಹಾದಿಯಲ್ಲಿ ಮತ್ತೆ ಬಾಡಿಗೆ ತಾಯಿ
ಬಾಲಿವುಡ್ನ ಖ್ಯಾತ ನಿರ್ದೇಶಕ ಕರಣ್ ಜೋಹರ್(ಸಿಂಗಲ್ ಪೇರೆಂಟ್) ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ಅಪ್ಪನಾಗಿದ್ದಾರೆ. ಈ ಮೂಲಕ ಬಾಡಿಗೆ ತಾಯಿ ವಿಷಯ ಮತ್ತೆ ಚರ್ಚೆಗೊಳಗಾಗುತ್ತಿದೆ. ನಮ್ಮ ದೇಶದಲ್ಲಿ ಬಾಡಿಗೆ ತಾಯಿ ಎನ್ನುವುದು ಹೊಸದೇನಲ್ಲ. ಆದರೆ, ಬಾಲಿವುಡ್ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್(ಸಿಂಗಲ್ ಪೇರೆಂಟ್) ಬಾಡಿಗೆ ತಾಯಿಯ ಮೂಲಕ ತಾನು 'ಅವಳಿ ಮಕ್ಕಳ ಅಪ್ಪ'ನಾದೆ ಎಂದು ಘೋಷಿಸಿಕೊಂಡ ಬಳಿಕ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ. ಸರೊಗಸಿ ಅಥವಾ ಬಾಡಿಗೆ ತಾಯಿ ಎಂಬ ವಿಷಯ ಮೇಲ್ನೋಟಕ್ಕೆ ಕಾಣುವಂತೆ ತೀರಾ ಸರಳ ಸಮಸ್ಯೆ ಅಲ್ಲ. ಅಂತರ್ಗತವಾಗಿ ಅನೇಕ ಪ್ರಶ್ನೆಗಳನ್ನು ಇದು ಹುಟ್ಟು ಹಾಕುತ್ತದೆ. ಬಾಡಿಗೆ ತಾಯಿ ಎಂಬ ಕಲ್ಪನೆಯನ್ನು ಒಂದೇ ದೃಷ್ಟಿಕೋನದಿಂದ ನೋಡಿದರೆ, ತೆಳುವಾದ ವಿಶ್ಲೇಷಣೆ ಮಾತ್ರ ಸಾಧ್ಯವಾಗುತ್ತದೆ. ನಮ್ಮ ದೇಶದ ದೃಷ್ಟಿಯಿಂದ ನೋಡಿದರೆ, ಸರೊಗಸಿಯನ್ನು ತಡೆಯುವಂಥ ಬಲವಾದ ಕಾನೂನು ಇನ್ನೂ ಜಾರಿಯಾಗಿಲ್ಲ. ಪರಹಿತ ಬಾಡಿಗೆ ತಾಯಿಗೆ ಮಾತ್ರ ಅವಕಾಶ ಕಲ್ಪಿಸುವ ವಿಧೇಯಕವನ್ನು ಸರಕಾರ ಈಗಾಗಲೇ ಸಂಸತ್ತಿನಲ್ಲಿ ಮಂಡಿಸಿದ್ದು, ಇನ್ನೂ ಒಪ್ಪಿಗೆ ದೊರೆಯಬೇಕಿದೆ. - ಬಾಡಿಗೆ ತಾಯಿ ಎಂದರೇನು?- ಮತ್ತೊಬ್ಬರ ಮಗುವನ್ನು ಯಾರು ತಮ್ಮ ಗರ್ಭದೊಳಗಿಟ್ಟುಕೊಂಡು ಜನನ ನೀಡುತ್ತಾರೋ ಅವರಿಗೆ ಬಾಡಿಗೆ ತಾಯಿ ಎನ್ನುತ್ತಾರೆ. ಐವಿಎಫ್ನಂಥ ವೈದ್ಯಕೀಯ ತಂತ್ರಗಳ ಮೂಲಕ ಆಕೆ ಗರ್ಭ ಧರಿಸುತ್ತಾಳೆ. ಮಗುವಿಗೆ ಜನ್ಮ ನೀಡುವವರೆಗೆ ಅದನ್ನು ಪೋಷಿಸುತ್ತಾಳೆ. ಹೆರಿಗೆ ಆದ ಬಳಿಕ ಮಗುವನ್ನು ಈ ಮೊದಲೇ ಉದ್ದೇಶಿಸಿದ ದಂಪತಿಗೆ ಹಸ್ತಾಂತರಿಸುತ್ತಾಳೆ. ಪರಹಿತ ಬಾಡಿಗೆ ತಾಯಿ ಈ ಪ್ರಕ್ರಿಯೆಯಲ್ಲಿ ಬಾಡಿಗೆ ತಾಯಿಯಾಗುವವಳು ಯಾವುದೇ ರೀತಿಯ ಶುಲ್ಕ, ಹಣ, ಗೌರವಧನ ಅಥವಾ ಇನ್ನಿತರ ಯಾವುದೇ ರೀತಿಯ ಸಹಾಯವನ್ನು ಪಡೆದುಕೊಳ್ಳುವುದಿಲ್ಲ. ಆದರೆ, ವೈದ್ಯಕೀಯ ವೆಚ್ಚ ಮಾತ್ರ ಪಾವತಿಸಬೇಕಾಗುತ್ತದೆ. ಅಲ್ಲದೆ, ಬಾಡಿಗೆ ತಾಯಿಗೆ ವಿಮೆ ಒದಗಿಸಬೇಕಾಗುತ್ತದೆ. - ಐವಿಎಫ್ ಸರೊಗಸಿ ಎಂದರೇನು? - ಇದನ್ನು ಗರ್ಭಧಾರಣೆ ಬಾಡಿಗೆ ತಾಯ್ತನ ಎಂದೂ ಕರೆಯಬಹುದು. ಈ ರೀತಿ ಮಾಡಲು ಇನ್ ವಿಟ್ರೊ ಫರ್ಟಿಲೈಜೇಷನ್(IVF) ತಂತ್ರ ಅನುಸರಿಸಲಾಗುತ್ತದೆ. ತಾಯಿಯ ಅಂಡಾಣು ಪಡೆದು, ಅದನ್ನು ತಂದೆಯ ವೀರ್ಯಾಣು ಜತೆ ಫಲವಂತಿಕೆ ಮಾಡಲಾಗುತ್ತದೆ. ಬಳಿಕ ಅದನ್ನು ಬಾಡಿಗೆ ತಾಯಿಯ ಗರ್ಭಕ್ಕೆ ಸೇರಿಸಲಾಗುತ್ತದೆ. ಅದನ್ನು ಆಕೆ ಜನನ ನೀಡುವರೆಗೆ ಗರ್ಭದಲ್ಲಿ ಪೋಷಿಸುತ್ತಾಳೆ. - ವಾಣಿಜ್ಯೋದ್ದೇಶ ಸರೊಗಸಿ ಎಂದರೇನು? - ಇದೊಂದು ವಿವಾದಾತ್ಮಕವಾಗಿ ವಿಷಯವಾಗಿದ್ದು, ಇದು ಹಣದಾಸಗೆ ಬಾಡಿಗೆ ತಾಯಿಯಾಗುವುದು. ಇದೊಂದು ವಿವಾದಾತ್ಮಕ ವಿಷಯವಾಗಿದ್ದು, ಎಲ್ಲೆಡೆ ವಿರೋಧಿಸಲಾಗುತ್ತಿದೆ. ಹಾಗೆಯೇ, ಒಂದು ವ್ಯಾಖ್ಯೆಯ ಚೌಕಟ್ಟಿನಲ್ಲಿ ಈ ವಾಣಿಜ್ಯೋದ್ದೇಶ ಬಾಡಿಗೆ ತಾಯಿ ಕಲ್ಪನೆಯನ್ನು ಬಂಧಿಸಿಡುವುದು ಕಷ್ಟ. ಆದರೆ, ಸಾಮಾನ್ಯವಾಗಿ, ಬಾಡಿಗೆ ತಾಯಿಯಾದವಳು ವೈದ್ಯಕೀಯ ವೆಚ್ಚ ಮತ್ತು ಗೌರವಧನದ ಹೊರತಾಗಿಯೂ ಹಣವನ್ನು ಪಡೆಯುವುದನ್ನು ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನ ಎಂದು ಹೇಳಬಹುದು. -ವಿಧೇಯಕ ಏನು ಹೇಳುತ್ತದೆ?- - ಸರೊಗಸಿ ಕ್ಲಿನಿಕ್ಗಳ ಮೇಲೆ ನಿಯಂತ್ರಣ - ಕಾಯ್ದೆಯನ್ವಯ ನೋಂದಣಿ ಮಾಡಿಕೊಂಡ ಕ್ಲಿನಿಕ್ ಮಾತ್ರ ಬಾಡಿಗೆ ತಾಯ್ತನದ ಚಟುವಟಿಕೆ ನಡೆಸಬಹುದು. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅರ್ಹವಾಗಿರುತ್ತದೆ. - ಸರೊಗಸಿ ಕ್ಲಿನಿಕ್ಗಳ ಮಕ್ಕಳ, ಸ್ತ್ರೀರೋಗ ತಜ್ಞರು, ಮಾನವ ಭ್ರೂಣಶಾಸ್ತ್ರ ತಜ್ಞರು ಯಾವುದೇ ರೀತಿಯಲ್ಲಿ ವಾಣಿಜ್ಯ ಉದ್ದೇಶ ಬಾಡಿಗೆ ತಾಯ್ತನಕ್ಕೆ ಸಹಾಯ ಮಾಡುವಂತಿಲ್ಲ. - ಸರೊಗಸಿ ಕ್ಲಿನಿಕ್ಗಳು ಕನಿಷ್ಠ 25 ವರ್ಷಗಳ ದಾಖಲೆಗಳನ್ನು ಮೇಂಟೇನ್ ಮಾಡಬೇಕು. - ಬಾಡಿಗೆ ತಾಯ್ತನಕ್ಕೆ ಯಾವಾಗ ಅವಕಾಶ?- - ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯಲು ಇಚ್ಛಿಸುವ ದಂಪತಿಗೆ ಮದ್ವೆಯಾಗಿ ಕನಿಷ್ಠ 5 ವರ್ಷವಾಗಿರಬೇಕು ಮತ್ತು ಭಾರತೀಯ ನಾಗರಿಕರಾಗಿರಬೇಕು. - ದಂಪತಿ ಪೈಕಿ ಒಬ್ಬರು ಅಥವಾ ಇಬ್ಬರೂ ಬಂಜೆತನ ಸಮಸ್ಯೆಯನ್ನು ಹೊಂದಿರಬೇಕು. - ಆಗ ಮಾತ್ರ ಕೇವಲ ಪರಹಿತ ಬಾಡಿಗೆ ತಾಯ್ತನಕ್ಕೆ ಅವಕಾಶವಿದೆ. - ಸರೊಗಸಿ ಯಾವುದೇ ರೀತಿಯ ವಾಣಿಜ್ಯ ಉದ್ದೇಶಕ್ಕೆ ಮಾಡಬಾರದು - ಯಾರಿಗೆ ಮಗು ಬೇಕಿದೆಯೋ ಅವರ ಹತ್ತಿರದ ಸಂಬಂಧಿಯೇ ಬಾಡಿಗೆ ತಾಯಿಯಾಗಲು ಒಪ್ಪಬೇಕು. ಬೇರೆಯವರಿಗೆ ಅವಕಾಶವಿಲ್ಲ. - ಯಾವುದೇ ಮಹಿಳೆ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸರೊಗಸಿ ಮದರ್ ಆಗಬಹುದು. ಒಂದಕ್ಕಿಂತ ಹೆಚ್ಚು ಬಾರಿಯಾಗುವಂತಿಲ್ಲ. - ಮಕ್ಕಳನ್ನು ಪಡೆಯುವ ಉದ್ದೇಶ ಹೊಂದಿರುವ ದಂಪತಿಯ ವಯಸ್ಸು 23ರಿಂದ 50ರೊಳಗಿರಬೇಕು. - ಬಾಡಿಗೆ ತಾಯಿಯ ಮೂಲಕ ಮಕ್ಕಳು ಹೊಂದುವ ದಂಪತಿಗೆ ಈ ಮೊದಲು ಯಾವುದೇ ಸ್ವಂತ ಮಕ್ಕಳು ಅಥವಾ ದತ್ತು ಮಕ್ಕಳು ಇರಬಾರದು. ಆದರೆ, ಸ್ವಂತ ಮಗು ಮಾನಸಿಕ ಅಥವಾ ದೈಹಿಕವಾಗಿ ಊನರಾಗಿದ್ದರೆ ಅಥವಾ ಮಾರಣಾಂತಿಕ ಅಸ್ವಸ್ಥತೆ ಅಥವಾ ಮಾರಕ ಕಾಯಿಲೆಗೆ ತುತ್ತಾಗಿದ್ದರೆ ಮಾತ್ರ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು. - ಬಾಡಿಗೆ ತಾಯಿ ಮೂಲಕ ಮಗು ಹೊಂದಿದ ದಂಪತಿ ಯಾವುದೇ ಪರಿಸ್ಥಿತಿಯಲ್ಲೂ ಆ ಮಗುವನ್ನು ತ್ಯಜಿಸುವಂತಿಲ್ಲ. - ಮಕ್ಕಳ ಮಾರಾಟಕ್ಕೆ, ವೇಶ್ಯಾವಾಟಿಕೆಗೆ ಅಥವಾ ಇನ್ನಾವುದೇ ಶೋಷಣೆಯ ಉದ್ದೇಶಕ್ಕೆ ಬಾಡಿಗೆ ತಾಯ್ತತನಕ್ಕೆ ಅವಕಾಶವಿಲ್ಲ. - ಉದ್ದೇಶಿತ ಕಾಯ್ದೆ ಅನುಷ್ಠಾನಕ್ಕೆ ರಾಷ್ಟ್ರೀಯ ಸರೊಗಸಿ ಮತ್ತು ರಾಜ್ಯ ಸರೊಗಸಿ ಮಂಡಳಿ ರಚನೆ ಮಾಡುವುದು. - ಇದಕ್ಕೆ ಸಂಬಂಧಿಸಿದ ಅನೇಕ ಕಾರ್ಯಗಳ ನಿರ್ವಹಣೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಬಳಸಿಕೊಳ್ಳುವುದು. ಧಿ- ಅಪರಾಧ ಮತ್ತು ದಂಡ- - ಸರೊಗಸಿ ಮಗು ತ್ಯಜಿಸುವುದು, ವಾಣಿಜ್ಯ ಉದ್ದೇಶದ ಸರೊಗಸಿ, ಬಾಡಿಗೆ ತಾಯಿಯ ಶೋಷಣೆ, ಮಾನವ ಭ್ರೂಣ ಮಾರಾಟ ಅಥವಾ ಭ್ರೂಣ ಆಮದು ಮಾಡಿಕೊಂಡರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಕೃತ್ಯಕ್ಕಾಗಿ ಕನಿಷ್ಠ 10 ವರ್ಷ ಜೈಲು ಶಿಕ್ಷೆ ಮ್ತತು 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ. - ವಿಧೇಯಕದ ಇನ್ನಿತರ ಯಾವುದೇ ವಿಧಿಯನ್ನು ಉಲ್ಲಂಘಿಸಿದರೆ ಅದು ಶಿಕ್ಷಾರ್ಹ ಅಪರಾಧ ಮತ್ತು ಕನಿಷ್ಠ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಅಲ್ಲದೆ, 10 ಲಕ್ಷ ರೂ.ವರೆಗೆ ದಂಡ ಹಾಕಬಹುದು. - ವಿಧೇಯಕ ಯಾವ ಸ್ಥಿತಿಯಲ್ಲಿದೆ? - ಕೇಂದ್ರ ಸರಕಾರ ಬಾಡಿಗೆ ತಾಯಿಗೆ ಸಂಬಂಧಿಸಿದಂತೆ ಕೆಲವು ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಈ ಸಂಬಂಧ ಕಾನೂನು ಕೂಡ ಜಾರಿ ಮಾಡಲು ಹೊರಟಿದ್ದು, ಉದ್ದೇಶಿತ ಸರೊಗಸಿ(ನಿಯಂತ್ರಣ) ವಿಧೇಯಕವನ್ನು 2016ರ ನವೆಂಬರ್ನಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಲೋಕಸಭೆಯಲ್ಲಿ ಮಂಡಿಸಿದ್ದರು. ರಾಜ್ಯಸಭೆಯ ಚೇರ್ಮನ್ ಅವರು ವಿಧೇಯಕವನ್ನು ಸಂಸದೀಯ ಆರೋಗ್ಯ ಸ್ಥಾಯಿ ಸಮಿತಿಗೆ ಒಪ್ಪಿಸಿದ್ದಾರೆ. ಬಾಡಿಗೆ ತಾಯಿ- ಬೇರೆ ರಾಷ್ಟ್ರಗಳಲ್ಲಿ ಹೇಗಿದೆ? - ಆಸ್ಪ್ರೇಲಿಯಾ ಮಕ್ಕಳನ್ನು ಪಡೆಯುವ ದಂಪತಿಗೆ, ತೀರಾ ಹತ್ತಿರದ ಸ್ನೇಹಿತರು ಮತ್ತು ಸಂಬಂಧಿಕರು ಮಾತ್ರ ಪರಹಿತ ಬಾಡಿಗೆ ತಾಯಿಯಾಗಬಹುದು. - ಚೀನಾ ಎಲ್ಲಿ ಮಾದರಿಯ ಬಾಡಿಗೆ ತಾಯಿ ಚಟುವಟಿಕೆ ಮೇಲೆ ನಿಷೇಧವಿದೆ -ಬ್ರಿಟನ್ ರಕ್ತಸಂಬಂಧಿಗಳಲ್ಲಿ ಬಾಡಿಗೆ ತಾಯ್ತನಕ್ಕೆ ಅವಕಾಶ - ಅಮೆರಿಕ ಅಮೆರಿಕದ ಕೆಲವು ರಾಜ್ಯಗಳಲ್ಲಿ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನಕ್ಕೆ ಅವಕಾಶವಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಯಾವುದೇ ರೀತಿಯ ಬಾಡಿಗೆ ತಾಯಿ ಚಟುವಟಿಕೆಗೆ ಅವಕಾಶವಿಲ್ಲ. -ಭಾರತ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನದ ಮೇಲೆ ನಿಷೇಧ ಹೇರಲಾಗುತ್ತಿದೆ. ತೀರಾ ಹತ್ತಿರದ ಸಂಬಂಧಿಗಳ ಮೂಲಕ ಬಾಡಿಗೆ ತಾಯ್ತನಕ್ಕೆ ಮಾನ್ಯತೆ ನೀಡುವ ಉದ್ದೇಶವಿದೆ. - 12 ರಾಷ್ಟ್ರಗಳಲ್ಲಿ ಎಲ್ಲ ಮಾದರಿಯ ಬಾಡಿಗೆ ತಾಯಿ ಚಟುವಟಿಕೆ ಮೇಲೆ ನಿಷೇಧವಿದೆ - 20 ರಾಷ್ಟ್ರಗಳಲ್ಲಿ ಕೇವಲ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನದ ಮೇಲೆ ನಿಷೇಧ ಹೇರಲಾಗಿದೆ. - 10 ರಾಷ್ಟ್ರಗಳಲ್ಲಿ ಪರಹಿತ ಸರೊಗಸಿಗೆ ಅವಕಾಶವಿದೆ. - 5ಕ್ಕಿಂತ ಕಡಿಮೆ ರಾಷ್ಟ್ರಗಳಲ್ಲಿ ವಾಣಿಜ್ಯ ಉದ್ದೇಶದ ಬಾಡಿಗೆ ತಾಯಿಗೆ ಕಾನೂನು ಮಾನ್ಯತೆ ಇದೆ. -ಭಾರತದಲ್ಲಿ ಬಂಜೆತನ ಸಮಸ್ಯೆ- - ಮದುವೆಯಾದ ಒಟ್ಟು ದಂಪತಿಗಳಲ್ಲಿ ಶೇ.10ರಿಂದ 15ರಷ್ಟು ದಂಪತಿ ಬಂಜೆತನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಪೈಕಿ ಕೇವಲ ಶೇ.1ರಷ್ಟು ಜನರು ಮಾತ್ರ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಾರೆ. 2020ರ ಹೊತ್ತಿಗೆ ಭಾರತದ ಐವಿಎಫ್ ಮಾರುಕಟ್ಟೆ ಶೇ.20ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. - 2012ರಲ್ಲಿ ಭಾರತದ ಸರೊಗಸಿ ಉದ್ಯಮ 40 ಕೋಟಿ ಡಾಲರ್ಗಿಂತಲೂ ಹೆಚ್ಚಿನ ವಹಿವಾಟು ನಡೆಸಿದೆ. - ಬಾಡಿಗೆ ತಾಯಿಯಾಗುವುದರ ಮೂಲಕ ಬಡ ಹೆಣ್ಣು ಮಕ್ಕಳು ತಾವು 10 ವರ್ಷದವರೆಗೆ ದುಡಿದು ಗಳಿಸುವ ಹಣವನ್ನು ಒಮ್ಮೆಗೆ ಪಡೆಯುತ್ತಿದ್ದಾರೆ. - ಆದರೆ, ಬಹುತೇಕ ಪ್ರಕರಣಗಳಲ್ಲಿ ಬಾಡಿಗೆ ತಾಯಿಯಾಗಲು ಒಪ್ಪುವ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು ಮತ್ತು ಸಂಶೋಧಕರು. - ಅಂದಾಜು 10 ಲಕ್ಷ ರೂಪಾಯಿಯನ್ನು ಬಾಡಿಗೆ ತಾಯಿ ಮೂಲಕ ಮಕ್ಕಳ ಪಡೆಯಲು ದಂಪತಿ ಖರ್ಚು ಮಾಡುತ್ತಾರೆ. -ಇತರ ನಟರು- - ತುಷಾರ್ ಕಪೂರ್(ಸಿಂಗಲ್ ಪೇರೆಂಟ್)- ಲಕ್ಷ ್ಯ- 2016 - ಶಾರುಖ್ ಖಾನ್ ಮತ್ತು ಗೌರಿ ಖಾನ್- ಅಬ್ರಾಮ್- 2013 - ಅಮೀರ್ ಖಾನ್ ಮತ್ತು ಕಿರಣ್ ರಾವ್- ಆಜಾದ್ ರಾವ್ ಖಾನ್- 2011 - ಸೊಹೇಲ್ ಖಾನ್ ಮತ್ತು ಸೀಮಾ ಖಾನ್- ಯೊಹಾನ್ -2011
ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗೆ ಬಾಡಿಗೆ ತಾಯಿ ಎನ್ನುವುದು ನಿಜವಾಗಲೂ ವರ. ಆದರೆ, ಬಾಡಿಗೆ ತಾಯ್ತತನ ಉದ್ಯಮವಾಗಿ ಬೆಳೆಯುತ್ತಿರುವಾಗ ಅದರ ಸಾಧಕ ಬಾಧಕಗಳು ಎಲ್ಲರನ್ನೂ ಕಾಡುತ್ತಿವೆ. ನೈತಿಕವಾಗಿ ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಕಾನೂನು ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ.
ಖ್ಯಾತ ನಟ ಜೀತೆಂದ್ರ ಅವರ ಪುತ್ರ ಹಾಗೂ ನಟ ತುಷಾರ್ ಕಪೂರ್ ಕೂಡ ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಅಪ್ಪನಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಇನ್ನೂ ಹಿಂದೆ ಹೋದರೆ, ಶಾರುಕ್ ಖಾನ್ ಮತ್ತು ಆಮೀರ್ ಖಾನ್ ಕೂಡ ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆದಿದ್ದಾರೆ.
'ಹೈ ಸೊಸೈಟಿ' ಎಂದು ಕರೆಯಿಸಿಕೊಳ್ಳುವ ಭಾರತದ ಒಂದು ವರ್ಗ ಹೀಗೆ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯುವುದು ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ. ಅನೇಕ ಭಾರಿ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಬಾಡಿಗೆ ತಾಯಿ ಹೆಸರಲ್ಲಿ ಬಡ ಹೆಣ್ಣು ಮಕ್ಕಳನ್ನು ಶೋಷಣೆ ಮಾಡಲಾಗುತ್ತಿದೆ ಮತ್ತು ಇದು ನಮ್ಮ ಸಂಸ್ಕೃತಿಗೆ ವಿರೋಧ ಎಂಬ ವಾದಗಳು ಹುಟ್ಟಿಕೊಂಡಿವೆ. ಆದರೆ, ಇದಕ್ಕೆ ಪ್ರತಿಯಾಗಿ ಬಂಜೆ ಸಮಸ್ಯೆ ಎದುರಿಸುತ್ತಿರುವ ಎಷ್ಟೋ ದಂಪತಿಗೆ ಮಕ್ಕಳನ್ನು ಪಡೆಯಲು ಇರುವ ಅತ್ಯುತ್ತಮ ಮಾರ್ಗ ಎಂದು ವಾದಿಸಲಾಗುತ್ತದೆ.
ಬಾಡಿಗೆ ತಾಯಿ ಹುಟ್ಟು ಹಾಕುವ ಸಮಸ್ಯೆಗಳು ಅನೇಕ. ನೈತಿಕತೆ, ಸಂಸ್ಕೃತಿಯ ಪಲ್ಲಟ, ಬಡ ಹೆಣ್ಣುಮಕ್ಕಳ ಶೋಷಣೆ, ಇದನ್ನೇ ಒಂದು ಉದ್ಯಮವಾಗಿ ನಡೆಸುವ ಹುನ್ನಾರ ಸೇರಿದಂತೆ ಅನೇಕ ಅಗೋಚರ ಸಂಗತಿಗಳಿವೆ. ವಿಶ್ವದಾದ್ಯಂತ ಈ ಸರಗೊಸಿ ಮದರ್ ಕಲ್ಪನೆಗೆ ವಿರೋಧವಿದೆ. ಬಹಳಷ್ಟು ರಾಷ್ಟ್ರಗಳು ವಾಣಿಜ್ಯ ಉದ್ದೇಶದ ಸರೊಗಸಿಯನ್ನು ನಿಷೇಧಿಸಿವೆ. ಕೆಲವೊಂದು ರಾಷ್ಟ್ರಗಳಂತೂ ಯಾವುದೇ ಮಾದರಿಯ ಸರೊಗಸಿಗೆ ಅವಕಾಶ ಕಲ್ಪಿಸುವುದಿಲ್ಲ ಬೆರಳೆಣಿಕೆಯಷ್ಟು ರಾಷ್ಟ್ರಗಳ ಮಾತ್ರ ಎಲ್ಲ ಮಾದರಿಯ ಸರೊಗಸಿಗೆ ಅವಕಾಶ ಕಲ್ಪಿಸಿವೆ.
ಒಂದೊಮ್ಮೆ ಈ ವಿಧೇಯಕ ಕಾನೂನಾಗಿ ಜಾರಿಯಾದರೆ, ವಾಣಿಜ್ಯ ಉದ್ದೇಶದ ಬಾಡಿಗೆ ತಾಯಿ ಪ್ರಕ್ರಿಯೆ ಸಂಪೂರ್ಣವಾಗಿ ನಿಷೇಧಕ್ಕೊಳಗಾಗಲಿದೆ. ಅಲ್ಲದೆ, ಯಾರು ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯಲು ಬಯುಸುತ್ತಾರೋ ಅವರು ತಮ್ಮ ತೀರಾ ಹತ್ತಿರದ ಸಂಬಂಧಿಗಳಲ್ಲೇ ಬಾಡಿಗೆ ತಾಯಿಯನ್ನು ಹುಡುಕಿಕೊಳ್ಳಬೇಕಾಗುತ್ತದೆ. ಇದರಿಂದ ಶೋಷಣೆ ತಪ್ಪುವುದಲ್ಲದೆ, ಆಚಾರ-ವಿಚಾರಗಳಲ್ಲೂ ಏರುಪೇರು ಆಗಲ್ಲ ಎಂಬ ವಿಶ್ವಾಸವಿದೆ.
ಭಯ ಬಿಟ್ಟು ಪರೀಕ್ಷೆ ಬರೆಯಿರಿ
ದ್ವಿತಿಯ ಪಿಯು ವಿದ್ಯಾರ್ಥಿಗಳಿಗೆ ಉಪಯುಕ್ತ ಟಿಫ್ಸ್ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮಾರ್ಚ್ 9ರಿಂದ ಆರಂಭವಾಗಲಿರುವ ಪರೀಕ್ಷೆ 27ಕ್ಕೆ ಕೊನೆಗೊಳ್ಳಲಿದೆ. ಕಳೆದ ವರ್ಷ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆಯಾಗಿ ವಿದ್ಯಾರ್ಥಿಗಳು ಮೂರನೇ ಬಾರಿ ಪರೀಕ್ಷೆ ಬರೆಯುವಂತಾಗಿತ್ತು. ಧಿ- ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ನಿಮ್ಮ ಬಗ್ಗೆ ನಿಮಗೆ ನಂಬಿಕೆಯಿರಲಿ. ಒಳ್ಳೆಯ ವಿಷಯಗಳು, ಅಂಶಗಳ ಬಗ್ಗೆ ಹೆಚ್ಚು ಗಮನ ಕೊಡಿ. ಪರೀಕ್ಷಾ ಅವಧಿಯಲ್ಲಿ ವಿಷಯಗಳಿಗೆ ಸಂಬಂಧಿಸಿದಂತೆ ಓದು ಮತ್ತು ಬರವಣಿಗೆಯಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಿ. - ಪರೀಕ್ಷಾ ಪೂರ್ವ ಹಾಗೂ ಪರೀಕ್ಷೆ ಸಂದರ್ಭದಲ್ಲಿ ಸಮಯ ಪಾಲನೆ ಅತ್ಯಗತ್ಯ. ಸೋಲಿನಿಂದ ಪಾಠ ಕಲಿಯಬೇಕು. ಅವಶ್ಯ ಬಿದ್ದರೆ ತಜ್ಞರಿಂದ ಸೂಕ್ತ ಸಲಹೆ ಪಡೆಯಿರಿ. ಪರೀಕ್ಷೆಪೂರ್ವ ಹಾಗೂ ಪರೀಕ್ಷೆಯಲ್ಲಿ ಉತ್ತರಿಸುವಾಗ ಯೋಜನಾಬದ್ಧ ಕಲಿಕಾ ಪದ್ಧತಿ ಕಲಿಕೆ, ಗ್ರಹಿಕೆ ಮತ್ತು ಉತ್ತರಿಸುವಿಕೆ ಅತ್ಯಗತ್ಯ. ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಾರ್ಥನೆ, ಯೋಗ, ಧ್ಯಾನ, ಪ್ರಾಣಾಯಾಮ ಇತ್ಯಾದಿ ರೂಢಿಸಿಕೊಳ್ಳಿ. - ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆದ ನಂತರ ಅದರಲ್ಲಿ ಹೆಸರು, ತಾಯಿಯ ಹೆಸರು, ರಿಜಿಸ್ಟರ್ ನಂಬರ್, ಪರೀಕ್ಷಾ ಕೇಂದ್ರದ ಹೆಸರು, ವಿಳಾಸ (ಅತ್ಯಂತ ಮುಖ್ಯ), ವೇಳಾಪಟ್ಟಿ, ಆಯ್ಕೆ ಮಾಡಿಕೊಂಡಿರುವ ವಿಷಯಗಳು ಹಾಗೂ ಪರೀಕ್ಷಾ ದಿನಾಂಕಗಳನ್ನು ತಪ್ಪದೆ ಪರಿಶೀಲಿಸಿಕೊಳ್ಳಿ. ಪ್ರವೇಶಪತ್ರವನ್ನು ಲ್ಯಾಮಿನೇಷನ್ ಮಾಡಿಸಬಾರದು. ಪ್ರತಿ ದಿನ ಪ್ರವೇಶ ಪತ್ರ ಹಾಗೂ ಕಾಲೇಜಿನಿಂದ ನೀಡಿರುವ ಐಡಿ ಕಾರ್ಡ್ ತೆಗೆದುಕೊಂಡು ಹೋಗಬೇಕು. - ಪರೀಕ್ಷಾ ದಿನದಂದು ಕನಿಷ್ಠ ಅರ್ಧ ಗಂಟೆ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಕೊಠಡಿ ನಿಯೋಜನೆ (ಕೊಠಡಿ ಸಂಖ್ಯೆ, ಮಹಡಿ ಇತ್ಯಾದಿ) ಸರಿಯಾಗಿ ನೋಡಿಕೊಳ್ಳಿ. ಪ್ರತಿ ದಿನ ಪರೀಕ್ಷಾ ಕೊಠಡಿ ಸಂಖ್ಯೆ ಹಾಗೂ ಕೊಠಡಿ ಬದಲಾಗುವ ಸಾಧ್ಯತೆಯಿದೆ. - ಪರೀಕ್ಷಾ ಕೊಠಡಿಗೆ ಹೋಗುವುದಕ್ಕಿಂತ ಮುನ್ನ ಪೆನ್ನು, ಪೆನ್ಸಿಲ್, ಸ್ಕೇಲ್, ಜಾಮಿಟ್ರಿ ಬಾಕ್ಸ್ನ ಅವಶ್ಯಕ ಸಾಮಗ್ರಿಗಳನ್ನು ಹೊರತುಪಡಿಸಿ ಇನ್ನಾವುದೇ ಚೀಟಿ, ನೋಟ್ಸ್, ಎಲೆಕ್ಟ್ರಾನಿಕ್ ಸಾಮಗ್ರಿ, ಸ್ಮಾರ್ಟ್ ವಾಚ್ ಇತ್ಯಾದಿಯನ್ನು ತೆಗೆದುಕೊಂಡು ಹೋಗಬಾರದು. ಇಲಾಖೆ ಅನುಮತಿ ನೀಡಿರುವ ವಿಷಯಗಳಿಗೆ ಮಾತ್ರ ಕ್ಯಾಲ್ಕುಲೇಟರ್ ಬಳಸಿ. ಮ್ಯಾಥಮೆಟಿಕಲ್ ಟೇಬಲ್(ಲಾಗ್ ಬುಕ್), ಗ್ರಾಫ್ ಶೀಟುಗಳನ್ನು ಪರೀಕ್ಷಾ ಕೇಂದ್ರದವರೇ ನೀಡುತ್ತಾರೆ. - ಪರೀಕ್ಷಾಪೂರ್ವದಲ್ಲಿ ಪ್ರಶ್ನೆ ಪತ್ರಿಕೆ ಸಿಗುತ್ತದೆ! ಪೇಪರ್ ಲೀಕಾಗಿದೆ! ಎಂಬಂಥ ಊಹಾಪೋಹಗಳಿಗೆ ಕಿವಿಗೊಡಬೇಡಿ. ಎಸ್ಎಂಎಸ್ ಮೂಲಕ ಪ್ರಶ್ನೆ ಪತ್ರಿಕೆ ಪಡೆಯುವ ಅಥವಾ ಇತರೆಡೆ ಮಾರಾಟವಾಗುತ್ತಿದೆ ಎಂದು ಹುಡುಕುವ ಪ್ರಯತ್ನ ಮಾಡಬೇಡಿ. ಏಕೆಂದರೆ, ಕಳೆದ ವರ್ಷ ಈ ರೀತಿ ಪ್ರಯತ್ನ ನಡೆಸಿದವರನ್ನೆಲ್ಲಾ ಸಿಐಡಿ ತನಿಖೆಗೊಳಪಡಿಸಿದೆ. - ಪ್ರಶ್ನೆ ಪತ್ರಿಕೆಯನ್ನು ಓದಿ, ಅರ್ಥ ಮಾಡಿಕೊಂಡು ಉತ್ತರ ಬರೆಯುವ ಸಿದ್ಧತೆಗೆ 15 ನಿಮಿಷ ನೀಡಲಾಗುತ್ತದೆ. ವಿದ್ಯಾರ್ಥಿಗಳು ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪ್ರಶ್ನೆ ಓದಿದ ನಂತರ ಸರಿಯಾಗಿ ಹಾಗೂ ಪೂರ್ಣವಾಗಿ ಗೊತ್ತಿರುವ ಉತ್ತರಗಳು, ಸ್ವಲ್ಪ ಮಟ್ಟಿಗೆ ಗೊತ್ತಿರುವ ಉತ್ತರಗಳು, ಯೋಚಿಸಿ ಜ್ಞಾಪಿಸಿಕೊಂಡು ಬರೆಯಬೇಕಾಗಿರುವ ಉತ್ತರಗಳು, ಗೊತ್ತಿಲ್ಲದ ಉತ್ತರಗಳು ಎಂದು ಉತ್ತರಗಳನ್ನು ಕಣ್ಣು ಮುಚ್ಚಿ ಮನಸ್ಸಿನಲ್ಲಿ ಚಿತ್ರೀಕರಿಸಿ, ವರ್ಗೀಕರಿಸಿಕೊಂಡು ಆನಂತರ ಉತ್ತರ ಪತ್ರಿಕೆ ನೀಡಿದ ಮೇಲೆ ಸರಿಯಾಗಿ ಉತ್ತರಿಸುವುದು ಉತ್ತಮ ಪದ್ಧತಿ. - ಪರೀಕ್ಷೆಯಲ್ಲಿ ಬರೆಯುವಾಗ ಪೆನ್ ಬದಲಾಯಿಸಿದರೆ ಕೂಡಲೇ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತಂದು ಅವರ ಸಹಿ ಪಡೆಯಬೇಕು. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ನೀಡುವ ಸೂಚನೆಗಳನ್ನು ಪಾಲಿಸಿ. ಕುಳಿತಿರುವ ಬೆಂಚ್/ ಡೆಸ್ಕ್ ಚೆಕ್ ಮಾಡಿಕೊಳ್ಳಿ. ಅಕ್ಕಪಕ್ಕ ಹಾಗೂ ಹಿಂದೆ ಮುಂದೆ ಕುಳಿತಿರುವ ವಿದ್ಯಾರ್ಥಿಗಳ ಬಗ್ಗೆ ಎಚ್ಚರವಿರಲಿ. - ಪರೀಕ್ಷೆ ನಡೆಯುವ ದಿನಗಳಲ್ಲಿ ನಿಮ್ಮ ಮನಃಸ್ಥಿತಿ, ಆಹಾರ ಪದ್ಧತಿ (ಮಿತ ಆಹಾರ) ಬಗ್ಗೆ ಗಮನವಿರಲಿ. ದಿನನಿತ್ಯದ ಆಹಾರ ಪದ್ಧತಿಯನ್ನೇ ಮುಂದುವರೆಸಿ. ಪರೀಕ್ಷಾ ಸಿದ್ಧತೆ ಹಾಗೂ ಪರೀಕ್ಷಾ ಸಂದರ್ಭದಲ್ಲಿ ಆಹಾರ ಬದಲಿಸುವ ಅಗತ್ಯವಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. - ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು, ನಿದ್ದೆ ಬರುವುದನ್ನು ತಡೆಯಲು ಟ್ಯಾಬ್ಲೆಟ್, ಟಾನಿಕ್, ಜೆಲ್ ಇತ್ಯಾದಿ ಔಷಧಿಗಳನ್ನು ಬಳಸುವುದು ಸೂಕ್ತವಲ್ಲ. - ಸಮಯ ನಿರ್ವಹಣೆ ಬಗ್ಗೆ ಎಚ್ಚರವಿರಲಿ. ಬೆಳಗಿನ ಜಾವ ಅಥವಾ ತಡರಾತ್ರಿವರೆಗೆ ಓದುವ ಅಭ್ಯಾಸವಿದ್ದರೆ ಅದನ್ನು ಪರಿಪಾಲಿಸಿ. ಓದಿಗೆ ನಿಗದಿತ ವೇಳೆ ಗೊತ್ತುಪಡಿಸಿಕೊಳ್ಳಿ. ಓದುವಾಗ ಮೊಬೈಲ್, ಟ್ಯಾಬ್ಲೆಟ್ಗಳಿಂದ ದೂರವಿರಿ. ದೈಹಿಕ ಹಾಗೂ ಮಾನಸಿಕವಾಗಿ ಶ್ರಮವಾಗುವಷ್ಟು ಓದುವ ಹಠ ಒಳ್ಳೆಯದಲ್ಲ. - ಉತ್ತರ ಬರೆಯುವ ಪ್ರಶ್ನೆಗಳನ್ನು ಬರೆಯುವ ಅವಶ್ಯಕತೆ ಇರುವುದಿಲ್ಲ. ಆದರೆ, ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಸಂಖ್ಯೆಯನ್ನು ಮಾರ್ಜಿನ್ ಹೊರಗೆ ಸರಿಯಾಗಿ ನಮೂದಿಸಿ. - ಒಂದು ಅಂಕಗಳ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಶ್ನೆಗಳಿಗೆ ಅನುಸಾರವಾಗಿ ಒಂದು ಪದ, ಒಂದು ಅಥವಾ ಎರಡು ವಾಕ್ಯಗಳಲ್ಲಿ ನೇರ-ನಿಖರವಾಗಿ ಸರಿಯಾದ ಉತ್ತರಿಸಿ. ಹೆಚ್ಚು ಉತ್ತರ ಬರೆಯವುದು ಹಾಗೂ ಹೆಚ್ಚು ಸಮಯ ವ್ಯರ್ಥ ಮಾಡುವ ಗೋಜಿಗೆ ಹೋಗಬೇಡಿ. ಎರಡು ಅಂಕಗಳ ಪ್ರಶ್ನೆಗಳಿಗೆ ಉತ್ತರಿಸುವಾಗ ಎರಡು ಅಥವಾ ಮೂರು ವಾಕ್ಯಗಳಲ್ಲಿ ಅಥವಾ ಕೇಳಿರುವ ರೀತಿಯಲ್ಲಿ ಸರಿಯಾಗಿ, ನಿಖರವಾಗಿ ಉತ್ತರಿಸಿ. ಮೂರು ಅಥವಾ ನಾಲ್ಕು ಅಂಕಗಳ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಶ್ನೆಯಲ್ಲಿ ಕೇಳಿರುವ ಸೂಚನೆರೀತ್ಯ ವಿಷಯಕ್ಕೆ ಅನುಸಾರವಾಗಿ ಸೂಕ್ತ ಉತ್ತರ ಬರೆಯಿರಿ. - 5, 6, 8, 10 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳ ಪ್ರಶ್ನೆಗಳಿಗೆ ವಿಸ್ತಾರವಾದ, ಪ್ರಬಂಧ, ಚಿತ್ರ, ಕೋಷ್ಠಕಗಳು (ಟೇಬಲ್ಸ್), ಪೀಠಿಕೆ (ಇಂಟ್ರಡಕ್ಷನ್), ಉತ್ತರದ ಒಡಲು (ಮೇನ್ ಆನ್ಸರ್), ಉಪ ಸಂಹಾರ (ಕನ್ಕ್ಲೂಷನ್) ಎಲ್ಲಾ ಅಂಶಗಳನ್ನೂ ಗಮನದಲ್ಲಿರಿಸಿಕೊಂಡು ಆಯಾ ವಿಷಯಗಳಿಗೆ ಸಂಬಂಧಿಸಿದಂತೆ/ ತಕ್ಕಂತೆ ಅಂಶಗಳಿಗೆ ಅನುಸಾರ ಉತ್ತರ ಬರೆಯುವುದು ಒಳ್ಳೆಯದು. - ನಕ್ಷೆ, ಗ್ರಾಫ್, ಚಿತ್ರ ಆಧಾರಿತ ಪ್ರಶ್ನೆಗಳಿಗೆ ಉತ್ತರಿಸುವಾಗ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪೆನ್ಸಿಲ್ ಬಳಸಿ. ಅವಶ್ಯವಿದ್ದೆಡೆ ವಿವರವನ್ನು ಸರಿಯಾಗಿ ಗುರುತಿಸಿ, ಲೇಬಲ್ ಮಾಡಿ. ಎಲ್ಲೆಲ್ಲಿ ಗ್ರಾಫ್ ಮತ್ತು ಮ್ಯಾಪ್ ಕೇಳಿರುತ್ತಾರೋ ಅಲ್ಲಿ ತಪ್ಪದೆ ಸರಿಯಾದ ಉತ್ತರ ಬರೆದು ವಿವರಣೆ ನೀಡಬೇಕು. - ಪ್ರಶ್ನೆಗಳಿಗೆ ಎಲ್ಲಾ ಉತ್ತರ ತಿಳಿದಿದೆ ಎಂದು ಆತುರ, ಅತಿಯಾದ ಆತ್ಮವಿಶ್ವಾಸದಿಂದ ಉತ್ತರಿಸುವ ಬದಲು, ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೇಳಿರುವ ಅಂಶಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಅವಶ್ಯವಿರುವ ಸೂಕ್ತ, ಸಮಂಜಸ ಉತ್ತರ ಬರೆಯುವುದು ಸೂಕ್ತ. - ಉತ್ತರ ಬರೆಯುವಾಗ ಓವರ್ ರೈಟ್ ಮಾಡುವುದು, ಚಿತ್ತು ಮಾಡುವುದು, ಹೊಡೆದು ಬರೆಯುವುದನ್ನು ಆದಷ್ಟು ಕಡಿಮೆ ಮಾಡಿ. - ಪರೀಕ್ಷಾ ವೇಳೆಯನ್ನು ಗಮನದಲ್ಲಿರಿಸಿಕೊಂಡು ನಾನಾ ವಿಷಯಗಳಲ್ಲಿನ ಪ್ರಶ್ನೆ ಪತ್ರಿಕೆಯಲ್ಲಿರುವ ಹೆಚ್ಚುವರಿ (ಎಕ್ಸ್ಟ್ರಾ) ಹಾಗೂ ಆಯ್ಕೆ (ಚಾಯ್ಸ್) ಪ್ರಶ್ನೆಗಳನ್ನು ಕೂಡ ಉತ್ತರಿಸುವುದು ಒಳ್ಳೆಯದು. ಕಾರಣ ಬರೆದ ಎಲ್ಲಾ ಉತ್ತರಗಳನ್ನು ಮೌಲ್ಯಮಾಪಕರು ಮೌಲ್ಯಮಾಪನ ಮಾಡುತ್ತಾರೆ. ಹೆಚ್ಚುವರಿ ಅಥವಾ ಆಯ್ಕೆ ಉತ್ತರಕ್ಕೆ ಹೆಚ್ಚು ಅಂಕ ಬಂದಿರುತ್ತದೆಯೋ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಆದರೆ, ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆದು ಬಳಿಕ ಸಮಯವಿದ್ದರೆ ಮಾತ್ರ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರಿಸಿ. - ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ನಿಗದಿತ ಸಮಯದಲ್ಲಿ ಉತ್ತರಿಸಿ. ಆನಂತರ ಒಂದು ಬಾರಿ ಓದುವುದು ಒಳ್ಳೆಯದು. ಬರೆದಿರುವ ಉತ್ತರಗಳಲ್ಲಿ ತಪ್ಪುಗಳಿದ್ದರೆ ಸರಿಪಡಿಸಿ. ಅವಶ್ಯವಿದ್ದರೆ ಸೂಕ್ತ ಪದ, ವಾಕ್ಯ, ಚಿತ್ರ ಮತ್ತು ಇತರೆ ಹೆಚ್ಚಿನ ಉತ್ತರ ಸೇರಿಸಿ.
ಹೀಗಾಗಿ, ಈ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ, ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳಲ್ಲಿ ಭಯ, ಆತಂಕ, ಉದ್ವೇಗ ಸಹಜ. ಇವುಗಳನ್ನು ನಿವಾರಿಸಿ ಪರೀಕ್ಷೆಯನ್ನು ಹೇಗೆ ಆತ್ಮವಿಶ್ವಾಸದಿಂದ ಎದುರಿಸಬೇಕೆಂಬ ಬಗ್ಗೆ 'ವಿಜಯ ಕರ್ನಾಟಕ' ಕೆಲವು ಉಪಯುಕ್ತ 'ಟಿಫ್ಸ್' ನೀಡುತ್ತಿದೆ.
ಕಲೆಹಾಕಲಿ ಒಮ್ಮತ
ಶಿವಮೊಗ್ಗದ ಗಾಯಕಿ ಸುಹಾನ ಸಯೀದ್ ಅವರು ರಿಯಾಲಿಟಿ ಶೋ ಒಂದರಲ್ಲಿ ಹಾಡಿದ ಭಕ್ತಿಗೀತೆ ನಾಡಿನಾದ್ಯಂತ ಸಂಗೀತಪ್ರೇಮಿಗಳಲ್ಲಿ ಪುಳಕ ಮೂಡಿಸಿತ್ತು. ಇಂದು ಅದೇ ಕಾರಣಕ್ಕೆ ಅವರು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗಿ ಬಂದಿದೆ. ಜಗತ್ತಿನ ಇತಿಹಾಸವನ್ನು ನೋಡಿದರೆ ಎಲ್ಲ ಕಡೆಯೂ ಸಂಗೀತವು ನಾನಾ ಧರ್ಮಗಳ ಜನರನ್ನು ಬೆಸೆದಿದೆಯೇ ಹೊರತು ಒಡೆದಿಲ್ಲ. ಇದಕ್ಕೆ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಶತಮಾನಗಳಿಂದ ಹಿಂದೂಸ್ತಾನಿ ಸಂಗೀತವನ್ನು ಮುಸ್ಲಿಂ ಉಸ್ತಾದರುಗಳು, ಸೂಫಿ ಸಂಗೀತವನ್ನು ಹಿಂದೂ ಗಾಯಕರು ಸಂಪನ್ನಗೊಳಿಸಿದ್ದಾರೆ. ದಕ್ಷಿಣ ಭಾರತದಲ್ಲೂ ಇಂಥ ಭಾವೈಕ್ಯತೆಯ ಉದಾಹರಣೆಗಳಿವೆ. ಮನಸ್ಸು ಮನಸ್ಸುಗಳನ್ನು ಒಂದುಗೂಡಿಸಿದ, ಧರ್ಮಗಳ ಎಲ್ಲೆ ಮೀರಿದ ಈ ಮಹಾನ್ ಮನಸ್ಸುಗಳನ್ನು ನಮ್ಮೆಲ್ಲರ ಒಳಿತಿಗಾಗಿ ಒಮ್ಮೆ ನೆನೆಯೋಣ.
ಭಾರತ ಮಾತೆಯ ಪ್ರೀತಿಯ ರಹಮಾನ್
'ದ ಮೊಜಾರ್ಟ್ ಆಫ್ ಮದ್ರಾಸ್' ಎಂದು ಕರೆಯಿಸಿಕೊಳ್ಳುವ ಅಲ್ಲಾ ರಖಾ ರಹಮಾನ್ ಭಾರತ ಕಂಡ ಅದ್ಭುತ ಸಂಗೀತ ನಿರ್ದೇಶ ಮತ್ತು ಗಾಯಕ. ಎರಡು ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ರಹಮಾನ್ರ ಸಾಧನೆಗೆ ಯಾವುದೇ ಧರ್ಮ, ಜಾತಿ ಧರ್ಮ ಅಡ್ಡಿಯಾಗಲಿಲ್ಲ. ರಹಮಾನ್ ಹುಟ್ಟಿದ್ದು ಹಿಂದೂ ಆಗಿ ಆದರೂ ಬೆಳೆದಿದ್ದು ಮಾತ್ರ ಮುಸ್ಲಿಮನಾಗಿ. ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಅವರ ಸಂಗೀತದ ಮಾಧುರ್ಯ ಹರಿದಿದೆ. ಅವರು ಸಂಯೋಜಿಸುವ ಭಕ್ತಿರಸ ಗೀತೆಗೆ ಅಮೀರ್ ಖಾನ್ ಅಭಿನಯದ 'ಲಗಾನ್' ಚಿತ್ರ ಅತ್ಯುತ್ತಮ ಉದಾಹರಣೆ. ಈ ಚಿತ್ರದಲ್ಲಿ ಬರುವ ''ಓ ಪಾಲನ ಹಾರೆ.. ನಿರ್ಗುಣ ಔರ್ ನಿಯಾರೆ....'' ಹಾಡು ನಿಮ್ಮನ್ನು ಭಕ್ತಿಯಲ್ಲಿ ತಲ್ಲೀನವಾಗಿಸುತ್ತದೆ. ಅಂಥ ಅದ್ಭುತ ಹಾಡದು. ಅವರು ಇನ್ನೂ ಕೆಲವು ಚಿತ್ರಗಳಲ್ಲಿ ಭಕ್ತಿ ಪ್ರಧಾನವಾದ ಹಾಡುಗಳು ಜನಮನ ಸೂರೆಗೊಂಡಿವೆ. ಇಲ್ಲಿ ಭಕ್ತಿ ಪ್ರಧಾನವಾದ ಹಾಡು ಸಂಯೋಜಿಸಲು ತನ್ಮಯತೆ ಮತ್ತು ಅದನ್ನು ಆಸ್ವಾದಿಸುವ ಗುಣವಿದ್ದರೆ ಸಾಕು; ಧರ್ಮ ಯಾವುದಾದರೂ ಆದೀತು. ಎಲ್ಲಕ್ಕಿಂತ ಹೆಚ್ಚಾಗಿ 'ವಂದೇ ಮಾತರಂ...' ಹಾಡನ್ನು ಇಡೀ ವಿಶ್ವವೇ ಕೇಳುವಂತೆ ಮಾಡಿದ್ದು ಇದೇ ರಹಮಾನ್ ಅವರಲ್ಲವೆ? ಸಂಗೀತಗಾರರು ಒಡೆದ ಹೃದಯಗಳನ್ನು ಬೆಸೆಯುತ್ತಾರೆ. ಅವರೆಂದೂ ಸಮುದಾಯಗಳ ಮಧ್ಯೆ ಕಂದಕವನ್ನು ಸೃಷ್ಟಿಸುವುದಿಲ್ಲ.
ದೈವಿಕ ಶಹನಾಯ್ ವಾದನ
ಶಹನಾಯಿಗೆ ದೈವಿಕತೆಯನ್ನು ತಂದುಕೊಟ್ಟವರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು. ಮುಸ್ಲಿಮರಾದರೂ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಹಾಡುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಭಾರತೀಯ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಬಿಸ್ಮಿಲ್ಲಾ ಅವರೂ ಧರ್ಮವನ್ನು ಮೀರಿ ಬೆಳೆದವರು. ಅವರು ಶಹನಾಯಿ ನುಡಿಸಲು ಆರಂಭಿಸಿದರೆ ಅಲ್ಲಿ ಭಕ್ತಿರಸ ಹೊಳೆಯಾಗಿ ಹರಿಯುತ್ತಿತ್ತು. ಕೇಳುಗರು ಭಕ್ತಿಯ ಕಡಲಿನಲ್ಲಿ ಮಿಂದೇಳುತ್ತಿದ್ದರು. ಸಂಗೀತ ಸರಸ್ವತಿ ಅವರ ಶಹನಾಯಿಯಲ್ಲಿ ನೆಲೆಯೂರಿದ್ದಳು. ಅದಕ್ಕಾಗಿಯೇ ಅವರಿಗೆ 'ಭಾರತ ರತ್ನ'ದಂಥ ಉನ್ನತ ಪ್ರಶಸ್ತಿ ಕೂಡ ಹುಡುಕಿಕೊಂಡು ಬಂತು. ಕಾಶಿಯೇ ಅವರ ಸಂಗೀತದ ಕಾರ್ಯಕ್ಷೇತ್ರವಾಗಿತ್ತು. ಬಿಸ್ಮಿಲ್ಲಾ ಖಾನ್ ಅವರು ತಮ್ಮ ಶಹನಾಯಿ ಸಂಗೀತವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಿದ್ದಾರೆ. ಅವರ ಶಿಷ್ಯರಲ್ಲಿ ಹಿಂದೂಗಳು ಇದ್ದಾರೆ. ಕರ್ನಾಟಕದವರೇ ಆದ ಪಂಡಿತ ಎಸ್ ಬಲ್ಲೇಶ್(ಬಾಳಪ್ಪ ಸಣ್ಣ ಭರಮಪ್ಪ ಭಜಂತ್ರಿ) ಕೂಡ ಒಬ್ಬರು. ಅವರ ಪುತ್ರರಾದ ನಜೀಮ್ ಹುಸೇನ್ ಮತ್ತು ನಯ್ಯಾರ್ ಹುಸೇನ್ಗೂ ತಮ್ಮ ಶಹನಾಯಿ ಸಂಗೀತವನ್ನು ಧಾರೆ ಎರೆದಿದ್ದಾರೆ. ಇಂದಿಗೂ ಜನರು ಅವರನ್ನು ಸೌಹಾರ್ದತೆಯ ಪ್ರತೀಕ ಎಂದೇ ಗುರುತಿಸುತ್ತಾರೆ.
ಸೂಫಿ ಕಿ ಸುಲ್ತಾನಾ
ಭಾರತದ ಯುವ ಹಿನ್ನೆಲೆ ಗಾಯಕಿ ಹರ್ಷದೀಪ್ ಕೌರ್ ತಮ್ಮ ಕಂಠ ಸಿರಿಯಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೌರ್ ಅವರು ಇಷ್ಟಪಟ್ಟು ಹಾಡುವ ಸಂಗೀತದ ಪ್ರಕಾರ ಎಂದರೆ 'ಸೂಫಿ'. ಹಿನ್ನೆಲೆ ಗಾಯಕಿಗಿಂತಲೂ ಕೌರ್ ಸೂಫಿ ಗಾಯಕಿ ಎಂದೇ ಹೆಚ್ಚು ಪ್ರಚಲಿತರಾಗಿದ್ದಾರೆ. ಅಲ್ಲದೇ ಅವರನ್ನು 'ಸೂಫಿ ಕಿ ಸುಲ್ತಾನಾ' ಎಂದೂ ಕರೆಯುತ್ತಾರೆ. ಹಿಂದಿ ಸೇರಿದಂತೆ ದೇಶದ ಅನೇಕ ಪ್ರಾದೇಶಿಕ ಭಾಷೆಗಳಲ್ಲೂ ಅವರ ಗಾನುಸುಧೆ ಹರಿದಿದೆ. ಎ.ಆರ್.ರಹಮಾನ್, ಪ್ರೀತಮ್ ಚಕ್ರವರ್ತಿ, ಸಲೀಮ್ ಸುಲೈಮಾನ್ ಸೇರಿದಂತೆ ಅನೇಕ ದಿಗ್ಗಜ ಸಂಗೀತ ನಿರ್ದೇಶಕರ ಜತೆ ಕೆಲಸ ಮಾಡಿದ್ದಾರೆ. ಎರಡು ರಿಯಾಲ್ಟಿ ಶೋಗಳನ್ನು ಗೆದ್ದ ಬಳಿಕ ಕೌರ್ ಹೆಚ್ಚು ಪ್ರಸಿದ್ಧಿಗೆ ಬಂದರು. ಸಿಂಗ್ ಬ್ರದರ್ಸ್ ಬಳಿ ಸಂಗೀತದ ಓನಾಮ ಕಲಿತ ಕೌರ್, ಪಾಶ್ಚಿಮಾತ್ಯ, ಕ್ಲಾಸಿಕಲ್ ಕೂಡ ಕಲಿತಿದ್ದಾರೆ. ಆದರೆ, ಕೌರ್ ಅವರಿಗೆ ಹೆಚ್ಚು ಇಷ್ಟವಾದ ಪ್ರಕಾರ ಮಾತ್ರ ಸೂಫಿಯೇ. ಇದರಿಂದಲೇ ಅವರಿಗೊಂದು ಗುರುತ ಕೂಡ ಸಿಕ್ಕಿದೆ. ಅಂದರೆ, ಯಾವುದೇ ಧರ್ಮದ ಭಕ್ತಿಗೀತೆ ಹಾಡುವುದಕ್ಕೆ ಅದೇ ಧರ್ಮದವರೇ ಆಗಬೇಕೆಂದೇನೂ ಇಲ್ಲ. ಸಂಗೀತ ಎಲ್ಲರಿಗೂ ಸೇರಿದ್ದು ಎಂಬುದನ್ನು ಕೌರ್ ಅವರ ಸೂಫಿ ಗಾಯನ ಸಾಬೀತು ಪಡಿಸುತ್ತದೆ.
ಅರ್ಥ ತುಂಬಿದ ಜಬ್ಬಾರ್
ಕರ್ನಾಟಕದ ಕರಾವಳಿಯ ರಮ್ಯಮನೋಹರ ಕಲೆ ಯಕ್ಷಗಾನ ಮೊದಲಿನಿಂದಲೂ ದೇವಸ್ಥಾನಗಳ, ಮಠಗಳ ಆಶ್ರಯದಲ್ಲಿತ್ತು. ಇತ್ತೀಚೆಗಷ್ಟೇ ಅದು ಅವುಗಳನ್ನು ಮೀರಿ ಎಲ್ಲರ ಕಲೆಯಾಗಿದೆ. ಈ ಹಿಂದೆ ಒಂದಿಬ್ಬರು ಮುಸ್ಲಿಂ ಕಲಾವಿದರು ಬಂದು ಹೋದದ್ದುಂಟು. ಇವರಲ್ಲಿ ಇತ್ತೀಚೆಗೆ ಹೆಚ್ಚು ಜನಪ್ರಿಯತೆಗೆ, ಮುನ್ನೆಲೆಗೆ ಬಂದವರೆಂದರೆ ಜಬ್ಬಾರ್ ಸಮೋ ಸಂಪಾಜೆ. ರಾಜ್ಯದ ಗಡಿಪ್ರದೇಶ, ಮಲೆನಾಡು ಸಂಪಾಜೆಯಲ್ಲಿ ಹುಟ್ಟಿದ ಜಬ್ಬಾರ್, ಬಾಲ್ಯದಿಂದ ಯಕ್ಷಗಾನದ ವಾತಾವರಣದಲ್ಲಿ ಬೆಳೆದವರು. ಯಕ್ಷಗಾನ ನೋಡುತ್ತ, ಕೇಳುತ್ತ ಬೆಳೆದ ಜಬ್ಬಾರ್, ನಿಧಾನವಾಗಿ ಈ ಕಲೆಯ ಹಿರಿಕಿರಿಯ ಕಲಾವಿದರ ಸಂಸರ್ಗಕ್ಕೆ ಬಂದರು. ಯಕ್ಷಗಾನದ ಇನ್ನೊಂದು ರೂಪವಾದ ತಾಳಮದ್ದಲೆಯಲ್ಲಿ ಪುರಾಣಪಾತ್ರಗಳನ್ನು ವಹಿಸಿ ಅರ್ಥ ಹೇಳಲಾರಂಭಿಸಿದರು. ಇಂದು ಅವರು ತಾಳಮದ್ದಲೆಯ ಬಹುಬೇಡಿಕೆಯ ಕಲಾವಿದ. ಜಬ್ಬಾರ್ ಬರುತ್ತಾರೆಂದರೆ ಅವರ ಮಾತುಗಳನ್ನು ಕೇಳಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಮಾಗಧ, ವಾಲಿ, ದುರ್ಯೋಧನ ಮುಂತಾದ ಖಳ ಪಾತ್ರಗಳನ್ನು ಮಾಡುವಂತೆಯೇ ಶ್ರೀಕೃಷ್ಣ, ಶ್ರೀರಾಮ, ರುಕ್ಮಾಂಗದ, ಸುಧನ್ವ, ಮಯೂರಧ್ವಜ ಮುಂತಾದ ದೇವ, ಭಕ್ತಪಾತ್ರಗಳನ್ನೂ ಸೊಗಸಾಗಿ ನಿರ್ವಹಿಸುತ್ತಾರೆ. ಪುರಾಣದ ನಿಖರವಾದ ಜ್ಞಾನ, ಅಸ್ಖಲಿತವಾದ ವಾಗ್ಝರಿ, ಪಾತ್ರವೈಚಿತ್ರ್ಯಗಳ ಸೂಕ್ಷ್ಮ ಮಂಡನೆ, ಹೊಸ ವೈಚಾರಿಕತೆ ಮತ್ತು ಹಳೆಯ ಕತೆಗಳ ಅದ್ಭುತವಾದ ಸಂಕಲನ, ದೈವದತ್ತವಾದ ಕಂಠಸಿರಿ- ಇವು ಜಬ್ಬಾರ್ರ ವೈಶಿಷ್ಟ್ಯ.
ದಾಸವಾಣಿಯ ಜೇನುದನಿ ಫಯಾಜ್
ಉಸ್ತಾದ್ ಫಯಾಜ್ ಖಾನ್ ಅವರ ದಾಸವಾಣಿ ಕಾರ್ಯಕ್ರಮಗಳನ್ನು ಕೇಳುವುದೇ ಒಂದು ಸೊಗಸು. 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದಾಗ ಇವರು ಹಾಡಿದ 'ಕಲಿಯುಗದಲಿ ಹರಿ ನಾಮವ ನೆನೆದರೆ' ಕೇಳಿ ಎಸ್ಪಿಬಿ ಹನಿಗಣ್ಣಾಗಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾನಾ ಘರಾಣಾದ ಪರಂಪರೆಯ ಪ್ರತಿನಿಧಿಯಾಗಿರುವ ಇವರ ತಂದೆ ಉಸ್ತಾದ್ ಅಬ್ದುಲ್ ಖಾದರ್ ಖಾನ್ ಕೂಡ ಗಾಯಕರಾಗಿದ್ದರು. ತಾತ ಶೇಖ್ ಅಬ್ದುಲ್ಲಾ ಖಾನ್, ಮೈಸೂರು ಆಸ್ಥಾನದ ಸಂಗೀತ ವಿದ್ವಾಂಸರಾಗಿದ್ದರು. ಪಂ.ಬಸವರಾಜ ರಾಜಗುರು ಅವರಲ್ಲಿ ಶಿಷ್ಯತ್ವ ಮಾಡಿದರು. ಇವರು ಸಾರಂಗಿಯನ್ನು ಕೂಡ ಅದ್ಭುತವಾಗಿ ನುಡಿಸುತ್ತಾರೆ. ಉಡುಪಿಯ ಪೀಠ ಪರಾರಯಯ ಉತ್ಸವದ ವೇಳೆ ಇವರು ನಡೆಸಿಕೊಡುವ ದಾಸವಾಣಿ ಕಾರ್ಯಕ್ರಮ ಜನಪ್ರಿಯ. ಭಕ್ತಿಗೀತೆ, ದಾಸರ ಪದಗಳು ಇವರ ಜೇನಿನ ದನಿಯಲ್ಲಿ ಜೀವ ತುಂಬಿಕೊಳ್ಳುತ್ತವೆ. ಕನ್ನಡ ಚಿತ್ರರಂಗದಲ್ಲಿ ಇವರು ಹಲವು ಹಾಡುಗಳಿಗೆ ಕಂಠ ನೀಡಿದ್ದಾರೆ.
ಸೂಫಿಗೆ ದನಿತುಂಬಿದ ರಬ್ಬಿ
ಇವರ ಮೂಲ ಹೆಸರು ಗುರ್ಪ್ರೀತ್ ಸಿಂಗ್ ಶೇರ್ಗಿಲ್. ಇವರ ಬಗ್ಗೆ ಗೊತ್ತಿಲ್ಲದಿದ್ದರೂ ಇವರು ಹಾಡಿದ 'ಬುಲ್ಲಾ ಕಿ ಜನಮ್ ಕೋಣ್' ಎಂಬ ಹಾಡನ್ನು ಕೇಳಿಯೇ ಇರುತ್ತೀರಿ. ಮೂಲತಃ ಮುಸ್ಲಿಂ ರಚನೆಗಳಾದ ಸೂಫಿ ಹಾಡುಗಳಿಗೆ ಆಧುನಿಕ ಸ್ಪರ್ಶ ನೀಡುವಲ್ಲಿ ಇವರ ಪಾಲು ದೊಡ್ಡದು. ಸೂಫಿ, ಪಂಜಾಬಿ, ಬನಿ, ರಾಕ್ ಎಲ್ಲವನ್ನೂ ಮಿಶ್ರ ಮಾಡಿದ ಆಧುನಿಕ ತಳಿಯ ಸಂಗೀತ ಇವರದು. ಹಾಡುಗಳು ಆಧುನಿಕವಾಗಿದ್ದರೂ ಅವುಗಳ ಅಂತರಂಗ ಸೂಫಿ ಆಧ್ಯಾತ್ಮದ್ದಾಗಿದೆ.
ಅಯ್ಯಪ್ಪನ ಪ್ರೀತಿಯ ಗಾಯಕ
ಕೆ.ಜೆ.ಯೇಸುದಾಸರ ಚಿತ್ರಗೀತೆಗಳನ್ನು ಕೇಳಿಲ್ಲದಿದ್ದರೂ, ಅವರು ಹಾಡಿದ 'ಹರಿವರಾಸನಂ ಸ್ವಾಮಿ ವಿಶ್ವಮೋಹನಂ' ಹಾಡನ್ನು ಕೇಳಿಲ್ಲದವರು ಇರಲಿಕ್ಕಿಲ್ಲ. ಶಬರಿಮಲೆಯ ಸ್ವಾಮಿ ಅಯ್ಯಪ್ಪನನ್ನು ನುತಿಸುವ ಈ ಹಾಡನ್ನು ಕೇಳದೆ, ಹಾಡದೆ, ಯಾವುದೇ ಅಯ್ಯಪ್ಪ ಯಾತ್ರಾರ್ಥಿಯ ವ್ರತ ಪೂರ್ತಿಯಾಗಲಾರದು. ಸ್ವತಃ ಮಾಲೆ ಹಾಕಿ ಅವರು ಶಮರಿಮಲೆಗೆ ಹೋದದ್ದೂ ಉಂಟು. ಯೇಸುದಾಸ್, ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ ದೇವಿಯ ಪರಮ ಭಕ್ತ. ವರ್ಷಕ್ಕೆರಡು ಬಾರಿಯಾದರೂ ಅಲ್ಲಿಗೆ ಭೇಟಿ ನೀಡುತ್ತಾರೆ.
ಭಜನಪ್ರಿಯ ರಫಿ
ಹಿಂದಿ ಚಿತ್ರಗೀತೆಗಳ ಅನಭಿಷಿಕ್ತ ಸಾಮ್ರಾಟರಾಗಿರುವ ಮುಹಮ್ಮದ್ ಅಲಿ, ಹಿಂದೂ ದೇವತೆಗಳ ಬಗ್ಗೆ ಭಜನೆಗಳನ್ನೂ ಹಾಡಿದ್ದಾರೆಂದರೆ ನೀವು ನಂಬುತ್ತೀರಾ? ಸಂತ ತುಕಾರಾಮರ ಭಜನ್ಗಳು, ತುಲಸಿದಾಸರ ಅಭಂಗಗಳು, ಕಬೀರರ ದೋಹೆಗಳು ರಫಿಯ ಮಧುರವಾದ ಕಂಠಸಿರಿಯಲ್ಲಿ ಭಾರತೀಯ ಭಕ್ತಿಸಂಗೀತವನ್ನು ಸಂಪನ್ನಗೊಳಿಸಿವೆ. ಇವರ ಭಕ್ತಿಗೀತೆಗಳ ಹಾಡುಗಾರಿಕೆಯ ಸಿಡಿಗಳು ಜನಪ್ರಿಯವಾಗಿವೆ. ಧರ್ಮದ ಸೀಮೆಯಿಲ್ಲದೆ ಜನ ಇವನ್ನು ಆನಂದಿಸಿದ್ದಾರೆ.
ತತ್ವಪದಗಳ ಸುತಾರ
ಕೀರ್ತನೆ, ವಚನ ಸಾಹಿತ್ಯ, ತತ್ವಪದ, ಪದ್ಯಗಳಿಗೆ ಹಾಡಿನ ರೂಪ ನೀಡಿ ಐದು ದಶಕದಿಂದ ನಾಡಿನಲ್ಲಿ ಧಾರ್ಮಿಕ ಸಾಮರಸ್ಯ ಮೂಡಿಸುತ್ತಿರುವ ಪ್ರಮುಖ ಹೆಸರು ಇಬ್ರಾಹಿಂ ಸುತಾರ. ಬಾಗಲಕೋಟ ಜಿಲ್ಲೆಯ ನೇಕಾರಿಕೆ ನಗರ ಮಹಾಲಿಂಗಪುರದಲ್ಲಿಯೇ ನೇಕಾರ ವೃತ್ತಿ. 1970ರ ದಶಕದಲ್ಲಿಯೇ ಭಾವ್ಯ ಭಕ್ತ ಸಂಗೀತ ಮೇಳ ಎನ್ನುವ ಕಾರ್ಯಕ್ರಮದ ಮೂಲಕ ಏಳು ಮಂದಿ ಸ್ನೇಹಿತರು ಜನರ ಬಳಿ ಹೋದರು. ವಚನ ಸಾಹಿತ್ಯ, ನಿಜಗುಣ ಸಾಹಿತ್ಯ, ಪದ್ಯಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸತೊಡಗಿದರು. ಪ್ರಶ್ನೆ ಉತ್ತರಗಳ ಮೂಲಕವೇ ಜನರನ್ನು ತಲುಪಿದರು. ಆಧ್ಯಾತ್ಮಿಕ ಪ್ರವಚನ, ಸಂವಾದಗಳು ಧರ್ಮದ ನೆಲೆಗಟ್ಟಿನಲ್ಲಿ ನಡೆದುಕೊಂಡು ಬಂದವು. ಜನರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. 'ಸೂಫಿ ಸಂತರೂ ಸಂಗೀತ ಕ್ರಿಯೆಯಲ್ಲಿ ತೊಡಗಿಸಿಕೊಂಡು ಬಂದವರು. ನಾವು ಅದೇ ಪರಂಪರೆಯಿಂದ ಬಂದಿರುವುದರಿಂದ ತತ್ವ ಪದ, ವಚನ ಸಾಹಿತ್ಯವನ್ನು ಜನರಿಗೆ ತಲುಪಿಸುತ್ತಿದ್ದೇವೆ. ಎಲ್ಲಾ ಧರ್ಮಗಳು ಹೇಳುವುದು ಒಂದನ್ನೇ' ಎನ್ನುವುದು ಸುತಾರ ಅವರ ನುಡಿ.
9 ಸಾಧಕಿಯರಿಗೆ ಈಸ್ಟರ್ನ್ ಭೂಮಿಕಾ-ವಿಕ ಗೌರವ
ವಿಭಿನ್ನ ಕ್ಷೇತ್ರಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿರುವ ಮಹಿಳೆಯರು ಬೆಂಗಳೂರು: 'ಈಸ್ಟರ್ನ್ ಭೂಮಿಕಾ' ಮತ್ತು 'ವಿಜಯ ಕರ್ನಾಟಕ' ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ನಾನಾ ಕ್ಷೇತ್ರಗಳ ಮಹಿಳಾ ಪ್ರತಿನಿಧಿಗಳು ಮತ್ತು ಸಾಧಕಿಯರಿಂದ ಮೆಚ್ಚುಗೆಗೆ ಪಾತ್ರವಾಯಿತು. 'ವಿಜಯ ಕರ್ನಾಟಕ' ಓದುಗರ ವಲಯ ಸಹಸ್ರಾರು ಸಾಧಕಿಯರ ಹೆಸರುಗಳನ್ನು ಸೂಚಿಸಿತ್ತು. ಇವರಲ್ಲಿ ಈಸ್ಟರ್ನ್ ಭೂಮಿಕಾ ಮತ್ತು ವಿಜಯ ಕರ್ನಾಟಕ ಸಂಸ್ಥೆ 9 ಹೆಸರುಗಳನ್ನು ಅಂತಿಮಗೊಳಿಸಿತ್ತು. ವಿಭಿನ್ನ ಕ್ಷೇತ್ರಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತನ್ನು ಮೂಡಿಸಿ ಮಹಿಳಾ ಸಮುದಾಯಕ್ಕೆ ಮಾದರಿ ಆಗುವಂತಹ ಕೆಲಸಗಳನ್ನು ಮಾಡಿರುವ ಇವರನ್ನು ಸನ್ಮಾನಿಸಿ ಪ್ರಶಸ್ತಿ ನೀಡಲು ಐಎಎಸ್ ಅಧಿಕಾರಿ ಡಾ. ಏಕ್ರೂಪ್ ಕೌರ್, ಐಪಿಎಸ್ ಅಧಿಕಾರಿ ಡಿ. ರೂಪಾ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಈಸ್ಟರ್ನ್ ಭೂಮಿಕಾ ಸಂಸ್ಥೆಯ ಜಿಎಂ ಕೃತಿಕಾ ಅವರು ವೇದಿಕೆಯಲ್ಲಿ ಇದ್ದರು. ನಾನಾ ವಲಯ ಮತ್ತು ಕ್ಷೇತ್ರಗಳನ್ನು ಪ್ರತಿನಿಧಿಸುವ ಇವರೆಲ್ಲರೂ ಒಟ್ಟು ಕಾರ್ಯಕ್ರಮದ ಸ್ವರೂಪ ಹಾಗೂ ಸಾಧಕಿಯರ ಆಯ್ಕೆಯಲ್ಲಿ ನಡೆದ ಪಾರದರ್ಶಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸಣ್ಣ ಗೆಲುವು ದಕ್ಕಿಸಿಕೊಳ್ಳುವುದಕ್ಕೂ ಹರಸಾಹಸ ಪಡಬೇಕು. ನೈಸರ್ಗಿಕವಾಗಿ ಮತ್ತು ಕೌಟುಂಬಿಕವಾಗಿ ನಿರ್ವಹಿಸಲೇಬೇಕಾದ ಜವಾಬ್ದಾರಿಗಳ ನಡುವೆಯೂ ಪ್ರತಿ ಹೆಜ್ಜೆಯಲ್ಲೂ ಅವಮಾನ ಮತ್ತು ಕೊರತೆಗಳನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಯಶಸ್ವಿ ಹೆಜ್ಜೆಗಳನ್ನು ಇಟ್ಟ ತಮ್ಮ ಕಥೆ-ವ್ಯಥೆಗಳನ್ನು ಪ್ರತಿಯೊಬ್ಬರೂ ಹಂಚಿಕೊಂಡರು. ಲಿಂಗ ತಾರತಮ್ಯ ಇರುವುದು ದೇಹಕ್ಕೆ ಮಾತ್ರ. ಈ ನೈಸರ್ಗಿಕ ಭಿನ್ನತೆಯೇ ಶೋಷಣೆಗೆ ಕಾರಣ ಆಗಬಾರದು. ದೇಹಕ್ಕೆ ಲಿಂಗ ಇದ್ದರೂ ದೇಹದೊಳಗಿನ ಚೈತನ್ಯಕ್ಕೆ, ಪ್ರತಿಭೆಗೆ, ಶ್ರಮ, ಶ್ರದ್ಧೆಗೆ ಲಿಂಗವಿಲ್ಲ. ಲಿಂಗಾತೀತವಾದ ಚೈತನ್ಯವನ್ನು ಪರಿಣಾಮಕಾರಿಯಾಗಿ, ಸರಿಯಾದ ಮಾರ್ಗದಲ್ಲಿ ವ್ಯಯಿಸಿದ್ದೇ ಆದರೆ ಯಶಸ್ಸು ಮತ್ತು ಸಾಧನೆ ತಂತಾನೇ ಘಟಿಸುತ್ತದೆ ಎನ್ನುವುದನ್ನು ವೇದಿಕೆಯಲ್ಲಿದ್ದವರು ಮತ್ತು ಸಾಧಕಿಯರು ತಮ್ಮ ತಮ್ಮ ಅಂತರಂಗದ ಅನುಭವಗಳ ಮೂಲಕವೇ ಹಂಚಿಕೊಂಡರು. ಅಪೂರ್ವ ಅನುಭವಗಳ ಮೂಲಕ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಎಲ್ಲರೂ ಸಾರ್ಥಕ ಭಾವದಲ್ಲಿ ವಿಜಯ ಕರ್ನಾಟಕ ಮತ್ತು ಈಸ್ಟರ್ನ್ ಭೂಮಿಕಾ ಸಹಯೋಗಕ್ಕೆ ಅಭಿನಂದನೆ ಸಲ್ಲಿಸಿದರು.
ಆಯ್ಕೆಯಾದ ಸಾಧಕಿಯರು
ಸ್ಮಿತಾ ಎಸ್. ರಂಗನಾಥ್
ಕ್ಷೇತ್ರ: ಸಂವಹನ ಮತ್ತು ಮಾರ್ಕೆಟಿಂಗ್
ಅನುಭವ: 15 ವರ್ಷಗಳ ಅನುಭವ
ರಜನಿ
ಕ್ಷೇತ್ರ: ಗ್ರಾಮ ಪಂಚಾಯ್ತಿ ಅಧ್ಯಕ್ಷೆ
ಸಾಧನೆ: 250ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ನಿರ್ಮಾಣ, ಶಾಲೆ-ಅಂಗನವಾಡಿ-ಆಸ್ಪತ್ರೆಗಳಲ್ಲಿ ಶೌಚಾಲಯ ನಿರ್ಮಿಸಲು ಹೋರಾಟ
ಮೋಕ್ಷಮ್ಮ
ಕ್ಷೇತ್ರ: ದೇವದಾಸಿ ಮಹಿಳೆಯರನ್ನು ಮುಖ್ಯವಾಹಿನಿಗೆ ಕರೆತರುವುದು
ಸಾಧನೆ: 50 ಸಾವಿರಕ್ಕೂ ಹೆಚ್ಚು ದೇವದಾಸಿಯರನ್ನು ಮುಖ್ಯವಾಹಿನಿಗೆ ತಂದು ನಿರಂತರ ಹತ್ತು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ದೇವದಾಸಿ ಮಹಿಳೆ ಮತ್ತು ಮಕ್ಕಳಿಗಾಗಿ ಹೋರಾಟದ ಮೂಲಕವೇ ಸರಕಾರದಿಂದ ಹಾಸ್ಟೆಲ್ಗಳನ್ನು ಪಡೆದುಕೊಂಡು ಶಿಕ್ಷಣಕ್ಕಾಗಿ ಹೋರಾಡುತ್ತಿದ್ದಾರೆ.
ಡಾ. ಜಿ.ಎನ್.ಸಂಗೀತಾ
ಕ್ಷೇತ್ರ: ವಿಕಲಚೇತನ (ದೃಷ್ಟಿಹೀನ )ಹೆಣ್ಣುಮಗಳಾಗಿ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಸಾಧನೆ.
ಸಾಧನೆ: ಪಿಎಚ್ಡಿ ಪದವಿ ಪಡೆದ ಮೊದಲ ದೃಷ್ಟಿ ವಿಕಲಚೇತನ ಮಹಿಳೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.
ಮಂಜು ಮೆಹ್ರಾ
ಕ್ಷೇತ್ರ: ಟ್ರಾಫಿಕ್ ವಾರ್ಡನ್ ಆಗಿ ಶಾಲೆ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ರಸ್ತೆ ದಾಟಿಸುವಲ್ಲಿ ನೆರವು, ಸಂಚಾರ ದಟ್ಟಣೆ ನಿರ್ವಹಣೆಯಲ್ಲಿ ಸ್ವಯಂ ಸೇವಕಿ
ಸಾಧನೆ: ಬನ್ನೇರುಘಟ್ಟ ಸುತ್ತ ಮುತ್ತ ಶಾಲೆ ಮಕ್ಕಳು ಸುರಕ್ಷಿತವಾಗಿ ರಸ್ತೆದಾಟಲು ಹಲವು ವರ್ಷಗಳಿಂದ ಸ್ವಯಂಸ್ಫೂರ್ತಿಯಿಂದ ಶ್ರಮಿಸುತ್ತಿದ್ದಾರೆ.
ದೀಪ್ತಿ
ಕ್ಷೇತ್ರ: ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಸುವಿಕೆ
ಸಾಧನೆ: ಅಕ್ಷರ ಚಾರಿಟಬಲ್ ಟ್ರಸ್ಟ್ ಮೂಲಕ ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಸುತ್ತಿದ್ದಾರೆ.
ಆಶಾ
ಕ್ಷೇತ್ರ: ವಿಶೇಷ ಚೇತನ ಮಕ್ಕಳ ಶಿಕ್ಷಣ ಮತ್ತು ಆರೈಕೆ
ಸಾಧನೆ: ಮಕ್ಕಳ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿರುವುದು. ಅನುಕೂಲಸ್ಥ ಕುಟುಂಬಗಳು ಪೋಷಕರ ಪ್ರೀತಿ ಸಿಗದೆ ಭಾವನಾತ್ಮಕವಾಗಿ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಲು ಶ್ರಮಿಸುತ್ತಿದ್ದು ಇವರ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ.
ಲಕ್ಷ್ಮಿ ಪ್ರಧಾ
ಕ್ಷೇತ್ರ: ದೈಹಿಕ ಬೆಳವಣಿಗೆಯ ಕೊರತೆಯನ್ನೂ ಮಿರಿ ವೈದ್ಯೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಿದ್ದಾರೆ.
ಸಾಧನೆ: ವಯಸ್ಸಿಗೆ ತಕ್ಕ ಬೆಳವಣಿಗೆ ಇಲ್ಲದಿದ್ದರಿಂದ ಎಲ್ಲರ ತಿರಸ್ಕಾರಕ್ಕೆ ತುತ್ತಾದರೂ ಎಲ್ಲಾ ಅವಮಾನಗಳನ್ನೂ ಮೀರಿ ನಿಂತು ವೈದ್ಯೆ ಆಗಿದ್ದು, ಎಂಬಿಎ ಪದವಿ ಪಡೆದು ಆಡಳಿತ ನಿರ್ವಹಣೆಯಲ್ಲೂ ಪರಿಣತಿ ಸಾಧಿಸಿದ್ದು. 34 ವರ್ಷ ವಯಸ್ಸಿನಲ್ಲೂ 3.9 ಅಡಿ ದೈಹಿಕ ಎತ್ತರ. ಆದರೆ ಇದೊಂದು ಕೊರತೆಯೇ ಅಲ್ಲ ಎನ್ನುವಂತೆ ಸಾಧನೆ ಮಾಡಿದ್ದಾರೆ.
ಡಾ. ಇಫತ್ ಫರೀದಿ
ಕ್ಷೇತ್ರ: ಬೀದಿ ಮಕ್ಕಳಿಗೆ ಶಿಕ್ಷಣ
ಸಾಧನೆ: ಜಿಮ್ಗೆ ಹೋಗಿ ಬರುವಾಗ ಬೀದಿಮಕ್ಕಳ ಜತೆ ಸ್ನೇಹ ಬೆಳೆಸಿಕೊಂಡು ಅವರಿಗೆ ಬೀದಿಯಲ್ಲೇ ಅಕ್ಷರಾಭ್ಯಾಸ ಮಾಡಿಸುತ್ತಾ ಅವರೆಲ್ಲರೂ ಶಾಲೆಯ ಮೆಟ್ಟಿಲೇರುವಂತೆ ಮಾಡಿ ಉತ್ತಮ ಶಿಕ್ಷಣ ಪಡೆಯಲು ನೆರವಾಗಿದ್ದಾರೆ.
ಕುಟುಂಬದ ಜವಾಬ್ದಾರಿ ಹಿಂದಕ್ಕೆ ಎಳೆಯುತ್ತವೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಏಕ್ರೂಪ್ ಕೌರ್ ತಮ್ಮ ಅನುಭವದ ಮೂಲಕವೇ ಸ್ತ್ರೀ ಶಕ್ತಿ ಚೈತನ್ಯವನ್ನು ಅನಾವರಣಗೊಳಿಸಿದರು. ಪುರುಷ ಪ್ರಧಾನವೇ ಆಗಿರುವ ಬಿಎಂಟಿಸಿಯಲ್ಲಿ ಯಾವ ಪುರುಷರಿಗೂ ಕಡಿಮೆ ಇಲ್ಲದಂತೆ 3 ಸಾವಿರ ಮಹಿಳಾ ಸಿಬ್ಬಂದಿ ದುಡಿಯುತ್ತಿರುವುದನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಹೆಣ್ಣು ಮಕ್ಕಳಿಗೆ ವಯಸ್ಸು 24 ಆಗುತ್ತಿದ್ದಂತೆ ಪೋಷಕರ ದುಗುಡ ಶುರುವಾಗುತ್ತದೆ. ಮಗಳಿಗೊಂದು ಮದುವೆ ಮಾಡಿ ಕಳುಹಿಸಿಬಿಡಬೇಕು ಎನ್ನುವ ಧಾವಂತದಲ್ಲಿರುವ ಸಮಾಜದಲ್ಲೇ ನನ್ನ ಪೋಷಕರ ಸಹಕಾರದಿಂದ ನಾನು ಐಎಎಸ್ ಮುಗಿಸಲು ಸಾಧ್ಯವಾಯಿತು. ಆ ನಂತರವೂ ಕುಟುಂಬದ ಜವಾಬ್ದಾರಿಗಳು ಮಹಿಳೆಯನ್ನು ಅವರ ಸಾಧನಾ ಪಥದಿಂದ ಹಿಂದಕ್ಕೆ ಎಳೆಯುತ್ತಲೇ ಇರುತ್ತವೆ. ನನಗೂ ಇದೇ ಅನುಭವ ಆದರೂ ಕುಟುಂಬದವರ ಸಹಕಾರದಿಂದ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಮಹಿಳೆಯರ ಪರವಾಗಿ ಮಹಿಳಾ ಧ್ವನಿಗಳು ಹೆಚ್ಚಬೇಕು. ದೃಢಸಂಕಲ್ಪ ಅಗತ್ಯ ಎಂದು ಮಹಿಳಾ ಸಮುದಾಯಕ್ಕೆ ಕರೆ ನೀಡಿದರು
ನೀವೆಲ್ಲಾ ಐಪಿಎಸ್ ಮಾಡಿ ಏನು ಮಾಡೋಕಾಗತ್ತೆ ?
'...ನೀವೆಲ್ಲಾ ಐಪಿಎಸ್ ಮಾಡಿ ಏನು ಮಾಡೋಕಾಗತ್ತೆ?' ಎನ್ನುವ ಮೂದಲಿಕೆಯ ಮಾತನ್ನು ಐಪಿಎಸ್ ಮುಗಿಸಿದ ನಂತರವೂ ಸಹಪಾಠಿಗಳಿಂದ ಕೇಳಿಸಿಕೊಳ್ಳುತ್ತಲೇ ಬೆಳೆದದ್ದನ್ನು ಐಪಿಎಸ್ ಅಧಿಕಾರಿ ಹಾಗೂ ಬಂಧಿಖಾನೆ ಐಜಿಪಿ ಡಿ.ರೂಪಾ ತಮ್ಮ ಅನುಭವ ಹಂಚಿಕೊಂಡರು. ಸಣ್ಣವಳಿದ್ದಾಗ ಗಂಡು ಮಕ್ಕಳು ಪೊರಕೆ ಹಿಡಿಯಬಾರದು ಅದಕ್ಕೆ ಹೆಣ್ಣು ಮಕ್ಕಳಿದ್ದಾರೆ ಎನ್ನುವ ಅಜ್ಜಿ ಮಾತಿನಿಂದ ಹಿಡಿದು ಐಪಿಎಸ್ ಮುಗಿಸಿದರೂ ಅದೇ ಮನೋಭಾವದ ಮಾತುಗಳು ಮತ್ತೆ ಮತ್ತೆ ಕೇಳಿಸಿಕೊಳ್ಳುವ ಸಂದರ್ಭ ಬಂದರೂ ಮನೆಯವರು ಜತೆ ನಿಂತಾಗ ಸಾಧನೆಗೆ ಅಡ್ಡಿ ಆಗುವುದಿಲ್ಲ. ಸಮಾನತೆ ಮತ್ತು ಸಹಬಾಳ್ವೆ ಕುಟುಂಬದಿಂದಲೇ ಸಾಧ್ಯವಾಗಬೇಕು. ತಂದೆ ತಾಯಿಯ ನೆರವಿನಿಂದ ಐಪಿಎಸ್ ಮುಗಿಸಿದರೆ ನಂತರ ಮನೆಯವರ ಸಹಕಾರದಿಂದ ವೃತ್ತಿಯಲ್ಲೂ ಸಾಧನೆ ಮಾಡಲು ಸಾಧ್ಯವಾಯಿತು. 'ಆರತಿಗೊಬ್ಬಳು-ಕೀರುತಿಗೊಬ್ಬ' ಎನ್ನುವ ಮಾತು ಈಗ ಹಳಸಲಾಗಿದೆ. ಆರತಿ ಕೀರುತಿ ಎಲ್ಲದಕ್ಕೂ ಹೆಣ್ಣುಮಕ್ಕಳೇ ಸಾಕು ಎಂದು ಹೆಮ್ಮೆಯಿಂದ ಹೇಳಿ ಸಭಿಕರ ಆತ್ಮಸ್ಥೈರ್ಯ ಹೆಚ್ಚಿಸಿದರು.
ಸಂಸ್ಕಾರ-ಸಹಕಾರ ಬೇಕು
ಶಾಸಕಿ ಶಶಿಕಲಾ ನಿಪ್ಪಾಣಿ ಅವರ ಅನುಭವಗಳೇ ಮಹಿಳಾ ಸಮುದಾಯಕ್ಕೆ ದೊಡ್ಡ ಮಾದರಿ ಎನ್ನುವುದು ಅವರ ಮಾತುಗಳಲ್ಲೇ ವ್ಯಕ್ತವಾಯಿತು. 'ವಿಜಯ ಕರ್ನಾಟಕ' ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದು ಮತ್ತು ನಾನಾ ಕ್ಷೇತ್ರಗಳ ಸಾಧಕಿಯರನ್ನು ಆರಿಸುವಾಗ ಕಾಯ್ದುಕೊಂಡ ಸೂಕ್ಷ್ಮತೆ ಹಾಗೂ ಎಚ್ಚರಿಕೆಗೆ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಕ್ಕಮಹಾದೇವಿ ಮತ್ತು ವಚನಕಾರರ ವಚನಾಮೃತಗಳನ್ನೇ ಉದಾಹರಿಸುತ್ತಾ ಇವತ್ತಿನ ಸಾಧಕಿಯರು ಹಾಗೂ ಮಹಿಳೆಯರ ಸ್ಥಿತಿಗತಿಯನ್ನು ವಿವರಿಸಿದರು. ಕುಟುಂಬದಲ್ಲಿ ಸಿಗುವ ಸಂಸ್ಕಾರ ಮತ್ತು ಸಹಕಾರ ಮಹಿಳೆಯನ್ನು ಸಾಧನೆಯ ಮಾರ್ಗದಲ್ಲಿ ಮುನ್ನಡೆಸುತ್ತದೆ ಎನ್ನುವುದಕ್ಕೆ ನಾನೂ ಸಾಕ್ಷಿ ಎಂದರು. ನಿಪ್ಪಾಣಿ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿ ಜನರು ನನ್ನನ್ನು ಬೆಳೆಸಿದ್ದು ಸಹಕಾರ ನೀಡಿದ್ದನ್ನು ವಿವರಿಸಿದರು.
ಹಿಂದೆ ಮುಂದೆ ಬೇಡ ಜತೆಗಿರಿ
ಪ್ರತಿ ಯಶಸ್ವಿ ಪುರಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಾಗಲೀ, ಯಶಸ್ವಿ ಮಹಿಳೆಯ ಹಿಂದೆ ಪುರುಷ ಇರುತ್ತಾನೆ ಎನ್ನುವುದೆಲ್ಲಾ ಹಳಸಲು ಮಾತು. ಹಿಂದೆ ಮುಂದೆ ಏನೂ ಬೇಡ. ನಮ್ಮ ಜತೆಗೆ ಇರಿ ಸಾಕು ಎನ್ನುವ ಪಂಚಿಂಗ್ ಡೈಲಾಗ್ಗಳ ಮೂಲಕ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮಾತು ಆರಂಭಿಸಿದರು. ಹೆಣ್ಣು ಮಕ್ಕಳು ಮೊದಲ ಸಂಬಳ ಕೈಗೆ ಬಂದಾಗ ಮೊದಲು ಅಪ್ಪ ಅಮ್ಮರನ್ನು ನೆನಪಿಸಿಕೊಳ್ತೀವಿ. ಗಂಡು ಮಕ್ಕಳು ಮೊದಲು ತಮ್ಮ ಅಕೌಂಟ್ ತೆರೆಯುತ್ತಾರೆ. ನಾವು ಮುಂದೆ ಹೋದರೆ ನಿಮಗೆ ಹೊಟ್ಟೆಯುರಿ ಬರುತ್ತದೆ. ಆದ್ದರಿಂದ ಪುರುಷರು ಮಹಿಳೆಯರು ಜತೆ ಜತೆಯಾಗಿ ಹೆಜ್ಜೆ ಹಾಕಬೇಕು. ನಾನು 'ವಿಜಯ ಕರ್ನಾಟಕ'ದ ಮಗಳು. ಮಾಧ್ಯಮಗಳೇ ನನ್ನನ್ನು ಬೆಳೆಸಿದ್ದು. ಉಳಿಸಿದ್ದು. ವಿಕ ಕಾರ್ಯಕ್ರಮ ಸ್ವಾಭಿಮಾನಿ ಮಹಿಳೆಯರಿಗೆ ಹೆಮ್ಮೆಯ ಸಂಗತಿ ಎಂದರು.
ತಾಯಿತನ ಬಾಡಿಗೆ, ಬೇಕೇ ಈ ನಾಡಿಗೆ?
ಬಾಲಿವುಡ್ ಚಿತ್ರನಿರ್ದೇಶಕ ಕರಣ್ ಜೋಹರ್ ಇಬ್ಬರು ಮಕ್ಕಳನ್ನು ಬಾಡಿಗೆ ತಾಯಿಯ ಮೂಲಕ ಪಡೆದು, ದೇಶದಲ್ಲಿ ಸರೊಗಸಿಯ ಪ್ರಶ್ನೆಗೆ ಮತ್ತೆ ಚಾಲನೆ ನೀಡಿದ್ದಾರೆ. ಬಾಡಿಗೆ ತಾಯ್ತನ ನೈತಿಕವೋ, ಅನೈತಿಕವೋ ಎಂಬ ನೆಲೆಯಲ್ಲಿ ಚರ್ಚೆಗಳಾಗುತ್ತಿವೆ. ಕೇಂದ್ರ ಸರಕಾರ ಬಾಡಿಗೆ ತಾಯ್ತನದ ದುರುಪಯೋಗವನ್ನು ತಡೆಯಲು ನಿಯಂತ್ರಣ ವಿಧೇಯಕವನ್ನು ತರಲು ಮುಂದಾಗಿದೆ. ಅದೀಗ ಸಂಸದೀಯ ಆರೋಗ್ಯ ಸ್ಥಾಯಿ ಸಮಿತಿಯ ಮುಂದಿದೆ. ಸರೊಗಸಿಯ ವಾಣಿಜ್ಯೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ. ಈ ಹಿನ್ನೆಲೆಯಲ್ಲಿ ಎರಡು ಆಹ್ವಾನಿತ ಲೇಖನಗಳು ಹಾಗೂ ಓದುಗರ ಪ್ರತಿಕ್ರಿಯೆಗಳು ಇಲ್ಲಿವೆ.
ಬಾಡಿಗೆ ತಾಯ್ತನ ಬೇಡವೇ ಬೇಡ
ದತ್ತು ಪಡೆಯಲಿ
ಮಕ್ಕಳನ್ನು ಪಡೆಯಲಾಗಲಿಲ್ಲವೆಂಬ ನಿರಾಸೆ ಮತ್ತು ನೋವಿನಲ್ಲಿರುವ ದಂಪತಿಗಳಿಗೆ ಹಣ, ನೈತಿಕತೆ, ಸಂಸ್ಕೃತಿ, ಶೋಷಣೆ ಎಲ್ಲವುಗಳಿಗಿಂತ ತಾಯ್ತನದ ಪ್ರಶ್ನೆಯೇ ಹೆಚ್ಚೆನಿಸಿ ಮಕ್ಕಳನ್ನು ಹೊಂದುವ ಆಸೆಯಿಂದ ಸರೊಗಸಿಯ ಮೊರೆಹೋಗುತ್ತಾರೆ. ಅದರ ಬದಲಾಗಿ ಎಷ್ಟೋ ಅನಾಥ ಮಕ್ಕಳು ಹಸಿವಿನಿಂದ ನರಳುತ್ತಾ ಬಿಸಿಲಿನಲ್ಲಿ ಒಣಗುತ್ತಾ ಬೀದಿಯಾಶ್ರಯದಲ್ಲಿದ್ದಾರೆ. ಅಂತಹ ಮಕ್ಕಳನ್ನು ಕಾನೂನಿನನ್ವಯ ದತ್ತು ಪಡೆದು, ಬಾಡಿಗೆ ತಾಯಿಗೆ ನೀಡುವ ಮತ್ತು ವೈದ್ಯಕೀಯ ವೆಚ್ಚಕ್ಕೆ ವಿನಿಯೋಗಿಸುವ ಹಣದಿಂದಲೇ ಇಂತಹ ಮಕ್ಕಳ ಬದುಕಿಗೆ ಬೆಳಕಾಗಬೇಕು. ಅನಾಥ ಮಕ್ಕಳ ಬದುಕನ್ನು ಸುಖದ ಹಳಿಗೆ ತಂದು ಮಕ್ಕಳಿಲ್ಲವೆಂಬ ತಮ್ಮ ಹಳಹಳಿಯನ್ನು ದೂರ ಮಾಡಿಕೊಳ್ಳಬಹುದು. ದಾಂಪತ್ಯವೂ ಸುಖವಾಗಿ ವೃದ್ಧಾಪ್ಯವೂ ಸಾರ್ಥಕವಾಗಿರುತ್ತದೆ. ಇಂತಹ ನಡೆಗಳು ಸಂಸ್ಕೃತಿಯ ಶ್ರೀಮಂತ ಭಾಗಗಳಾಗುತ್ತವೆ.
- ಸೋಮು ಕುದರಿಹಾಳ, ಕೊಪ್ಪಳ
ಬಡವರು ಬಲಿಪಶು
ಮಗು ತಾಯಿಯ ಬಳಿ ಇರದೆ ಹೋದರೆ, ಪ್ರೀತಿ ಪಡೆಯದೆ ಹೋದರೆ ಮುಂದೆ ದೇಶಕ್ಕೆ ಮಾರಕವಾಗಬಹುದು. ಆದರೆ ಅದೇ ತಾಯಿಯ ಬಳಿ ಇದ್ದರೆ ತಾಯಿಯ ಪ್ರೀತಿ ವಾತ್ಸಲ್ಯದಿಂದ ಮುಂದೆ ಶಿವಾಜಿ, ವಿವೇಕಾನಂದರಂತಹ ಭಾರತೀಯ ಭವಿಷ್ಯದ ಹೆಮ್ಮೆಯ ಪುತ್ರರಾಗಿ ಬೆಳೆಯುತ್ತಾರೆ. 9 ತಿಂಗಳು ಮಗುವನ್ನು ಹೊತ್ತು ಹೆತ್ತು ಕೊನೆಗೆ ತಾಯಿಯ ಹೊಟ್ಟೆಯಿಂದ ಭೂತಾಯಿಯ ಮಡಿಲಿಗೆ ಬಿದ್ದ ತಕ್ಷ ಣ ಮಗುವಿಗೂ ತಾಯಿಗೂ ಋುಣಾನುಬಂಧ ತೀರಿತೆಂದು ದೂರ ಮಾಡುವುದು ಯಾವ ನ್ಯಾಯ? ಯಾವ ಸಂವಿಧಾನ, ಯಾವ ಕಾನೂನು ಹೇಳುತ್ತದೆ ಮಗುವನ್ನು ತಾಯಿಯಿಂದ ದೂರಮಾಡು ಅಂತ? ಬಾಡಿಗೆ ತಾಯ್ತನದಿಂದ ಪಡೆದ ಮಗು ತಾಯಿಯ ಮಡಿಲಲ್ಲಿ ಬೆಳೆಯದೆ ತಂದೆಯ ಅಧೀನದಲ್ಲಿ ಬೆಳೆಯುವುದರಿಂದ ಮುಂದೆ ಆ ಮಗು ದೇಶಕ್ಕೆ ಮಾರಕವಾಗಬಹುದು ಹಾಗೂ ಈ ಬಾಡಿಗೆ ತಾಯ್ತನ ಮುಂದೆ ಉದ್ಯಮವಾಗಿ ಬೆಳೆದು ಭವಿಷ್ಯದಲ್ಲಿ ಬಡವರ ಹೆಣ್ಣುಮಕ್ಕಳು ಬಲಿಪಶುಗಳಾಗುವ ವ್ಯವಸ್ಥೆ ಕಂಡುಬರಬಹುದು. ಹಣಕ್ಕಾಗಿ ಜಗತ್ತಿನಲ್ಲಿ ಇಂತಹ ಘಟನೆಗಳಿಗೆ ದಾರಿಯಾಗಿ ಭಯೋತ್ಪಾದನೆಗೂ ದಾರಿಮಾಡಿಕೊಡುತ್ತದೆ.
- ವೇಣುಗೋಪಾಲ್ ಟಿ.ಪಿ, ದುರ್ಗ, ಪಾವಗಡ
ದೇಶದ ಮಹಿಳೆಯ ಹಿತ
'ಬಾಡಿಗೆ ತಾಯಿ' ಎಂಬುದು ಅನೈತಿಕ ವ್ಯವಹಾರ. ಇದರಿಂದ ಬಡ ಮಹಿಳೆಯರಿಗೆ ಲಾಭವಾಗಬಹುದು, ಹಾಗೇ ಮೋಸವಾಗಬಹುದು. ಅಂಗವಿಕಲ ಮಗು ಹುಟ್ಟಿದರೆ ಅದನ್ನು ಪಡೆಯಲು ನಿರಾಕರಿಸಬಹುದು. ಗರ್ಭಪಾತವಾದರೆ ಹಣ ಕೊಡದೆ ವಂಚಿಸಬಹುದು. ಸಂಸ್ಕೃತಿಯ ಪಲ್ಲಟ, ಹೆಣ್ಣ ಮಕ್ಕಳ ಶೋಷಣೆ, ಉದ್ಯಮವಾಗಿ ಬಿಡಬಹುದು. ಮಕ್ಕಳಿಲ್ಲದ ಭಾರತೀಯ ದಂಪತಿಗೆ ಮಾತ್ರ ಬಾಡಿಗೆ ತಾಯ್ತನದ ಅವಕಾಶ ನೀಡಿ. ಭಾರತದ ಮಹಿಳೆಯರ ಹಿತ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಸರಕಾರ ಕೈಗೊಳ್ಳುವುದು ಉತ್ತಮ.
- ಪ್ರಕಾಶ ಮಾಗಳದ, ಹ್ಯಾರಡ
ಚೀನಾ ಮಾದರಿಯಾಗಲಿ
ಸರೊಗಸಿ ಪದ್ಧತಿಯು ನಮ್ಮ ದೇಶದಲ್ಲಿ ಬೇಡವೇ ಬೇಡ. ಬಂಜೆತನದ ಸಮಸ್ಯೆಯಿರುವವರು ದೇಶದಲ್ಲಿ ಕೆಲವೇ ಕೆಲವು ಮಹಿಳೆಯರಿದ್ದಾರೆ. ಮಾನವೀಯತೆಯಿಂದ ಅವರಿಗೆಲ್ಲ ಈ ಬಾಡಿಗೆ ತಾಯ್ತನದ ಪದ್ಧತಿ ಬೇಕು. ಆದರೆ ಈ ಕ್ರಮವನ್ನು ದೇಶದ ಶ್ರೀಮಂತರು ಬಂಜೆತನದ ಸಮಸ್ಯೆಯಿಲ್ಲದಿದ್ದರೂ ಕೂಡ, ಬಡತನದಲ್ಲಿರುವ ಮಹಿಳೆಯರಿಗೆ ಹಣವನ್ನು ನೀಡಿ, ಮಕ್ಕಳನ್ನು ಪಡೆಯಲು ಉಪಯೋಗಿಸಬಹುದು. ಶ್ರೀಮಂತ ಮಹಿಳೆಯರು ತಾಯ್ತನದ ಅನುಭವದಿಂದ ದೂರಾಗಬಹುದು. ಸಮಾಜದಲ್ಲಿ ಅಸಮಾನತೆ ಉಂಟಾಗಬಹುದು. ಬಡ ಹೆಣ್ಣುಮಕ್ಕಳು ತಮ್ಮ ಹೊಟ್ಟೆಪಾಡಿಗಾಗಿ, ಹಣದ ಆಮಿಷಕ್ಕೆ ಒಳಗಾಗಿ ಶ್ರೀಮಂತ ವರ್ಗದಿಂದ ಶೋಷಣೆಗೆ ಒಳಗಾಗಬಹುದು. ಬಂಜೆತನದವರಲ್ಲಿ ಶೇ.10ರಷ್ಟು ಜನರು ಪ್ರಾಮಾಣಿಕತೆಯಿಂದ ವರದಾನವಾಗಿ ಬಳಸಿಕೊಳ್ಳಬಹುದು. ಇನ್ನುಳಿದ ಶೇ.90 ನಾಗರಿಕರು ನೈತಿಕತೆಯ ಮಟ್ಟವನ್ನು ದಾಟಿ, ವಾಣಿಜ್ಯಾತ್ಮಕವಾಗಿ ಉದ್ಯೋಗವನ್ನೆ ನಡೆಸಿದರೆ ಹೇಗೆ? ಐವಿಎಫ್ ಕ್ರಮವು ವೈಜ್ಞಾನಿಕ ದೃಷ್ಟಿಯಲ್ಲಿ ಬಂಜೆತನದಲ್ಲಿರುವವರೆಗೆ ವರದಾನ. ಆದರೆ ವಾಣಿಜ್ಯಾತ್ಮಕವಾಗಿ ದೇಶದಲ್ಲಿ ಪಸರಿಸಿದರೆ, ಅಸಾಂಸ್ಕೃತಿಕ ಕ್ರಮಗಳು ಹೆಚ್ಚಾಗಿ ಸಮಾಜದಲ್ಲಿ ಅಸಂತೋಲನ ಹೆಚ್ಚಾಗಬಹುದು. ಭಾರತವು ಭವ್ಯ ಸಂಸ್ಕೃತಿಯ ಪರಂಪರೆಯ ಜನರ ಜೀವನ, ಆಚಾರ ವಿಚಾರಗಳನ್ನು ಹೊಂದಿದೆ. ಕಾನೂನಿನ ಮೂಲಕ ಇದಕ್ಕೆ ಅನುಮತಿ ದೊರೆತರೆ ದೇಶದ ಸಾಂಸ್ಕೃತಿಕ ಪರಂಪರೆಯ ಅಧಃಪತನಕ್ಕೆ ನಾಂದಿಯಾಗುತ್ತದೆ. ಚೀನಾದಂತೆ ಇಲ್ಲೂ ಸಂಪೂರ್ಣವಾಗಿ ಸರೊಗಸಿ ನಿಷೇಧಿಸಬೇಕು.
- ಬೀರಪ್ಪ ದು.ಡಂಬಳಿ, ಕೋಹಳ್ಳಿ, ಅಥಣಿ
ಹಿಂಬಾಗಿಲಿನ ವ್ಯವಹಾರ
ಬಾಡಿಗೆ ತಾಯಿಯಾಗಲು ಇರುವ ಕಾನೂನುಗಳನ್ನು ನೀವೇ ಪ್ರಕಟಿಸಿರುವುದನ್ನು ಓದಿದಾಗ, ಈಗಾಗಲೇ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದಿರುವವರಿಗೆ ಮಕ್ಕಳನ್ನು ಪಡೆಯಲು ಅರ್ಹತೆಯೇ ಇಲ್ಲ ಅನಿಸಿತು. ತಾಯ್ತನ ಎನ್ನುವುದು ಪ್ರಕೃತಿ ಹೆಣ್ಣಿಗೆ ನೀಡಿರುವ ವರ, ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಥವಾ ತಮ್ಮ ಭವಿಷ್ಯಕ್ಕಾಗಿ ಮಕ್ಕಳನ್ನು ಪಡೆದುಕೊಳ್ಳುವುದೂ ಕೂಡ ಹೆಣ್ಣಿನ ಶೋಷಣೆ. ಕಾನೂನಿನಲ್ಲಿ ಹಣಕ್ಕೋಸ್ಕರ ಬಾಡಿಗೆ ತಾಯಿಯಾಗುವುದಕ್ಕೆ ಅವಕಾಶವಿಲ್ಲದಿದ್ದರೂ ವ್ಯವಹಾರಗಳೆಲ್ಲ ಹಿಂಬಾಗಿಲಿನಲ್ಲಿ ನಡೆಯುವುದು ಗೊತ್ತಿರುವ ವಿಚಾರ. ಯಾವುದೇ ಕಲ್ಲು ಮನಸ್ಸಿನ ಹೆಂಗಸಾದರೂ, ಮಕ್ಕಳನ್ನು ತನ್ನ ಕರುಳ ಕುಡಿಯೆಂದೇ ಭಾವಿಸಿರುತ್ತಾಳೆ. ಮಕ್ಕಳನ್ನು ಹೆತ್ತು ಸಂಬಂಧಪಟ್ಟವರಿಗೆ ನೀಡಿದ ನಂತರ ಆಕೆ ಅನುಭವಿಸುವ ಕರುಳ ವೇದನೆ ತಾಯಿಗಲ್ಲದೆ ಮತ್ಯಾರಿಗೂ ತಿಳಿಯದು. ಮಕ್ಕಳನ್ನೂ ಕೂಡ ತಾಯಿಯ ಮೊಲೆ ಹಾಲಿನಿಂದ ವಂಚಿಸಿದರೆ ಅದೊಂದು ಪಾಪದ ಕೆಲಸವೇ ಸರಿ. ಇಂದಿನ ಪ್ರಪಂಚ ಕೇವಲ ಹಣದಿಂದ ಮೌಲ್ಯ ಮಾಡುತ್ತಿರುವಾಗ ತಾಯ್ತನವೂ ಕೂಡ ಮೌಲ್ಯ ಕಳೆದುಕೊಂಡ ವಸ್ತುವಾಗುತ್ತದೆಯೇ ಪರಂತು ಕರುಳಿನಬಳ್ಳಿಯಾಗುವುದಿಲ್ಲ.
- ಬ್ಯಾಂಕ್ ಶಿವಕುಮಾರ್, ಮೈಸೂರು
ವಿಲಾಸೀ ಉದ್ಯಮ
ಮದುವೆಯಾಗದ ಜೋಡಿಗಳು, ಲಿವಿಂಗ್ ಟುಗೆದರ್ ಸಂಗಾತಿಗಳು, ವಿದೇಶಿಗರು, ಬಾಡಿಗೆ ತಾಯಿಯರನ್ನು ಪಡೆಯುವುದಕ್ಕೆ ನಿಯಂತ್ರಣ ಹೇರುವುದರೊಂದಿಗೆ, ವಾಣಿಜ್ಯ ಕಾರಣಕ್ಕಾಗಿ ಬಾಡಿಗೆ ತಾಯಿಯಾಗುವದನ್ನೂ ನಿಷೇಧಿಸಲಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ಖ್ಯಾತ ಸೆಲೆಬ್ರಿಟಿಗಳೂ ಸಹ ಪತ್ನಿಯರಿಗೆ ಪ್ರಸವದ ನೋವಿನ ಉಸಾಬರಿಯೇ ಬೇಡವೆಂದು, ಸರೋಗಸಿ ಪದ್ಧತಿಯಿಂದ ಮಕ್ಕಳನ್ನು ಪಡೆಯಲು ಮುಂದಾಗುತ್ತಿರುವದು ಆಕ್ಷೇಪಾರ್ಹ. ಇಂದಿನ ದಿನಗಳಲ್ಲಿ ಬಾಡಿಗೆ ತಾಯ್ತನವೆಂಬುದು ಹಣವಿರುವವರ ಹುಚ್ಚಾಟವೆನಿಸುವಷ್ಟು ದೊಡ್ಡ ಉದ್ಯಮವಾಗಿ ಬೆಳೆದಿದೆ. ನಮ್ಮ ಸಂಸ್ಕೃತಿಯಲ್ಲಿ ಹಣಕ್ಕಾಗಿ ಮಗುವನ್ನು ಹೆತ್ತುಕೊಡುವವರನ್ನು ಗೌರವಿಸುವವರು ಕಡಿಮೆ. ಬಾಡಿಗೆ ತಾಯಂದಿರಾಗಲು ಸಮ್ಮತಿಸುವ ಬಡ ಮಹಿಳೆಯರು, ಮಧ್ಯವರ್ತಿಗಳ ಬಿಗಿ ಮುಷ್ಟಿಯಲ್ಲಿ ಸಿಲುಕುವ ಸಂಭವವೇ ಜಾಸ್ತಿ. ಅಂಗವಿಕಲ ಮಕ್ಕಳನ್ನು ಸ್ವೀಕರಿಸಲು ನಿರಾಕರಿಸುವದು, ಮಹಿಳೆಗೆ ಗರ್ಭಪಾತವಾದಾಗ ತೋರುವ ನಿಷ್ಕಾಳಜಿ, ಅವಳಿ ಮಕ್ಕಳಾದರೆ ಒಂದೇ ಮಗುವನ್ನು ಬಾಡಿಗೆದಾತರು ಸ್ವೀಕರಿಸುವದು, ಇಂತಹ ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕಿರುವ ಬಾಡಿಗೆ ತಾಯ್ತನವೆಂಬ ವಿಲಾಸೀ ಉದ್ಯಮ ಬೇಡವೇ ಬೇಡ.
- ಜಯಶ್ರೀ ಕಾಲ್ಕುಂದ್ರಿ, ಇಟ್ಟಮಡು, ಬೆಂಗಳೂರು
ಸಾಮಾಜಿಕ ಸಮಸ್ಯೆ
ಶೋಷಣೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮುಂತಾದ ಸಮಸ್ಯೆಗಳ ಜೊತೆಗೆ ಭ್ರೂಣ ಹತ್ಯೆ, ಬಾಡಿಗೆತನದ ತಾಯಿತನ ಕೂಡ ಸಾಮಾಜಿಕ ಸಮಸ್ಯೆಯಾಗಿದೆ. ಒಂಬತ್ತು ತಿಂಗಳು ಹೊತ್ತು ಹೆತ್ತು ಆ ಮಗುವನ್ನು ಬೇರೆಯವರಿಗೆ ನೀಡುವ ಆ ತಾಯಿಯ ಯಾತನೆ ದೇವರೇ ನೋಡಬೇಕು. ಇಂದು ರಹಸ್ಯವಾಗಿ ನಡೆಯುವ ಭ್ರೂಣ ಮಾರಾಟ ಜಾಲ ಬಾಡಿಗೆ ತಾಯಿತನದ ಇನ್ನೊಂದು ಮುಖವಾಗಿದೆ. ಖಂಡಿತವಾಗಿಯೂ ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದದ್ದು.
- ಡಾ.ಕೃಷ್ಣ ಹೊಸಮನಿ ಸುರಪುರ, ಯಾದಗಿರಿ
ಎಂತಹಾ ಸಂದೇಶ?
ಮೊದಲೇ ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿ ಸ್ಫೋಟ ಆಗ್ತಿದೆ. ಇರುವ ಮಕ್ಕಳಿಗೇ ಸರಿಯಾದ ಆರೈಕೆ, ಪ್ರೀತಿ ಸಿಗುತ್ತಿಲ್ಲ. ಜನ್ಮ ಕೊಟ್ಟಾದ ಮೇಲೆ ಅಪ್ಪ, ಅಮ್ಮ ವಿಧಿಯಿಲ್ಲದೆ ಬೇರಾಗಿಯೋ, ಅಥವಾ ಇಬ್ಬರಲ್ಲೊಬ್ಬರು ಇಲ್ಲವಾದ ಅನಿವಾರ್ಯತೆ ಇದ್ದರೋ ಸರಿ. ಮಗುವನ್ನು ಒಬ್ಬರೇ ಬೆಳೆಸಬೇಕಾದ ಅನಿವಾರ್ಯತೆ ಬರುತ್ತೆ. ಆದರೆ ಅಂಥಾ ಅನಿವಾರ್ಯತೆ ಇಲ್ಲದಾಗ, ಅದರಲ್ಲೂ ತಾವೇ ಆಯ್ದುಕೊಂಡು ಸಿಂಗಲ್ ಆಗಿರುವಾಗ ಬಾಡಿಗೆ ತಾಯಿಯ ಮೊರೆಹೋಗಿ ತಂದೆ ಆಗಬೇಕಾದ ಅನಿವಾರ್ಯತೆ ಇದೆಯಾ? ಅದೂ ಅವಳಿಜವಳಿಗೆ? ಇವರೊಬ್ಬ ಹೆಸರಾಂತ ಬಾಲಿವುಡ್ ನಿರ್ದೇಶಕ. ಮಗುವನ್ನು ಭೂಮಿ ಮೇಲೆ ತರುವುದಷ್ಟೇ ಜವಾಬ್ದಾರಿಯಾ? ಮತ್ತೊಬ್ಬರು ಒಂದು ಹೆಣ್ಣು, ಒಂದು ಗಂಡು ಮಗುವಿರುವ ಹೆಸರಾಂತ ಬಾಲಿವುಡ್ ಹೀರೋ. ಬಾಡಿಗೆ ತಾಯಿ ಮೂಲಕ ಮೂರನೆಯ ಮಗು ಪಡೆದಿದ್ದಾರೆ. ಇವರಿಬ್ಬರೂ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ಜನಸಂಖ್ಯಾ ಸ್ಫೋಟದ ಬಗ್ಗೆ ಜನಸಾಮಾನ್ಯರಿಗೆ ತಿಳಿಹೇಳಬೇಕಾದವರು. ಎಂತಹಾ ಸಂದೇಶ ಕೊಡುತ್ತಿದ್ದಾರೆ! ಮಗುವಿನ ಆಸೆ ಇದ್ದರೆ ಬೇಕಾದಷ್ಟು ಅನಾಥ ಮಕ್ಕಳಿವೆ. ದತ್ತು ತೆಗೆದುಕೊಂಡರೆ ಹೇಗಿರುತ್ತಿತ್ತು ಅಲ್ಲವೆ?
- ಜ್ಯೋತಿ ಉಮೇಶ್, ಮೇಟಗಳ್ಳಿ, ಮೈಸೂರು
ಭಾವನಾತ್ಮಕ ಸಂಬಂಧ
ಬಾಡಿಗೆ ತಾಯಿಯಿಂದ ಮಕ್ಕಳನ್ನು ಪಡೆಯುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಬಾಡಿಗೆ ತಾಯಿಯು ಮಗುವನ್ನು ಹೆತ್ತ ನಂತರ ಮಗುವಿನ ಮೇಲೆ ಭಾವನಾತ್ಮಕ ಸಂಬಂಧ ಹೊಂದಬಹುದು. ಇದರಿಂದ ಆ ಬಾಡಿಗೆ ತಾಯಿಯು ಮಾನಸಿಕವಾಗಿ ಕುಂದಬಹುದು. ಬಾಡಿಗೆ ತಾಯಿಯು ಆಕಸ್ಮಾತ್ ಯಾವುದೇ ರೋಗದಿಂದ ಬಳಲುತ್ತಿದ್ದರೆ ಮಗುವಿಗೂ ಆ ರೋಗ ಅನುವಂಶೀಯವಾಗಿ ಬರಬಹುದು. ಬಾಡಿಗೆ ತಾಯಿಯು ಇದನ್ನೆ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ಮಗು ಪಡೆದ ದಂಪತಿಗೆ ಮಗುವಿನ ಮೇಲೆ ಭಾವನಾತ್ಮಕ ಸಂಬಂಧ ಇಲ್ಲದೆ ಇರಬಹುದು. ಜನಸಾಮಾನ್ಯರು ಈ ವಿಧಾನದ ಮೂಲಕ ಮಗುವನ್ನು ಪಡೆಯಲು ದುಬಾರಿಯಾದುದಾಗಿದೆ. ಇದಕ್ಕೆ ಪರಿಹಾರ ಎಂದರೆ, ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು.
- ಗಜಾನನ ಎನ್ ಭಟ್ಟ, ಉಮ್ಮಚಗಿ, ಯಲ್ಲಾಪುರ ತಾ.
ಹಣದಾಸೆಗೆ ಬೇಡ
ಪ್ರತಿಷ್ಠಿತರು ತಮ್ಮ ಬಳಿ ಹಣ ಇದ್ದ ಮಾತ್ರಕ್ಕೆ ಬಾಡಿಗೆ ತಾಯ್ತನವನ್ನು ದುರುಪಯೋಗ ಮಾಡಿಕೊಳ್ಳಬಾರದು. ಮಕ್ಕಳಗಾಗಿ ಹಂಬಲವಿದ್ದರೆ ಅಥವಾ ಬೇಕು ಎಂದರೆ, ಅನಾಥಾಲಯದ ಮಕ್ಕಳನ್ನು ದತ್ತು ಪಡೆದುಕೊಳ್ಳಿ. ಅಮಾಯಕ ಹೆಣ್ಣುಮಕ್ಕಳಿಗೆ ಹಣದಾಸೆ ತೋರಿಸಿ, ಅವರಿಂದ ಮಕ್ಕಳನ್ನು ಪಡೆದುಕೊಳ್ಳುವುದು ಹೀನಕೃತ್ಯಕ್ಕೆ ಸಮ.
- ಶ್ರೀರಂಗ ಪುರಾಣಿಕ, ವಿಜಯಪುರ
ಮಗುವಿನ ತುಮುಲ
ಬಾಡಿಗೆ ತಾಯಿಯಿಂದ ಮಗುನ ತಗೊಂಡ್ರೆ ಆ ಮಗುಗೆ ಒಂದು ದಿನ ತಾನು ಬಾಡಿಗೆ ತಾಯಿಯ ಮೂಲಕ ಜನಿಸಿದ್ದು ಗೊತ್ತಾಗುತ್ತದೆ. ಆಗ ಆ ಮಗುವಿನ ಭಾವನೆಗಳ ತಮುಲಕ್ಕೆ ಎಲ್ಲಿದೆ ಪರಿಹಾರ? ಇದು ಭಾವನಾತ್ಮಕ ವಿಚಾರ. ಹಾಗಾಗಿ, ಬಾಡಿಗೆ ತಾಯಿ ಮೂಲಕ ಪಡೆಯುವುದು ತಪ್ಪು.
- ಯತೀಶ ಗೌಡ (ಹಾಸನ), ಮಸ್ಕಟ್, ಓಮನ್
--------------------------------------------
-ಇದರಲ್ಲಿ ತಪ್ಪೇನಿದೆ?-
ಕೊರಗುವವರಿಗೆ ಆಸರೆ
ಪೂಜೆಗಾಗಿ ನಮ್ಮ ಮನೆ ಅಂಗಳದಲ್ಲಿ ಹೂ ಇಲ್ಲವೆಂದಾದರೆ ಪಕ್ಕದ ಮನೆ ಬಳ್ಳಿಲೋ, ಆಚೆ ಬೀದಿ ಗಿಡದಲ್ಲೋ ತಂದು ಪೂಜೆ ಮಾಡ್ತೀವಿ; ಪೂಜೆಗೆ ಅಂದಮೇಲೆ ಯಾರೂ ಅಭ್ಯಂತರ ಕೂಡಾ ಮಾಡಲ್ಲ. ಹಾಗೇ ಈ ಬಾಡಿಗೆ ತಾಯಿ ವಿಚಾರ ಸಹ. ಮಾತೃತ್ವದ ಕೊರತೆಯಿಂದ ಕೊರಗೋ ತಾಯಿಗೆ ಸಣ್ಣ ಆಸರೆ ಆಗುತ್ತೆ ಅನ್ನುವುದಾದರೆ ಆಗಲಿ ಬಿಡಿ. ನಗರ ಪ್ರದೇಶಗಳಲ್ಲಿ ಹೇಗೋ ಗ್ರಾಮೀಣ ಪ್ರದೇಶಗಳಲ್ಲಿ 'ಬಂಜೆಂಬ ಶಬುದ ಹೊರಲಾರೆ' ಅನ್ನುವ ಸಂಕಟದಲ್ಲಿರುವ ತಾಯಂದಿರಿಗೆ ಬಾಡಿಗೆ ತಾಯಂದಿರಿಂದ ತಾಯ್ತನ ಸಿಗಲಿ! ಆದರೆ ಹಣದ ಶೋಕಿಗೆ, ಸಮಾಜಸೇವೆಯ ತೋರಿಕೆಗೆ, ದುಡ್ಡಿನ ಸಂಪಾದನೆಗೆ ಇದು ದುರುಪಯೋಗವಾಗಬಾರದು ಅಷ್ಟೆ!
- ಸಂತೆಬೆನ್ನೂರು ಫೈಜ್ನಟ್ರಾಜ…
ತಾಯ್ತನದಷ್ಟೇ ಸಹಜ
ದತ್ತು ತೆಗೆದುಕೊಂಡ ಮಕ್ಕಳು ನಮ್ಮದಾಗಬಹುದು, ಹಾಗೆ ನೋಡುವ ತಾಯ್ತನ, ತಂದೆತನ ಬೇಕು. ಆದರೆ ಎಲ್ಲರಿಂದಲೂ ಇದು ಸಾಧ್ಯವಿಲ್ಲ. ಮಕ್ಕಳಲ್ಲೂ ತಮ್ಮದೇ ಜೀನ್ ಹರಿಯಲಿ, ಅವು ತಮ್ಮ ಮಕ್ಕಳೇ ಆಗಿರಲಿ ಎಂಬುದು ಹೆಚ್ಚಿನ ಎಲ್ಲ ಮನುಷ್ಯರ ಆಸೆ. ಇದನ್ನು ತಪ್ಪೆನ್ನಲು ಸಾಧ್ಯವೇ ಇಲ್ಲ. ಇದಕ್ಕೆ ಇರುವ ಏಕೈಕ ಮಾರ್ಗವೇ ಸರೊಗಸಿ. ಜನಸಂಖ್ಯೆಯನ್ನು ನಿಯಂತ್ರಿಸಲು ಸರೊಗಸಿ ಬ್ಯಾನ್ ಮಾಡಬೇಕೆನ್ನುವುದು ಅರ್ಥಹೀನ. ಮಕ್ಕಳನ್ನು ಸಾಕಲು ಸಾಮರ್ಥ್ಯ ಇಲ್ಲದವರಾರಯರೂ ಬಾಡಿಗೆ ತಾಯ್ತನದ ಮೊರೆ ಹೋಗುವುದಿಲ್ಲ. ದಾಂಪತ್ಯದಲ್ಲಿ ಸರಿಯಾಗಿಲ್ಲದೆ ವಿಚ್ಛೇದನ ತೆಗೆದುಕೊಳ್ಳುವವರು, ಸಂಗಾತಿಯನ್ನು ಹಿಂಸಿಸುವವರು ಎಲ್ಲ ಕಾಲದಲ್ಲೂ ಎಲ್ಲ ದೇಶದಲ್ಲೂ ಇರುತ್ತಾರೆ. ಹಾಗೆಂದು ಮದುವೆಯನ್ನೇ ನಿಷೇಧಿಸಲಾಗುವುದಿಲ್ಲ. ಸಲಿಂಗಿಗಳು, ಲಿಂಗಪರಿವರ್ತಿತರು, ಉಭಯಲಿಂಗಿಗಳು ನೈಸರ್ಗಿಕವಾಗಿ ಮಕ್ಕಳನ್ನು ಪಡೆಯಲಾಗುವುದಿಲ್ಲ. ಹಾಗೆಂದು ಅವರ ತಾಯ್ತನದ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ. ದುರುಪಯೋಗ ತಡೆಯಲು ಕಠಿಣ ಕಾಯಿದೆ ಜಾರಿ ಮಾಡಿದರೆ ಸರೊಗಸಿ ಎಂಬುದು ಇತರ ತಾಯ್ತನದಷ್ಟೇ ಸಹಜವಾಗಬಹುದು, ಆಗಬೇಕು.
- ವಿನೀತಾ ನಾಯಕ್, ತುಮಕೂರು
ಬೇರೆ ಯಾವುದೇ ವಿಧಾನದಿಂದ ಮಕ್ಕಳನ್ನು ಪಡೆಯಲು ಅಸಮರ್ಥರಾದ ದಂಪತಿಗಳು, ಅದನ್ನು ಸಾಕುವ ಸಾಮರ್ಥ್ಯವಿದ್ದವರು ಮಕ್ಕಳನ್ನು ಪಡೆಯಲು ಸೂಕ್ತವಾದ ವಿಧಾನ ಸರೊಗಸಿ. ಮಕ್ಕಳಿಲ್ಲದ ವೇದನೆ, ದುಃಖದಿಂದ ಖಿನ್ನತೆಗೆ ಜಾರುವ ಎಷ್ಟೋ ಮಂದಿಯನ್ನು ನಾವು ನೊಡಿದ್ದೇವೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೂ ಹೋಗುತ್ತಾರೆ. ಅಂತಿರುವಾಗ, ಕೆಲವರು ಸರೊಗಸಿಯ ಮೂಲಕ ಮಕ್ಕಳನ್ನು ಪಡೆದರೆ ಸಮಾಜ ಯಾಕೆ ಕೆಂಡ ಕಾರಬೇಕು?
- ಗೀತಾ ಭಟ್, ಭದ್ರಾವತಿ
ಪುಣ್ಯದ ಕೆಲಸ
ಎಷ್ಟೋ ಜನರಿಗೆ ಮಕ್ಕಳು ಜನಿಸುವ ಭಾಗ್ಯ ಇಲ್ಲ. ಆದರೆ ಬಾಡಿಗೆ ಅಮ್ಮಂದಿರು ಅನಿಸಿಕೊಳ್ಳುವವರಿಗೆ ಈ ಭಾಗ್ಯ ಹೇರಳ ಎಂದರೂ ತಪ್ಪಿಲ್ಲ. ಇದೊಂದು ಪುಣ್ಯದ ಕೆಲಸ ಹೌದು. ಅದನ್ನು ದುರುಪಯೋಗಪಡಿಸಿಕೊಳ್ಳುವುದು ಮಾತ್ರ ಅಪಾಯಕಾರಿ. ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ನಿಜ, ಆದರೆ ತಾಯ್ತನ ಮಾರಿಕೊಳ್ಳುವಂತದಲ್ಲ.
- ಅಕ್ಷ ತಾ ಅಡಿಗ, ಸಾಸ್ತಾನ, ಕುಂದಾಪುರ
ಇದರಲ್ಲಿ ತಪ್ಪೇನಿದೆ?
ಸರಿಯಾದ ರೀತಿಯಲ್ಲಿ ಕಾನೂನಿನ ಕಾಯ್ದೆಗಳನ್ನು ಮಾಡುವ ಮೂಲಕ ಬಾಡಿಗೆ ತಾಯಂದಿರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಮತ್ತೊಂದು ಹೆಣ್ಣಿಗೆ ತಾಯಿ ತನ್ನದ ಸಂತೋಷವನ್ನು ನೀಡುವುದರಲ್ಲಿ ಯಾವುದೇ ರೀತಿಯ ತಪ್ಪು ಅಲ್ಲ. ಆದರೆ ಇದನ್ನೇ ಒಂದು ಉದ್ಯಮವಾಗಿ ಬಳಸಿಕೊಳ್ಳುವುದು ತಪ್ಪು.
- ಭಾಗ್ಯಶ್ರೀ ರಜಪೂತ, ಧಾರವಾಡ
ಸಂಸ್ಕೃತಿ ಲೇಪನ ಬೇಡ
ಬಂಜೆತನ ಸಮಸ್ಯೆಯಿಂದ ಬಳಲುವ ದಂಪತಿಗೆ ಬಾಡಿಗೆ ತಾಯಿ ಮೂಲಕ ಮಕ್ಕಳು ಪಡೆಯುವುದು ಅವರ ಹಕ್ಕು. ಭಾರತದಲ್ಲಿ ಬಂಜೆತನ ಸಮಸ್ಯೆ ತೀವ್ರವಾಗಿದೆ. ಇದಕ್ಕೆ ಬಾಡಿಗೆ ತಾಯಿ ಪರಿಹಾರವಷ್ಟೆ. ಅದಕ್ಕೆ ನೈತಿಕತೆ, ಸಂಸ್ಕೃತಿ ಲೇಪನ ಹಚ್ಚುವುದು ಬೇಡ. ಮಕ್ಕಳನ್ನು ಪಡೆಯುವ ಆಸೆಗೆ ಇದೊಂದು ಸಾಧನ ಎಂದು ಭಾವಿಸಿದರೆ ಸಾಕು.
- ಯಮನಪ್ಪ ತಳವಾರ, ಅಥಣಿ
ಹೊಸ ಆವಿಷ್ಕಾರ ಸ್ವೀಕರಿಸಿ
ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಸಂಪ್ರದಾಯದ ಮನಸ್ಸು ಅಷ್ಟು ಸರಳವಾಗಿ ಸ್ವೀಕರಿಸುವುದಿಲ್ಲ. ಬಾಡಿಗೆತಾಯಿ ಮೂಲಕ ಮಕ್ಕಳನ್ನು ಪಡೆಯುವುದರಿಂದ ಯಾವುದೇ ವೈದ್ಯಕೀಯ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಸಾಬೀತಾಗಿದೆ. ಹೀಗಿರುವಾಗ ನಾವು ಅನ್ಯ ಕಾರಣಗಳನ್ನು ಮುಂದಿಟ್ಟುಕೊಂಡು ಅದನ್ನು ವಿರೋಧಿಸುವುದು ಎಷ್ಟು ಸರಿ?
- ಯಶಸ್ವಿನಿ ಪಾಟೀಲ್, ವಿಜಯಪುರ
ಭಾರತೀಯರಿಗೆ ‘ವೇದವ್ಯಾಸ’ರು ಬೇಡವೆ?
ವಸುಧೇಂದ್ರ ಮದುವೆಯೆನ್ನುವುದು ಮನುಷ್ಯರು ತಮ್ಮ ಸಮಾಜದ ಒಳಿತಿಗಾಗಿ ತಾವೇ ಮಾಡಿಕೊಂಡ ಒಂದು ಸಾಮಾಜಿಕ ಬಂಧನ. ಆದರೆ ಮಗುವನ್ನು ಹೊಂದಬೇಕೆನ್ನುವ ಬಯಕೆ, ಮದುವೆಯೆಂಬ ಮಾನವ ನಿರ್ಮಿತ ಧಾರ್ಮಿಕ ನಿಯಮವನ್ನು ಮೀರಿದ್ದಾಗಿದೆ. 'ಬಾಡಿಗೆ ತಾಯ್ತನ' ಎನ್ನುವುದು ಭಾರತೀಯರಿಗೆ ಹೊಸ ಸಂಗತಿಯೇನೂ ಅಲ್ಲ. ಮಹಾಭಾರತದಲ್ಲಿ ಯಥೇಚ್ಛವಾಗಿ ಬಾಡಿಗೆ ತಾಯ್ತನದ ಉದಾಹರಣೆಗಳು ಕಂಡುಬರುತ್ತವೆ. ತಕ್ಷ ಣಕ್ಕೆ ನೆನಪಿಗೆ ಬರುತ್ತಿರುವುದು ಪರಾಶರ ಮುನಿಯ ಕತೆ. ಈತನು ತನ್ನ ವಿದ್ಯೆಯನ್ನು ತನ್ನ ಪುತ್ರನಿಗೆ ಧಾರೆಯೆರೆದು ಕೊಡಬೇಕೆಂದು ನಿಶ್ಚಯಿಸುತ್ತಾನೆ. ಆದರೆ ಅವನಿಗೆ ಸಂತತಿ ಇರುವುದಿಲ್ಲ. ಅವನ ಪತ್ನಿಯ ವಿವರವೂ ಮಹಾಭಾರತದಲ್ಲಿ ಕಾಣುವುದಿಲ್ಲ. ಈತನು ಸತ್ಯವತಿಯನ್ನು ಯಮುನೆಯ ತೀರದಲ್ಲಿ ಭೇಟಿಯಾಗಿ, ಅವಳ ಗರ್ಭವನ್ನು ಬಾಡಿಗೆ ಪಡೆದು, ತನ್ನ ಮಗುವನ್ನು ಮಾಡಿಕೊಳ್ಳುತ್ತಾನೆ. ಅನಂತರ ಆ ಮಗುವನ್ನು ತನ್ನೊಡನೆ ಕರೆದುಕೊಂಡು ಹೋಗುತ್ತಾನೆ. ಆ ಮಗುವಿಗೆ ತನ್ನಿಷ್ಟದಂತೆ ವಿದ್ಯೆಯನ್ನು ಧಾರೆಯೆರೆಯುತ್ತಾನೆ. ಆ ಮಗುವೇ ಮುಂದೆ ವೇದವ್ಯಾಸನಾಗಿ ಜಗದ್ವಿಖ್ಯಾತನಾಗುತ್ತಾನೆ. ಈ ವೇದವ್ಯಾಸನು ತನ್ನ ಬದುಕಿನಲ್ಲಿ ಸತ್ಯವತಿಯನ್ನು ತಾಯಿಯಾಗಿ ಕಂಡು ಮಗನ ಕರ್ತವ್ಯ ನಿರ್ವಹಿಸುತ್ತಾನಾದರೂ, ಪರಾಶರ ಮುನಿಯು ಸತ್ಯವತಿಯನ್ನು ಪತ್ನಿಯಾಗಿ ಸ್ವೀಕರಿಸಿ ಬಾಳಿದ ವಿವರವಂತೂ ಮಹಾಭಾರತದಲ್ಲಿ ಇಲ್ಲ. ಅವನ ಉದ್ದೇಶ ಕೇವಲ ಸತ್ಯವತಿಯ ಮೂಲಕ ತನ್ನ ವೀರ್ಯಕ್ಕೆ ತಕ್ಕ ಮಗುವನ್ನು ಪಡೆದುಕೊಂಡು ಹೋಗುವುದಷ್ಟೇ ಆಗಿದೆ. ಅದಕ್ಕೆ ಪ್ರತಿಯಾಗಿ ಅವಳ ಮೈಯಿಂದ ಯಾವತ್ತೂ ಸುಗಂಧವು ಹೊಮ್ಮುತ್ತಲಿರಲಿ ಎಂದು ವರವನ್ನು ಕೊಡುತ್ತಾನೆ. ಇದು ನಿಸ್ಸಂಶಯವಾಗಿ ನಾವಿಂದು ಹೇಳುತ್ತಿರುವ 'ಬಾಡಿಗೆ ತಾಯ್ತನ'ದ ಪದ್ಧತಿಯಲ್ಲದೆ ಬೇರೇನೂ ಅಲ್ಲ. ನಮ್ಮ ಸರಕಾರ ಸದ್ಯದಲ್ಲಿಯೇ ತರಲು ಹೊರಟಿರುವ ಕಾನೂನಿನಲ್ಲಿ ವೇದವ್ಯಾಸನ ಜನನವನ್ನು ಅಕ್ರಮವಾಗಿ ಕಾಣಲಾಗುತ್ತಿದೆ. ಪರಾಶರನು ಸತ್ಯವತಿಯ ಗರ್ಭದಾನ ಪಡೆಯುವುದು ಅಷ್ಟು ಸುಲಭವಂತೂ ಅಲ್ಲವೇ ಅಲ್ಲ. ಪರಾಶರ ಮದುವೆಯಾಗಿ ಪತ್ನಿಯ ಜೊತೆ ಐದು ವರ್ಷ ಬಾಳಿ, ಮಕ್ಕಳಾಗಲಿಲ್ಲ ಎಂದು ನಿರೂಪಿಸಿದ ನಂತರ ಬಾಡಿಗೆ ತಾಯ್ತನಕ್ಕೆ ತೆರೆದುಕೊಳ್ಳಬಹುದಾಗಿದೆ. ಪರಾಶರ ಅದನ್ನೂ ಮಾಡಿದನೆಂದುಕೊಳ್ಳಿ. ಆದರೆ ಬ್ರಾಹ್ಮಣನಾದ ಆತ ತನ್ನದೇ ಬಂಧು-ಬಳಗದಲ್ಲಿ ಯಾರಾದರೂ ಮಹಿಳೆಯನ್ನು ಕೇಳಿಕೊಂಡು ಮಗುವನ್ನು ಪಡೆದುಕೊಳ್ಳಬೇಕೇ ಹೊರತು, ಶೂದ್ರ ಸ್ತ್ರೀಯಾದ ಸತ್ಯವತಿಯ ಬಳಿ ಮಗುವನ್ನು ಪಡೆದುಕೊಳ್ಳುವುದು ಸಾಧ್ಯವೇ ಇಲ್ಲ. ಅಂದರೆ ಅವನು ತನ್ನ ಮತ್ತು ತನ್ನ ಪತ್ನಿಯ ಜಾತಿಯನ್ನು ದಾಟಿ ಮಗುವನ್ನು ಪಡೆಯುವಂತಿಲ್ಲ. ಉಳಿದದ್ದೇನೇ ಇರಲಿ, ಮಗುವನ್ನು ಅವಳಿಂದ ಪಡೆದ ಸಂತೋಷಕ್ಕೆ ಪ್ರತಿಯಾಗಿ ಆಕೆಗೆ ಸುಗಂಧಿಯಾಗಿರುವ ವರವನ್ನು ಕೊಟ್ಟನಲ್ಲವೆ? ಅದಂತೂ ಅಪ್ಪಟ ಕಾನೂನುಬಾಹಿರವಾಗುತ್ತದೆ. ಆ ಕೃತ್ಯಕ್ಕೆ ಪರಾಶರನನ್ನು ನೇರವಾಗಿ ಜೈಲಿಗೆ ಹಾಕಬಹುದಾಗಿದೆ. ಜಗತ್ತಿನ ಸರ್ವ ಜೀವಿಗೂ ತನ್ನ ಮಗುವೊಂದು ಬೇಕು ಎಂಬ ಬಯಕೆ ಇರುತ್ತದೆ. ಗಂಡು-ಹೆಣ್ಣು, ಜಾತಿ-ಮತ, ಮೇಲು-ಕೀಳು, ದೇಶ-ಕಾಲ ಇಂತಹ ಯಾವ ತಾರತಮ್ಯವೂ ಇಲ್ಲದಂತೆ ಪ್ರತಿಯೊಬ್ಬರೂ ಮಗುವನ್ನು ಹೊಂದಿ, ಅದನ್ನು ಬೆಳೆಸುವ ಸಂತೋಷವನ್ನು ಅನುಭವಿಸಿ, ಅದರ ಮೂಲಕವಾಗಿ ತಮ್ಮ ವಂಶವು ಈ ಭೂಮಿಯಲ್ಲಿ ಉಳಿಯುವುದಕ್ಕಾಗಿ ಬಯಸುತ್ತಾರೆ. ಅದು ಅತ್ಯಂತ ಸಹಜವಾದ ಮತ್ತು ಜಗತ್ತಿಗೆ ಒಳಿತನ್ನು ಉಂಟು ಮಾಡುವಂತಹ ಬಯಕೆಯಾಗಿದೆ. ಮದುವೆಯೆನ್ನುವುದು ಮನುಷ್ಯರು ತಮ್ಮ ಸಮಾಜದ ಒಳಿತಿಗಾಗಿ ತಾವೇ ಮಾಡಿಕೊಂಡ ಒಂದು ಸಾಮಾಜಿಕ ಬಂಧನ. ಆದರೆ ಮಗುವನ್ನು ಹೊಂದಬೇಕೆನ್ನುವ ಬಯಕೆ, ಮದುವೆಯೆಂಬ ಮಾನವ ನಿರ್ಮಿತ ಧಾರ್ಮಿಕ ನಿಯಮವನ್ನು ಮೀರಿದ್ದಾಗಿದೆ. ಆದರೆ ನಮ್ಮ ಹೊಸ ಕಾನೂನು, ಜೀವಸಹಜ ಮಗುವಿನ ಬಯಕೆಗಿಂತಲೂ, ಮನುಷ್ಯನಿರ್ಮಿತ 'ಮದುವೆ'ಯ ಕಟ್ಟುಪಾಡು ಮುಖ್ಯವೆಂದು ಪ್ರತಿಪಾದಿಸುತ್ತಿದೆ. ಮದುವೆಯಾಗದೆ ಒಟ್ಟಾಗಿ ಬದುಕುವ ಗಂಡು-ಹೆಣ್ಣು ಗರ್ಭದಾನದ ಮೂಲಕ ಮಕ್ಕಳನ್ನು ಪಡೆಯುವಂತಿಲ್ಲ. ಪರಾಶರನಂತೆ ಒಂಟಿಯಾಗಿ ಇರುವ ಗಂಡಸರಂತೂ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವುದು ತಪ್ಪಾಗುತ್ತದೆ. ಹಣಕ್ಕೆ ಪರ್ಯಾಯವಾಗಿ ಬಾಡಿಗೆ ತಾಯ್ತನ ಕೊಡುವುದು ನೈತಿಕವಾಗಿ ತಪ್ಪಾಗುತ್ತದೆ ಎನ್ನುವುದು ಸತ್ಯವೆನ್ನಿಸುತ್ತದೆ. ಬಡತನದ ಕಾರಣಕ್ಕಾಗಿ ಹೆಣ್ತನದ ದುರುಪಯೋಗವಾಗಿ, ಹೆಣ್ಣಿನ ಶೋಷಣೆ ನಡೆಯುತ್ತದೆ ಎನ್ನುವ ಮಾತಿನಲ್ಲೂ ಸ್ವಲ್ಪ ಸತ್ಯಾಂಶವಿದೆ. ಆದರೆ ಇದಕ್ಕೆ ಪರಿಹಾರ ಬಡತನ ನಿರ್ಮೂಲನೆ ಮಾಡಿ ಮಹಿಳೆಯನ್ನು ಆರ್ಥಿಕವಾಗಿ ಗಟ್ಟಿಗೊಳಿಸುವುದಾ ಅಥವಾ ಜನರಿಗೆ ಮಕ್ಕಳನ್ನು ಪಡೆದುಕೊಳ್ಳುವ ಅಧಿಕಾರವನ್ನು ಮೊಟುಕುಗೊಳಿಸುವುದಾ?
ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಿ
ಈ ಭೂಮಂಡಲವನ್ನು ಮುಂದಿನ ಪೀಳಿಗೆಗಳು ಬಾಳುವಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಈಗಾಗಲೇ ಕಾಡುತ್ತಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳ ಸಮೂಹಕ್ಕೆ ಬಾಡಿಗೆ ತಾಯ್ತನ ಎನ್ನುವ ಹೊಸ ಭೂತವನ್ನು ಹಾಕುವುದು ಉಚಿತವೇ?
ತಾಯಿ ಆಗುವ ಅನುಪಮ ಅವಕಾಶ ಮತ್ತು ಅಪರಿಮಿತ ಸಂಭ್ರಮವನ್ನು ಹೆಣ್ಣಿಗೆ ಸ್ವಂತ ಮಾಡಿಕೊಟ್ಟ ಪ್ರಕೃತಿಯನ್ನು ಇನ್ನಷ್ಟು ಪ್ರೀತಿಸುತ್ತಲೇ, ತಾಯಿ ಆಗುವುದು ಬರಿಯ ಹೆಣ್ಣಲ್ಲ ಗಂಡು ಕೂಡ ಅಪ್ಪನ ರೂಪದಲ್ಲಿ ಎನ್ನುವ ಇಂದಿನ ಸತ್ಯವನ್ನು ಅಪ್ಪಿಕೊಂಡು ಮುದ್ದಿಸಲೇಬೇಕಿದೆ.
ಬಾಡಿಗೆ ತಾಯ್ತನ ಹೊಂದುವ ಸಾಧ್ಯತೆಯನ್ನು ತೆರೆದುಕೊಟ್ಟಿದ್ದು ವಿಜ್ಞಾನದ ಅಸೀಮ ಸಾಧನೆಯೇ ಹೌದು. ಮಕ್ಕಳಿಲ್ಲದವರ ಕಣ್ಣೀರು ಒರೆಸುವ ಒಂದು ಸಾಧನ ಎಂದು ಈ ಅವಿಷ್ಕಾರವನ್ನು ಬಣ್ಣಿಸುವುದನ್ನು ಮಾತ್ರ ಒಪ್ಪಲಾಗದು.
ಭಯೋತ್ಪಾದಕರಾಗಿ ಪರಿವರ್ತಿತರಾಗುವ ಮಕ್ಕಳ ವಿಷಯದಲ್ಲಿ ವಿಯೆನ್ನಾ ದೇಶದಲ್ಲಿರುವ ವಿಶ್ವಸಂಸ್ಧೆಯ ಕೇಂದ್ರದಲ್ಲಿ ವಿಶೇಷವಾಗಿ ಅಧ್ಯಯನ ನಡೆಸಲಾಗುತ್ತದೆ. ಅಲ್ಲಿನ ಸಮೀಕ್ಷೆಯ ಪ್ರಕಾರ ಧರ್ಮದ ಅಫೀಮು ಮೆದ್ದು ಭಯೋತ್ಪಾದನೆಗೆ ತೊಡಗುವವರ ಸಂಖ್ಯೆಗಿಂತ ಬಡತನ ಮತ್ತು ಕುಟುಂಬದ ವಾತ್ಸಲ್ಯದಿಂದ ವಂಚಿತರಾಗಿ ಭಯೋತ್ಪಾದನೆಗೆ ಇಳಿಯುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ದೇಶದಲ್ಲಿಯೇ ನಾನಾ ಕಾರಣಗಳಿಂದ ಜನ್ಮ ಕಾಲದಲ್ಲಿಯೇ ಅನಾಥರಾಗಿ ದತ್ತು ತೆಗೆದುಕೊಳ್ಳುವವರಿಲ್ಲದೆ ಈಗ ಉದ್ದೇಶ ರಹಿತರಾಗಿ ದಂಡವಾಗುತ್ತಿರುವ ಬದುಕನ್ನು ದೂಡುತ್ತಿರುವವರು ಲಕ್ಷ ದಲ್ಲಿ ಇದ್ದಾರೆ. ಮುಂದಿನ ಕೆಲವು ಪೀಳಿಗೆಗಳೂ ಇದೇ ಹಾದಿಯಲ್ಲಿ ಇರುವುದು ದುರಂತ.
ವೈದ್ಯಕೀಯ ಕ್ಷೇತ್ರ ಪರಿಣಿತರು ಗರ್ಭಧಾರಿಗೂ ಮಗುವಿಗೂ ಯಾವುದೇ ಆರೋಗ್ಯ ಸಮಸ್ಯೆ ಆಗಲಾರದು ಎನ್ನುವ ಕಾರಣಕ್ಕೆ ಬಾಡಿಗೆ ತಾಯ್ತನಕ್ಕೆ ಹಸಿರು ನಿಶಾನೆ ತೋರಿದೆ. ವಿದೇಶಗಳಲ್ಲಿ ಈಗಾಗಲೇ ಕಾನೂನುಬದ್ಧವಾಗಿ ಜಾರಿಯಲ್ಲಿದೆ ಎನ್ನುವ ಕಾರಣಕ್ಕೆ ಮುಂದೊಮ್ಮೆ ನಮ್ಮ ನ್ಯಾಯಾಂಗವೂ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಇತರೆ ದೇಶಗಳಿಂದ ಬಾಡಿಗೆ ತಾಯ್ತನದ ಸವಲತ್ತನ್ನು ಪಡೆದುಕೊಳ್ಳಲು ಇಲ್ಲಿಗೆ ಒಲಿದು ಬರುವ ಅನುಕೂಲಸ್ಧರಿಂದ ದೇಶದ ಬೊಕ್ಕಸಕ್ಕೆ ಹರಿದು ಬರುವ ಲಾಭವು, ಸರಕಾರವೂ ಈ ಉದ್ದಿಮೆಯನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುವಂತೆ ಮಾಡಬಹುದು. ಹಾಗೆ ಹುಟ್ಟಿದ ಮಕ್ಕಳ ಪೌರತ್ವ, ಆಸ್ತಿ ಹಕ್ಕು, ಮದುವೆಯ ಪರಿಧಿ, ವರ್ಣತಂತುಗಳ ಪಲ್ಲಟ ಹೀಗೆ ಉದ್ಭವಿಸಬಹುದಾದ ಹಲವಾರು ಸವಾಲುಗಳಿಗೆ ನಾಗರಿಕ ಸಮಾಜ ಉತ್ತರವಾಗಿ ನಿಂತು ಬೆನ್ನು ತಟ್ಟಿಕೊಳ್ಳಬಹುದು.
ಆದರೆ ಈ ಎಲ್ಲಾ ಭ್ರಮಾಯಶಸ್ಸುಗಳೊಂದಿಗೆ ಮನುಕುಲವನ್ನೇ ಆಪೋಶನ ತೆಗೆದುಕೊಳ್ಳಬಹುದಾದಷ್ಟು ಅಗಾಧತೆಯಲ್ಲಿ ಬೆಳೆದು ನಿಲ್ಲುವ ಅನಾಥ ಮಕ್ಕಳಿಗೆ ಉತ್ತರದಾಯಿಗಳು ಯಾರು?
ಸಂತಾನವನ್ನು ಹೊಂದುವುದು ಎಂದರೆ ನಮ್ಮದೇ ಅಂಡಾಣು ಮತ್ತು ವೀರ್ಯಾಣುವಿನ ನಿರಂತರತೆಯನ್ನು ಸ್ಧಾಪಿಸುವುದು ಎನ್ನುವ ಅರ್ಥವೇ? ನಮ್ಮ ಮಾನಸಿಕ ಸಾಮರ್ಥ್ಯದಿಂದ ಪ್ರಬುದ್ಧವಾದ, ಸಹ್ಯ ಸಮಾಜವನ್ನು ರೂಪಿಸುವುದು ನಿಜಾರ್ಥದಲ್ಲಿ ತಾಯ್ತನ. ನೆನಪಿರಲಿ ತಾಯಿಯೆಂದರೆ ಅಪ್ಪನ ರೂಪದ ಗಂಡಸೂ ಕೂಡ.
ಬಾಡಿಗೆ ತಾಯ್ತನವೆನ್ನುವ ಉದ್ದಿಮೆಯನ್ನು ತಮ್ಮ ಅಹಂ ತಣಿಸುವಿಕೆಗಾಗಿ ಬೆಳೆಸುತ್ತಿರುವ ಕರಣ್ ಜೋಹರ್, ತುಷಾರ್ ಕಪೂರ್, ಶಾರುಖ್ ಖಾನ್ ಎನ್ನುವ ನಿರ್ವಿಣ್ಣರಿಗಿಂತ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಆಂತರಿಕ ಸೌಂದರ್ಯದಿಂದ ಮಿರಮಿರ ಮಿಂಚುತ್ತಿರುವ ಸುಶ್ಮಿತಾ ಸೇನ್, ರವೀನಾ ಟಂಡನ್ಗಳು ನಮಗೆ ಮಾದರಿಯಾಗಬೇಕು. ಏಂಜಿಲಿನಾ ಜೋಲಿಯ ಒಂದು ನೋಟಕ್ಕೆ ಜೋಲಿ ಹೊಡೆಯುವ ನಮ್ಮ ಗಂಡಸರೂ ಅವಳಂತೆ ಮಕ್ಕಳನ್ನು ದತ್ತು ತೆಗೆದುಕೊಂಡು ಪೌರುಷ ಮೆರೆದರೆ ಅವಳೂ ಮೆಚ್ಚದಿರಳು.
ಹಣದ ಅವಶ್ಯಕತೆಗಾಗಿಯೋ ಲಾಲಸೆಯಿಂದಲೋ ಕುಟುಂಬದವರೇ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಬಾಡಿಗೆ ತಾಯಾಗುವಂತೆ ಬಲವಂತ ಪಡಿಸಬಹುದಾದ ಸಾಧ್ಯತೆಯನ್ನು ಯಾವ ಆಧಾರದ ಮೇಲೂ ತಳ್ಳಿ ಹಾಕುವಂತಿಲ್ಲ. ಅಲ್ಲಿಗೆ ತಾಯ್ತನ ಎನ್ನುವುದು ಬಾಡಿಗೆ ರೂಪದಲ್ಲಿ ಮಹಿಳೆಯರ ಮೇಲಿನ ಮತ್ತೊಂದು ದೌರ್ಜನ್ಯವಾಗುವುದು ನಿಸ್ಸಂಶಯ.
ಒಂದು ಕಾಲದಲ್ಲಿ ಗಂಡು ಮಗನಿಂದಲೇ ಮೋಕ್ಷ ಎಂದು ಸಾರುತ್ತಿದ್ದ ಜ್ಯೋತಿಷಿಗಳು ಇಂದು ಕಾಲಕ್ಕೆ ತಕ್ಕ ಹೆಜ್ಜೆ ಹಾಕುತ್ತಾ ಮಾಧ್ಯಮಗಳಲ್ಲಿ ಕುಳಿತು ಹೆಣ್ಣಾಗಲೀ ಗಂಡಾಗಲಿ ನಮ್ಮದೇ ಮಕ್ಕಳಿಂದ ಮೋಕ್ಷ ಎನ್ನುವಷ್ಟು ನುಣುಪಾಗಿದ್ದಾರೆ. ಅಂದರೆ ಇದರರ್ಥ ಕಾಲಕ್ಕೆ ಹೊಂದಿಕೊಳ್ಳದ ಶಾಸ್ತ್ರಗಳನ್ನು ನವೀಕರಿಸಿಕೊಳ್ಳುತ್ತಿರಬೇಕು ಎಂದು ತಾನೆ? ನಾವುಗಳು ಯಾಕಾಗಿ ಅದನ್ನು 'ಮಕ್ಕಳನ್ನು ದತ್ತು ಪಡೆದುಕೊಳ್ಳುವುದೇ ಮೋಕ್ಷ ಕ್ಕೆ ದಾರಿ' ಎಂದು ನಂಬಿಕೆಯನ್ನು ಊಧ್ರ್ವಮುಖಿಯನ್ನಾಗಿಸಬಾರದು!
ಮಗು ಎಂದರೆ ಅದು ನನ್ನದೂ ಅಲ್ಲ ನಿನ್ನದೂ ಅಲ್ಲ. ಅದು ಪ್ರಕೃತಿಯ ಕಲೆಗಾರಿಕೆ ಅಷ್ಟೇ. ಮಗು ಎಂದರೆ ವಂಶವೊಂದರ ಹಕ್ಕು ಸ್ಥಾಪಿಸುವ ವೇದಿಕೆಯಲ್ಲ. ಮಗು ಎಂದರೆ ನಮ್ಮ ರಕ್ತದ ಗುಂಪಿನ ಮೊಹರು ಹೊಡೆದುಕೊಂಡು ಜಗತ್ತಿಗೆ ನಮ್ಮ ಇರುವಿಕೆಯನ್ನು ಸಾರಬೇಕಾದ ಅಂಚೆ ಪೆಟ್ಟಿಗೆಯಲ್ಲ. ಅದೊಂದು ಪರಿಮಳ ಮಾತ್ರ. ಆ ಘಮ ನಾ ಬೆಳೆದ ಗಿಡದಲ್ಲಿ ಅರಳುವ ಹೂವಿನದ್ದೇ ಆಗಿರಬೇಕು ಎನ್ನುವ ಮನೋಭಾವ ನಮ್ಮ ಹೃದಯವಿಕಲತೆಯನ್ನು ಮಾತ್ರ ತೋರುವುದು.
ಈ ಭೂಮಂಡಲವನ್ನು ಮುಂದಿನ ಪೀಳಿಗೆಗಳು ಬಾಳುವಂತಹ ಸ್ಥಿತಿಯಲ್ಲಿ ಬಿಟ್ಟು ಹೋಗಬೇಕೆಂದರೆ ಈಗಾಗಲೇ ಕಾಡುತ್ತಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಅವುಗಳ ಸಮೂಹಕ್ಕೆ ಬಾಡಿಗೆ ತಾಯ್ತನ ಎನ್ನುವ ಹೊಸ ಭೂತವನ್ನು ಹಾಕುವುದು ಉಚಿತವೇ? ಹೊಸ ಅವಿಷ್ಕಾರವಾಗಿದೆ ಎನ್ನುವ ಏಕೈಕ ಕಾರಣಕ್ಕೆ ಮನಸ್ಸುಗಳನ್ನು ಕೃಪಣಗೊಳಿಸುವ, ಮನುಷ್ಯನನ್ನು ದ್ವೀಪವನ್ನಾಗಿಸುವ ಇಂತಹ ಪ್ರಯೋಗಗಳ ಬಳಕೆಗಿಂತ ನಮ್ಮನ್ನು ಎಲ್ಲವನ್ನೂ ಒಳಗೊಳ್ಳುವ ಬಯಲಿನಂತಾಗಿಸುವ ದತ್ತುಕ್ರಿಯೆಗೆ ಮನಸ್ಸು ಒಲಿಯಲಿ. ಮಮತೆಗಾಗಿ ಕಾತರಿಸುತ್ತಿರುವ ಮಕ್ಕಳ ಬಾಳು ಹಸನಾಗಲಿ.
ಕೇಳದೆ ನಿಮಗೀಗ? ....
ಶಬ್ದಮಾಲಿನ್ಯ ನಮ್ಮ ದೇಶದ ಪಟ್ಟಣಗಳನ್ನೆಲ್ಲ ಆವರಿಸಿ ನುಂಗಿ ಹಾಕುತ್ತಿರುವ ಪಿಡುಗು. ಕೈಗಾರಿಕೆಗಳ ಹೆಚ್ಚಳ, ವಾಹನಗಳ ಹೆಚ್ಚಳ ಇದಕ್ಕೆ ಪ್ರಧಾನ ಕಾರಣ. ಇಂದಿನ ನಗರವಾಸ ಮನುಷ್ಯನ ಕಿವಿಯ ಸಾಮರ್ಥ್ಯವನ್ನು ಕುಂದಿಸಿದೆ. 85 ಡೆಸಿಬಲ್ಗಿಂತ ಅಧಿಕ ಶಬ್ದವನ್ನು ನಿರಂತರವಾಗಿ ಕೇಳುತ್ತಿದ್ದರೆ ಕಿವಿ ತಮಟೆಗೆ ಹಾನಿಯಾಗಿ ಕಿವುಡುತನ ಉಂಟಾಗಬಹುದು. ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಶಬ್ದಮಾಲಿನ್ಯದ ಪೀಡೆ ವಿಪರೀತ. ಮಾಲಿನ್ಯ ಹೆಚ್ಚಾದಂತೆ, ನಿವಾಸಿಗಳ ಕಿವಿಯ ಸಾಮರ್ಥ್ಯಕ್ಕೆ ಧಕ್ಕೆಯಾಗುತ್ತಿದೆ. ಒಂದು ಲೆಕ್ಕಾಚಾರದಂತೆ, ದಿಲ್ಲಿಯ ನಿವಾಸಿಗಳ ಸರಾಸರಿ ಶ್ರವಣಶಕ್ತಿಯ ಹರೆಯ 19.3 ವರ್ಷ. ಅಂದರೆ, ಇಲ್ಲಿ ವಯಸ್ಸು ಹೆಚ್ಚಾದಂತೆ, ಕೇಳುವ ಶಕ್ತಿ ಕಡಿಮೆ. ಚಿಕ್ಕ ಮಗುವಿನ ಶ್ರವಣಶಕ್ತಿ ಹೆಚ್ಚು. ಜಗತ್ತಿನ ದೊಡ್ಡ ನಗರಗಳೆಲ್ಲ ದಿಲ್ಲಿಯದೇ ಪಾಡನ್ನು ಅನುಭವಿಸುತ್ತಿವೆ. ಜಗತ್ತಿನ ನಗರಗಳ ಹಾಗೂ ನಮ್ಮ ರಾಜಧಾನಿಯ ಒಂದು ನೋಟದ ಮೂಲಕ ನಮ್ಮ ಶ್ರವಣಶಕ್ತಿಯ ಮೇಲೆ ಆಗುತ್ತಿರುವ ದಾಳಿಯ ಪರಿಚಯ ಮಾಡಿಕೊಳ್ಳಬಹುದು. ಶ್ರವಣಶಕ್ತಿ ನಷ್ಟ ಸೂಚಿ ಅತಿ ಹೆಚ್ಚು ಶಬ್ದಮಾಲಿನ್ಯದ ನಗರಗಳು ಗುವಾಂಗ್ಝು (1) ಕೈರೋ (0.81) ಪ್ಯಾರಿಸ್ (0.75) ಬೀಜಿಂಗ್ (0.75) ದಿಲ್ಲಿ (0.72) ಕಡಿಮೆ ಶಬ್ದ ಮಾಲಿನ್ಯದ ನಗರಗಳು ಡಸೆಲ್ಡಾರ್ಫ್ (0) ಜ್ಯೂರಿಚ್ ಮ್ಯೂನಿಚ್ (0.07) ಓಸ್ಲೋ ವಿಯೆನ್ನಾ ನಗರಗಳ ಶ್ರವಣಶಕ್ತಿ ವಯಸ್ಸು ವಯಸ್ಸು ಹೆಚ್ಚಾದಂತೆ ಶ್ರವಣಶಕ್ತಿ ಕಡಿಮೆ. ದಿಲ್ಲಿಯ ನಿವಾಸಿಗಳ ಸರಾಸರಿ ಶ್ರವಣಶಕ್ತಿ ವಯಸ್ಸು 19.3 ವರ್ಷಗಳಷ್ಟಿದೆ. ದಿಲ್ಲಿ 19.3 ಮುಂಬಯಿ 18.6 ಇಸ್ತಾಂಬುಲ್ 18.3 ಕೈರೋ 18 ಗುಂವಾಂಗ್ಝು 17.4 ಸೇಂಟ್ ಪೀಟರ್ಸ್ಬರ್ಗ್ 17.1 ತೈಪೆ 16.8 ಬ್ಯೂನಸ್ ಐರಿಸ್ 16.5 ಸಿಯೋಂಗ್ನಮ್ 16.5 ಮ್ಯಾಡ್ರಿಡ್ 16.3 ಪಟ್ಟಣ ವರ್ಸಸ್ ಹಳ್ಳಿ - ಪಟ್ಟಣ ಸೇರಿಕೊಂಡವರ ಶ್ರವಣಶಕ್ತಿ, ಹಳ್ಳಿನಿವಾಸಿಗಳ ತಮಗಿಂತ 10-20 ವರ್ಷ ದೊಡ್ಡವರ ಶ್ರವಣಶಕ್ತಿಗೆ ಸಮನಾಗಿರುತ್ತದಂತೆ. ಅಂದರೆ, ಅಷ್ಟರ ಮಟ್ಟಿಗೆ ಕೇಳುವ ಸಾಮರ್ಥ್ಯ ಕುಸಿಯುತ್ತದೆ ಎಂದು ನ್ಯೂಸ್ ಮೆಡಿಕಲ್.ನೆಟ್ ವರದಿ ಮಾಡಿದೆ. - ನಗರಗಳಲ್ಲಿ ವಾಸ ಮಾಡುವುದರಿಂದ ಶ್ರವಣ ಶಕ್ತಿ ಕುಂಠಿತಗೊಳ್ಳುತ್ತದೆ ಎಂದು ಈ ವಿವರದಿಂದ ಅರ್ಥ ಮಾಡಿಕೊಳ್ಳಬಹುದು. ದಿಲ್ಲಿಯಲ್ಲೇನು ಸಮಸ್ಯೆ? - ನಮ್ಮ ದೇಶದಲ್ಲೇ ಉಳಿದೆಡೆಗಳಿಗೆ ಹೋಲಿಸಿದರೆ ದಿಲ್ಲಿಯಲ್ಲಿರುವವರ ಶ್ರವಣ ಶಕ್ತಿಯಲ್ಲಿ ಸರಾಸರಿ ಅಗಾಧ ಕುಸಿತ ಕಂಡುಬಂದಿದೆ. - ಅಂದರೆ, ಅವರ ವಯಸ್ಸಿಗೆ ಹೋಲಿಸಿದರೆ, ಸರಾಸರಿಗಿಂತ ಹೆಚ್ಚಿನ ಮಂದಿ ಶ್ರವಣ ಶಕ್ತಿ ಹಾನಿ ಅನುಭವಿಸುತ್ತಿದ್ದಾರೆ. ಕೇಳಿದ ವಿಷಯ - ಸಮೀಕ್ಷೆ ನಡೆಸಲಾದ 50 ನಗರಗಳಲ್ಲಿ ಚೀನಾದ ಗುಂವಾಗ್ಝು ನಗರ ಅಧಿಕ ಶಬ್ದಮಾಲಿನ್ಯದಿಂದ ಹೆಚ್ಚಿನ ಶ್ರವಣಶಕ್ತಿಹೀನತೆಗೊಳಗಾಗಿರುವ ಪ್ರದೇಶವಾಗಿದೆ. - ಸ್ವಿಡ್ಜರ್ಲೆಂಡಿನ ಜ್ಯೂರಿಚ್ ನಗರದಲ್ಲಿ ವಾಸಿಸುವವರು ಅತಿ ಕಡಿಮೆ ಶ್ರವಣಶಕ್ತಿ ಹಾನಿಯ ಸಾಧ್ಯತೆ ಹೊಂದಿದ್ದಾರೆ. - ಸರಾಸರಿ ಶ್ರವಣಶಕ್ತಿ ಕುಸಿತದಲ್ಲಿ ಅತೀ ಕಡಿಮೆ ಹಾನಿಗೆ ಒಳಗಾದವರೆಂದರೆ ಆಸ್ಟ್ರಿಯಾದ ವಿಯೆನ್ನಾ ನಗರದವರು. ಭಾರತದ ಅತಿ ಹೆಚ್ಚು ಶಬ್ದಮಾಲಿನ್ಯದ ನಗರಗಳು ದಿಲ್ಲಿ ಮುಂಬಯಿ ಲಖನೌ ಹೈದರಾಬಾದ್ ಚೆನ್ನೈ ಕೋಲ್ಕತಾ ಬೆಂಗಳೂರು
ಕೈಗಾರಿಕಾ ಪ್ರದೇಶದಲ್ಲಿ ವಾಸಿಸುವವರು, ಕಿವಿಗಡಚಿಕ್ಕುವ ಯಂತ್ರಗಳೊಂದಿಗೆ ಕೆಲಸ ಮಾಡುವವರು ಇದನ್ನು ಗಮನಿಸಬೇಕು. ಅತಿಯಾದ ಶಬ್ದವಿದ್ದರೆ ಮಾತನಾಡುವಾಗಲೂ ಧ್ವನಿ ಎತ್ತರಿಸಿ ಮಾತನಾಡುತ್ತ ಧ್ವನಿಪೆಟ್ಟಿಗೆಗೆ ಹಾನಿಯಾಗುತ್ತದೆ. ಇದರಿಂದ ತಲೆನೋವು, ಸುಸ್ತು, ಹೃದಯ ಬಡಿತದಲ್ಲಿ ಏರಿಳಿತ ಕಾಣಿಸಬಹುದು.
ಶಬ್ದದ ಪದರಗಳು ನಿರಂತರವಾಗಿ ಮೆದುಳಿನ ನರಗಳನ್ನು ಬಡಿಯುತ್ತಾ ಇರುವುದರಿಂದ ಏಕಾಗ್ರತೆ ಸಾಧ್ಯವಾಗದು. ಓದಿದ್ದು, ಕೇಳಿದ್ದು ನೆನಪಿನಲ್ಲಿ ಉಳಿಯದು. ನೆನಪಿನ ಶಕ್ತಿ ಕಡಿಮೆಯಾಗುವುದು, ನಿದ್ರಾಹೀನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಪ್ರತಿಯೊಬ್ಬ ನಗರವಾಸಿಯೂ ಸೌಂಡ್ಪ್ರೂಫ್ ಆಗಿ, ಇತರರಿಂದ ಬೇರೆಯಾಗಿ ಸದ್ದಿನಿಂದ ದೂರ ಬದುಕಲು ಸಾಧ್ಯವಿಲ್ಲ. ಹಾಗಾಗಿ ಸದ್ದನ್ನು ಕಡಿಮೆಗೊಳಿಸಿ ಬಗರಬದುಕನ್ನು ಸಹನೀಯಗೊಳಿಸುವ ಕ್ರಮಗಳನ್ನು ಸ್ಥಳೀಯ ಆಡಳಿತಗಳೇ ಕೈಗೊಳ್ಳಬೇಕು.
ಕಾಡಿನ ಜೀವಿಯ ನಾಡಿ ಹಿಡಿಯಲು ಗಜ ಗಣತಿ
ದಕ್ಷಿಣ ಭಾರತದಲ್ಲಿ ಎಷ್ಟಿವೆ ಆನೆಗಳು?, ಮೇನಲ್ಲಿ ಗಣತಿ ಆರಂಭ ಪ್ರಕಾಶ್ ರಾಜ್ ಬಿ., ಮೈಸೂರು ಭಾರತದ ರಾಷ್ಟ್ರೀಯ ಪಾರಂಪರಿಕ ವನ್ಯಜೀವಿ ಎಂದೇ ಪ್ರಸಿದ್ಧಿಯಾಗಿರುವ ಆನೆಗಳ ಮಹಾ ಗಣತಿಗೆ ದಿನಗಣನೆ ಆರಂಭವಾಗಿದೆ ! ದೇಶದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಇರುವ ಆನೆಗಳ ಸಂಖ್ಯೆ ಎಷ್ಟು ಎಂಬುದನ್ನು ಅರಿಯುವುದಷ್ಟೇ ಈ ಗಣತಿಯ ಉದ್ದೇಶವಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ಆನೆ- ಮನುಷ್ಯರ ಸಂಘರ್ಷ ಮೂಲವನ್ನು ಅರಿಯುವುದು ಕೂಡ ಗಣತಿ ಹೊಂದಿರುವ ಕಾರ್ಯಸೂಚಿ. ಪ್ರತಿ ವರ್ಷ ಈ ಸಂಘರ್ಷಕ್ಕೆ 100 ಆನೆಗಳು, 400 ಮನುಷ್ಯರು ಪ್ರಾಣ ಹರಣವಾಗುತ್ತಿದೆ. ಹಾಗಾಗಿ, ಸಂಘರ್ಷ ವಲಯವನ್ನು ಗುರುತಿಸಿ, ಅದಕ್ಕೊಂದು ಮದ್ದು ಕಂಡು ಹಿಡಿಯುವ ಕಾಳಜಿಯೂ ಗಣತಿಯ ಬೆನ್ನಲ್ಲಿ ಇದೆ. ಆನೆಗಳ ಸಂಖ್ಯೆ ಅರಿಯಲು ಪ್ರತಿ ಮೂರು ಇಲ್ಲವೇ ನಾಲ್ಕು ವರ್ಷಕ್ಕೊಮ್ಮೆ ಗಣತಿ ನಡೆಯುವುದು ವಾಡಿಕೆ. ಅರಣ್ಯ ಇಲಾಖೆ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದೆ. ಅಂತೆಯೇ ಈ ಬಾರಿಯೂ ಆನೆಗಳ ತಲೆ ಎಣಿಸಲು ಇಲಾಖೆ ಅಣಿಗೊಂಡಿದೆ. ದಕ್ಷಿಣ ಭಾರತದ ರಾಷ್ಟ್ರೀಯ ಉದ್ಯಾನವನ, ವಿಭಾಗೀಯ ವಲಯಗಳಲ್ಲಿ ಗಣತಿ ಕಾರ್ಯ ನಡೆಸುವ ನಿಟ್ಟಿನಲ್ಲಿ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಆನೆ ಯೋಜನೆ) ನೇತೃತ್ವದಲ್ಲಿ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಮೇ ತಿಂಗಳಲ್ಲಿ ಗಣತಿ ಕಾರ್ಯ ನಡೆಯುವುದೊಂದೆ ಬಾಕಿ ! ರಾಜ್ಯದಲ್ಲಿ ಕಳೆದ 2007ರಲ್ಲಿ ನಡೆದ ಗಣತಿ ಪ್ರಕಾರ ಅಂದಾಜು 4035 ಹಾಗೂ 2010ರಲ್ಲಿ ಅಂದಾಜು 5780 ಕಾಡಾನೆಗಳಿದ್ದವು ಎಂದು ಅಂದಾಜಿಸಲಾಗಿತ್ತು. 2012ರ ವೇಳೆಗೆ ಅಂದಾಜು 6072ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆನೆಗಳು ಇದೆ ಎಂದು ಗಣತಿಯಿಂದ ತಿಳಿದು ಬಂದಿತ್ತು. ಈ ಮಾಹಿತಿ ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಅಂಕಿ ಅಂಶ ಸಾರಿ ಹೇಳುತ್ತಿದೆ. ಕೇರಳದ ನಂತರ ಕರ್ನಾಟಕ ರಾಜ್ಯ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದರ ನಡುವೆಯೇ ಆನೆಗಳ ಗಣತಿಗೆ ಮತ್ತೆ ಕಾಲ ಕೂಡಿ ಬಂದಿದೆ. ದಕ್ಷಿಣ ಭಾರತದಲ್ಲಿ ಆನೆಗಳ ಸಂಖ್ಯೆ ಅಂದಾಜು ಮಾಡುವ ನಿಟ್ಟಿನಲ್ಲಿ ಏಕಕಾಲದಲ್ಲಿ ಗಣತಿ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ಆನೆ ಸಂತತಿಯಲ್ಲಿ ಹೆಚ್ಚಳವಾಗಿದೆಯೇ ಅಥವಾ ಕಡಿಮೆಯಾಗಿದೆಯೇ ಎನ್ನುವುದು ಕುತೂಹಲ ಮೂಡಿಸಿದೆ. ಆನೆ ಗಣತಿ ಹೇಗೆ ? ದೇಶದ ಜನರ ಗಣತಿಯನ್ನು ಸುಲಭವಾಗಿ ಮಾಡಬಹುದು. ಆದರೆ, ಆನೆಗಳ ಗಣತಿ ಮಾಡುವುದು ಕಷ್ಟದ ಕೆಲಸ. ಅವುಗಳ ಎಣಿಕೆ ಕಾರ್ಯ ಹೇಗೆ ನಡೆಯುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅವುಗಳ ಮುಂದೆಯೇ ಹೋಗಿ ಗಣತಿ ಮಾಡುತ್ತಾರೆ ಎನ್ನುವ ಕಲ್ಪನೆ ತಪ್ಪು. ಇದಕ್ಕೆ ಅನೇಕ ರೀತಿ ತರಬೇತಿ ನೀಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ವನ್ಯಪ್ರಾಣಿಗಳ ಗಣತಿಯಲ್ಲಿ ಭಾಗವಹಿದ ವ್ಯಕ್ತಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆನೆ ಗಣತಿ ಕಾರ್ಯದಲ್ಲಿ ಮೂರು ವಿಧಾನಗಳನ್ನು ಅನುಸರಿಸಲಾಗುತ್ತದೆ. 1. ಲದ್ದಿ ಮಾದರಿಯ ಸಂಗ್ರಹ ಮತ್ತು ನೇರವಾಗಿ ಎಣಿಕೆ ಮಾಡಲಾಗುತ್ತದೆ. ಅರಣ್ಯ ಪ್ರದೇಶ ಹಾಗೂ ವಿಭಾಗೀಯ ಮಟ್ಟದಲ್ಲಿ ಮೂರು ಅಥವಾ ನಾಲ್ಕು ಮಂದಿಯ ಗಣತಿದಾರರು ನಿಗದಿತ ಬ್ಲಾಕ್ನಲ್ಲಿ ಸುತ್ತುವಂತೆ ಮಾಡಿ ನೇರವಾಗಿ ಕಾಣುವ ಸಂಖ್ಯೆಯನ್ನು ದಾಖಲಿಸಿ ಅಥವಾ ಗುಂಪಿನಲ್ಲಿ ಕಾಣುವ ಆನೆಗಳ ಛಾಯಾಚಿತ್ರ ತೆಗೆದು ದಾಖಲು ಮಾಡುವುದು. 2. ಸೀಳುದಾರಿಯಲ್ಲಿ ಲದ್ದಿಗಳ ಎಣಿಕೆ ಕಾರ್ಯ ಮಾಡಲಾಗುತ್ತದೆ. ಲದ್ದಿಯ ಸಾಂದ್ರತೆ, ದೈನಂದಿನ ಮಲವಿಸರ್ಜನಾ ಪ್ರಮಾಣ, ಮಲ ಕೊಳೆಯುವ ಪ್ರಮಾಣದಿಂದ ಆನೆಗಳ ಸಾಂದ್ರತೆ ಅಂದಾಜಿಸಲಾಗುತ್ತದೆ. 3. ಪ್ರತಿ ವಿಭಾಗದಲ್ಲೂ ನೀರಿರುವ ಗುಂಡಿ, ಹಳ್ಳಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಲ್ಲಿಗೆ ಭೇಟಿ ನೀಡುವ ಆನೆಗಳ ಸಂಖ್ಯೆ ಅವುಗಳ ಲಿಂಗವನ್ನು ನಮೂದಿಸುವ ಕೆÜಲಸ ಮಾಡಲಾಗುತ್ತದೆ. ಗಣತಿಗೆ ಕರ್ನಾಟಕ ನೇತೃತ್ವ ದಕ್ಷಿಣ ಭಾರತದಲ್ಲಿ ನಡೆಯುವ ಆನೆ ಗಣತಿಯ ನೇತೃತ್ವವನ್ನು ರಾಜ್ಯ ಅರಣ್ಯ ಇಲಾಖೆಯೇ ವಹಿಸಿಕೊಳ್ಳಬೇಕು ಎಂಬುದು ಕೇಂದ್ರದ ಬಯಕೆ. ಈ ಸಂಬಂಧ ಕೇಂದ್ರ ಸರಕಾರ ಪತ್ರ ವ್ಯವಹಾರ ನಡೆಸಿದೆ. 'ದಕ್ಷಿಣ ಭಾರತದ ಆನೆಗಣತಿಯನ್ನು ರಾಜ್ಯದ ಅರಣ್ಯ ಇಲಾಖೆ ನೇತೃತ್ವದಲ್ಲಿ ದಕ್ಷಿಣ ಭಾರತದ 7 ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಏಕಕಾಲದಲ್ಲಿ ಎಣಿಕೆ ಕಾರ್ಯ ನಡೆಸಲಿದ್ದಾರೆ. ಅದರಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಅಂಡಮಾನ್ ಹಾಗೂ ಗೋವಾ ರಾಜ್ಯಗಳ ಅಧಿಕಾರಿಗಳು, ಸಿಬ್ಬಂದಿ ಏಪ್ರಿಲ್ನಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ಹಿರಿಯ ಅಧಿಕಾರಿಗಳು, ವನ್ಯಜೀವಿ ವಿಜ್ಞಾನಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಆನೆ ಗಣತಿ ಹೇಗೆ ನಡೆಸಬೇಕು? ಯಾವ ರೀತಿಯ ನಿಯಮ ಪಾಲನೆ ಮಾಡಬೇಕು? ಹೇಗೆ ಗಣತಿ ಕಾರ್ಯ ನಡೆಸಬೇಕು? ಎಂಬ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುವುದು,' ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಆನೆ ಯೋಜನೆ) ದಿಲೀಪ್ ಕುಮಾರ್ ದಾಸ್ ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಗಣತಿ ಕಾರ್ಯ ಕೇಂದ್ರ ಸರಕಾರದ ಆದೇಶ ಮೇಲೆ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಾರಿಯ ಆನೆಗಣತಿ ಕಾರ್ಯಕ್ಕೆ ದಿನಾಂಕ ನಿಗದಿ ಮಾಡುವಂತೆ ಪತ್ರ ಬರೆದಿದ್ದಾರೆ. ಅದರಲ್ಲಿ ಮೇ 15ರಿಂದ 20ರವರೆಗೆ ಆನೆಗಣತಿ ಕಾರ್ಯ ನಡೆಸಲು ಅನುಮತಿ ನೀಡುವಂತೆ ಆನೆ ಯೋಜನೆ ಪಿಸಿಸಿಎಫ್ ಕೇಂದ್ರಕ್ಕೆ ದಿನಾಂಕ ನಿಗದಿ ಮಾಡಲು ಶಿಫಾರಸು ಪತ್ರ ನೀಡಿದೆ. ಬಹುತೇಕ ಈ ದಿನಾಂಕದಂದೇ ಆನೆ ಗಣತಿ ಆರಂಭವಾಗಲಿದೆ ಎನ್ನುವುದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಮಹಾರಾಷ್ಟ್ರದ ಆನೆ ಕಾರಿಡಾರ್ ವ್ಯಾಪ್ತಿಯವರೆಗೆ ಈ ಗಣತಿ ಕಾರ್ಯ ನಡೆಯಲಿದೆ. ಏಕಕಾಲದಲ್ಲೇ 7 ರಾಜ್ಯದಲ್ಲಿ ಆನೆಗಣತಿ ನಡೆಯಲಿದೆ ಎನ್ನುತ್ತಾರೆ. ಅದರಲ್ಲೂ ಮೈಸೂರು, ಚಾಮರಾಜನಗರ, ಮಡಿಕೇರಿ ಹಾಗೂ ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಚಲನವಲನ ಹೆಚ್ಚು. ಆಹಾರ ಅರಸಿ ನಾಡಿನ ಕಡೆ ಬರುವ ಈ ಕಾಡಾನೆಗಳ ಗಣತಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವಯಂಸೇವಕರು, ಎನ್ಜಿಒ ಸದಸ್ಯರನ್ನು ಗುಂಪು ಮಾಡಿ ಗಣತಿ ಕಾರ್ಯದಲ್ಲಿ ನಿಯೋಜನೆ ಮಾಡಲಾಗುತ್ತದೆ. ಸ್ವಯಂ ಸೇವಕರಿಂದ ಅರ್ಜಿ ಈ ಬಾರಿಯ ಆನೆಗಣತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೇ ತಿಂಗಳ ಮೊದಲ ವಾರದಲ್ಲಿ ಅರ್ಜಿ ಸಲ್ಲಿಸಬಹುದು. ಅದರಲ್ಲಿ ಸ್ವಯಂಸೇವಕರು ಹಾಗೂ ಎನ್ಜಿಒ ಸದಸ್ಯರು ಭಾಗವಹಿಸಲು ಅನುಕೂಲ ಮಾಡಿಕೊಟ್ಟಿದೆ. ಅರ್ಜಿಸಲ್ಲಿಸುವ ಸದಸ್ಯರನ್ನು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಜತೆಗೆ ಅವರಿಗೆ ಆರು ದಿನಗಳ ಕಾಲ ಊಟ, ವಸತಿ ನೀಡಿ ಗಣತಿ ವೇಳೆ ಬಳಸಿಕೊಳ್ಳಲು ಈಗಾಗಲೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಮೊದಲು ತರಬೇತಿ ನೀಡಿ ಗಣತಿ ಕಾರ್ಯದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಕಾಡಾನೆ ಗಣತಿ ವಿವರ ವರ್ಷ ಸ್ಥಳ ಆನೆಗಳು 2007 ಬಂಡೀಪುರ 1005, ನಾಗರಹೊಳೆ 591, ಭದ್ರ 338, ಬನ್ನೇರುಘಟ್ಟ 148, ಬಿಆರ್ಟಿ 58, ಕೊಳ್ಳೇಗಾಲ 273, ಮಡಿಕೇರಿ 262, ಹಾಸನ 23, ದಾಂಡೆಲಿ 15, ಬೆಂಗಳೂರು ಗ್ರಾಮಾಂತರ 115, ಚಿಕ್ಕ ಮಗಳೂರು 7. ಒಟ್ಟು 4035 2010 ಬಂಡೀಪುರ 2130, ನಾಗರಹೊಳೆ 617, ಭದ್ರ 325, ಬನ್ನೇರುಘಟ್ಟ 76, ಬಿಆರ್ಟಿ 443, ಕೊಳ್ಳೇಗಾಲ 589, ಕಾವೇರಿ 535, ಮಡಿಕೇರಿ 405, ರಾಮನಗರ 251, ಹಾಸನ 15, ಚಿಕ್ಕಮಗಳೂರು 4, ಮಂಡ್ಯ 15. ಒಟ್ಟು 5740 2012 ಬಂಡೀಪುರ 1677, ನಾಗರಹೊಳೆ 1320, ಭದ್ರ 188, ಬಿಆರ್ಟಿ 480, ಕೊಳ್ಳೇಗಾಲ 278, ಮಡಿಕೇರಿ 465, ಹಾಸನ 75.ದಾಂಡೆಲಿ 47, ಬೆಂಗಳೂರು ಗ್ರಾಮಾಂತರ 0, ಚಿಕ್ಕಮಗಳೂರು 8, ಬನ್ನೇರು ಘಟ್ಟ 78, ಒಟ್ಟು 6072 ರಾಜ್ಯ ಸರಕಾರದ ನೇತೃತ್ವದಲ್ಲಿ ಒಟ್ಟು 7 ರಾಜ್ಯದಲ್ಲಿ ಆನೆ ಗಣತಿ ನಡೆಯಲಿದೆ. ಏಕಕಾಲದಲ್ಲಿ ದಕ್ಷಿಣ ಭಾರತದ ಎಲ್ಲ ರಾಷ್ಟ್ರೀಯ ಉದ್ಯಾನವನ, ವಿಭಾಗೀಯ ಮಟ್ಟದಲ್ಲಿ ಆನೆ ಗಣತಿ ಕಾರ್ಯ ನಡೆಯುತ್ತದೆ. ಯಾವುದೇ ಆನೆಗಳು ಮರು ಎಣಿಕೆ ಯಾಗಬಾರದು ಎಂಬ ಕಾರಣಕ್ಕೆ ಏಕಕಾಲದಲ್ಲಿ ಗಣತಿ ಆರಂಭಿಸಲಾಗುತ್ತಿದೆ. ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ಎಲ್ಲ ರಾಜ್ಯದ ಹಿರಿಯ ಅರಣ್ಯಾಧಿಕಾರಿಗಳು, ಅರಣ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕಾರ್ಯಾಗಾರ ನಡೆಯಲಿದೆ. ಗಣತಿ ಕಾರ್ಯ ನಡೆಸುವ ಬಗ್ಗೆ ವಿವರಿಸಲಾಗುವುದು. ದಿನಾಂಕ ನಿಗದಿಯಾದ ಬಳಿಕ ಕಾರ್ಯಾಗಾರ ನಡೆಯಲಿದೆ. ಮೇ ತಿಂಗಳಲ್ಲಿ ಆರು ದಿನ ಆನೆಗಣತಿ ನಡೆಯಲಿದೆ. - ದಿಲೀಪ್ಕುಮಾರ್ ದಾಸ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆನೆ ಯೋಜನೆ. ಪಾರದರ್ಶಕ ಅಂಕಿ ಅಂಶ ಅಗತ್ಯ ಆನೆ ಗಣತಿಯಲ್ಲಿ ಪಾರದರ್ಶಕ ಅಂಕಿ ಅಂಶ ನೀಡುವ ಅಗತ್ಯವಿದೆ. ವೈಜ್ಞಾನಿಕ ವಿಧಾನಗಳ ಮೂಲಕ ಗಣತಿ ನಡೆಸುವುದು ಒಳ್ಳೆಯದು, ಗುಣಮಟ್ಟದ ಅಂಕಿ ಅಂಶ ಹಾಗೂ ಮಾಹಿತಿ ನೀಡಲು ಸಹಕಾರಿಯಾಗಲಿದೆ ಎನ್ನುತ್ತಾರೆ ಹಿರಿಯ ಆನೆ ತಜ್ಞ ಡಾ. ಅಜಯ್ ದೇಸಾಯಿ. ಈಗ ಅನುಸರಿಸುತ್ತಿರುವ ಹಳೆಯ ವಿಧಾನದಿಂದ ಪಾರದರ್ಶಕ ಅಂಕಿ ಅಂಶ ಹಾಗೂ ಮಾಹಿತಿ ನೀಡುವುದು ಕಷ್ಟ. ಈ ವಿಧಾನದಿಂದ ಅಂಕಿ ಅಂಶದಲ್ಲಿ ವ್ಯತ್ಯಾಸ ಬರಬಹುದು. ವೈಜ್ಞಾನಿಕವಾಗಿ ಆನೆ ಗಣತಿ ನಡೆಸಿದರೆ ಆನೆಗಳ ಅಂದಾಜು ಮಾಡುವಲ್ಲಿ ಹಾಗೂ ಮಾಹಿತಿ ನೀಡಲು ಅನುಕೂಲವಾಗುತ್ತದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯಗಳು ಒಟ್ಟಾಗಿ ಆನೆ ಗಣತಿ ಮಾಡುತ್ತಿರುವುದು ಉತ್ತಮ ಕೆಲಸ. ಗಡಿ ಭಾಗದಲ್ಲಿ ಆಶ್ರಯ ಪಡೆದ ಆನೆಗಳ ಗಣತಿಗೆ ಸಹಕಾರಿಯಾಗುತ್ತದೆ. ಬಂಡೀಪುರ, ಬಿಆರ್ಟಿ, ಕೊಳ್ಳೇಗಾಲ ನಾಗರಹೊಳೆ ಭಾಗದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅದೇ ರೀತಿ ಗಡಿಭಾಗದಲ್ಲಿ ಆನೆಗಳು ಕಡಿಮೆ ಇರುತ್ತವೆ. ಅದನ್ನು ನೋಡಿ ಗಣತಿ ಕಾರ್ಯ ಮಾಡಬೇಕು. ಕೇವಲ ಹೆಸರಿಗಷ್ಟೇ ಗಣತಿ ಆಗಬಾರದು, ಇದರಿಂದ ಅನುಕೂಲವಾಗಬೇಕು. ಒಂದೇ ಕಾಲದಲ್ಲಿ ಆನೆ ಗಣತಿ ಮಾಡುವ ಬದಲು ಮಳೆಗಾಲ, ಚಳಿಗಾಲ ಸೇರಿದಂತೆ ಬೇರೆ ಬೇರೆ ಕಾಲದಲ್ಲಿ ಗಣತಿ ನಡೆಸಿದರೆ ವ್ಯತ್ಯಾಸ ತಿಳಿಯಲು ಸಹಕಾರಿಯಾಗಲಿದೆ. ಆನೆ ಲದ್ದಿಯಿಂದ ಗಣತಿ ಮಾಡುವುದು ಒಂದು ವಿಧಾನ. ಇದರಿಂದ ನಿಖರವಾಗಿ ಮಾಹಿತಿ ಸಿಗಲು ಅನೇಕ ಕ್ರಮಗಳನ್ನು ಅನುಸರಿಸಬೇಕು. ಆನೆ ದಿನಕ್ಕೆ ಎಷ್ಟು ಬಾರಿ ಲದ್ದಿ ಹಾಕುತ್ತದೆ? ಕಾಡಿನಲ್ಲಿ ಎಷ್ಟು ಲದ್ದಿ ಬರುತ್ತದೆ? ಹೊರಗೆ ಎಷ್ಟು ಹೋಗುತ್ತದೆ? ಎಷ್ಟು ಲದ್ದಿ ಹಾಳಾಗಿದೆ? ಎನ್ನುವುದನ್ನು ಪತ್ತೆ ಮಾಡಿ ಮಾಹಿತಿ ಸಂಗ್ರಹಿಸಬೇಕು. ಯಾವ ಪ್ರದೇಶದಲ್ಲಿ ಸಿಕ್ಕ ಲದ್ದಿಯಲ್ಲಿ ಏನು ವ್ಯತ್ಯಾಸ ಬರುತ್ತದೆ ಎನ್ನುವುದನ್ನು ತಿಳಿದು ಅಂಕಿ ಅಂಶ ಸಂಗ್ರಹಿಸಬೇಕು. ಇದರಿಂದ ಆನೆಗಳ ಬಗ್ಗೆ ತಿಳಿಯಬಹುದು. ಆನೆ ಗಣತಿ ಸಂದರ್ಭದಲ್ಲಿ ಅರಣ್ಯ ಇಲಾಖೆ ಮಾರ್ಗದರ್ಶನ ನೀಡುವ ವಿಜ್ಞಾನಿಗಳು ಸರಿಯಾದ ಮಾಹಿತಿ ನೀಡಿ ಅಂಕಿ ಅಂಶ ಸಂಗ್ರಹಿಸಲು ತಿಳಿಸಬೇಕು. ಆದರೆ ಇದು ನಡೆಯುತ್ತಿಲ್ಲ. ಕಾಟಾಚಾರಕ್ಕೆ ಆನೆ ಗಣತಿ ಮಾಡಿ ಅಂಕಿ ಆಂಶ ನೀಡಲಾಗುತ್ತಿದೆ. ಇದರಿಂದ ಯಾವುದೇ ಉಪಯೋಗವಿಲ್ಲ. ಕೇವಲ ಹಣದ ವ್ಯಯವಾಗುತ್ತಿದೆ ಅಷ್ಟೇ. ಆನೆಗಳ ಸಂಖ್ಯೆ ಕಡಿಮೆಯಾದರೂ ಕಷ್ಟ, ಹೆಚ್ಚಾದರೂ ಕಷ್ಟ. ಉತ್ತಮ ಗುಣಮಟ್ಟದ ಅಂಕಿ ಅಂಶ ಹಾಗೂ ಮಾಹಿತಿ ಸಿಗಬೇಕಾದರೆ ಸಮಿತಿಯಲ್ಲಿನ ವಿಜ್ಞಾನಿಗಳ ಮಾರ್ಗದರ್ಶನ ಅಗತ್ಯ. ಆಡಳಿತ ನಿರ್ವಹಣೆಯಲ್ಲಿ ಬದಲಾವಣೆಯಾಗಿ, ವೈಜ್ಞಾನಿಕವಾಗಿ ಎಣಿಕೆ ಕಾರ್ಯ ನಡೆದಾಗ ಮಾತ್ರ ಗುಣಮಟ್ಟದ ಅಂಕಿ ಅಂಶ, ಮಾಹಿತಿ ಸಂಗ್ರಹಿಸಲು ಸಾಧ್ಯ. ಗಣತಿಯನ್ನು ಪೂರ್ಣ ನಂಬುವಂತಿಲ್ಲ ಆನೆ ಗಣತಿಯೇ ತಪ್ಪು. ಅಲ್ಲಿ ಸಿಗುವ ಅಂಕಿ-ಅಂಶಗಳ ಪೈಕಿ ಶೇ.50ರಷ್ಟು ಸರಿ ಇರುವುದಿಲ್ಲ. ಕಾಡಿನಲ್ಲಿ ಕೆಲ ಆನೆಗಳು ಕಾಣಿಸುತ್ತವೆ. ಮತ್ತೆ ಕೆಲ ಆನೆಗಳು ಕಾಣಿಸುವುದಿಲ್ಲ. ಅದರಲ್ಲೂ ಎಣಿಸುವ ಆನೆ, ಗಂಡೋ, ಹೆಣ್ಣೋ ಅಥವಾ ಮರಿ ಆನೆಯೇ ಎಂಬುದನ್ನು ಗುರುತಿಸುವುದು ಕಷ್ಟ. ಆನೆಯ ಬೆನ್ನು ಕಾಣಿಸಿದರೆ ಅದನ್ನು ಹೇಗೆ ಎಣಿಕೆ ಮಾಡಲು ಸಾಧ್ಯ ಎಂದು ನಿವೃತ್ತ ಅರಣ್ಯಾಧಿಕಾರಿ ಕೆ.ಎಂ.ಚಿನ್ನಪ್ಪ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಆನೆ ಗಣತಿಯಲ್ಲಿ ನೀಡುವ ಅಂಕಿ ಅಂಶ ಸರಿ ಇರುವುದಿಲ್ಲ. ಏಕೆಂದರೆ ಕಾಡಿನಲ್ಲಿ ಯಾವುದೇ ಕಾಡಾನೆ ಕಾಣಿಸುವುದು ವಿರಳ. ಎಲ್ಲೋ ಅಲ್ಲಿ ಇಲ್ಲಿ ಎಂಬಂತೆ ಒಂದೋ ಎರಡೋ ಕಾಣಿಸುತ್ತದೆ. ಅದನ್ನು ಲೆಕ್ಕ ಹಾಕಿ ಪ್ರಯೋಜನವೇನು? ಸಾಮಾನ್ಯರು ಆನೆ ಗಣತಿಯಲ್ಲಿ ಭಾಗವಹಿಸುತ್ತಾರೆ. ಇವರಿಗೆ ಅನುಭವವೂ ಇರುವುದಿಲ್ಲ ಎಂದರು. 'ನಾನು ಅಧಿಕಾರದಲ್ಲಿದ್ದಾಗ ಆನೆ ಗಣತಿಯಲ್ಲಿ ಭಾಗವಹಿಸಿದ್ದೆ. ಆ ಸಂದರ್ಭದಲ್ಲಿ ಇಸ್ರೋದ ವಿಜ್ಞಾನಿಯೊಬ್ಬರು ಪಾಲ್ಗೊಂಡಿದ್ದರು. ಕಾಡಿನಲ್ಲಿ ಅವರು ಅರಣ್ಯಾಧಿಕಾರಿ ಜತೆ ಸಂಚಾರ ಮಾಡಿದಾಗ ಅವರಿಗೆ ಆನೆ ಇರಲಿ, ಆನೆಯ ಲದ್ದಿಯೂ ಸಿಕ್ಕಿಲ್ಲ. ಆದರೂ ಅರಣ್ಯ ಸಿಬ್ಬಂದಿ ಬೇಡಿಕೊಂಡು 35 ಆನೆ ನೋಡಿದ್ದೇವೆ ಎಂದು ಬರೆದಿದ್ದ ಪತ್ರಕ್ಕೆ ಸಹಿ ಮಾಡಿಸಿದ ನಿದರ್ಶನವಿದೆ,' ಎಂದು ಚಿನ್ನಪ್ಪ ಘಟನæಯನ್ನು ವಿವರಿಸಿದರು. ಪ್ರತಿ ಮೂರ್ನಾಲ್ಕು ವರ್ಷಕ್ಕೆ ಒಮ್ಮೆ ಆನೆ ಗಣತಿ ಮಾಡುತ್ತಾರೆ. ಆನೆ ಗಣತಿಯಲ್ಲಿ ನೀಡುವ ಅಂಕಿ ಅಂಶ ಸರಿಯಿರುವುದಿಲ್ಲ. ಆನೆ ಕಡಿಮೆ ಇದೆ ಎಂದು ವರದಿ ನೀಡಿದರೆ, ಯಾಕೆ ಕಡಿಮೆಯಾಗಿದೆ ಎಂದು ವಿವರ ನೀಡಬೇಕು. ಈ ಕಾರಣದಿಂದ ವರ್ಷದಿಂದ ವರ್ಷಕ್ಕೆ ಆನೆಗಳ ಸಂಖ್ಯೆ ಹೆಚ್ಚಾಗುತ್ತಿದೆ ವಿನಃ ನಿಖರ ಕಾರಾರಯಚರಣೆಯಿಂದ ಅಲ್ಲ ಎಂದು ಹೇಳಿದರು. ಈ ಸಮಯದಲ್ಲಿ ನೀರಿರುವ ಪ್ರದೇಶದಲ್ಲಿ ಆನೆಗಳು ಕಾಣಿಸಿಕೊಳ್ಳುತ್ತದೆ. ಇಲ್ಲ ಕಬಿನಿ ಹಿನ್ನೀರಲ್ಲಿ ಆನೆಗಳು ಕಾಣಿಸುತ್ತವೆ. ಜತೆಗೆ ಊರ ಕಡೆ ಆನೆಗಳು ಆಹಾರ ಹುಡುಕಿಕೊಂಡು ಹೋಗಿರುತ್ತವೆ. ಆನೆಗಣತಿ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ಅನುಕೂಲವೂ ಇಲ್ಲ. ಕೇವಲ ಹಣ ಸಮಯ ವ್ಯರ್ಥವಾಗುತ್ತದೆ ಅಷ್ಟೇ ಎನ್ನುತ್ತಾರೆ. ರಾಜ್ಯದ ಎಲ್ಲೆಲ್ಲಿ ಗಣತಿ? ಬಂಡೀಪುರ, ಬೆಂಗಳೂರು ಗ್ರಾಮಾಂತರ, ಬನ್ನೇರುಘಟ್ಟ, ಭದ್ರ, ಬಿಆರ್ಟಿ, ಕಾವೇರಿ, ಚಿಕ್ಕಮಗಳೂರು, ಹಾಸನ, ಹುಣಸೂರು(ತಾ), ಕೊಳ್ಳೇಗಾಲ, ಮಡಿಕೇರಿ(ತಾ), ಮಡಿಕೇರಿ (ವನ್ಯಜೀವಿ ವಲಯ), ಮಂಡ್ಯ, ಮೈಸೂರು(ತಾ), ಮೈಸೂರು (ವನ್ಯಜೀವಿ ವಲಯ), ನಾಗರಹೊಳೆ, ರಾಮನಗರ, ವಿರಾಜಪೇಟೆ, ತುಮಕೂರು, ದಾಂಡೆಲಿ, ಬೆಳಗಾವಿ, ಧಾರವಾಡ, ಹಳಿಯಾಳ, ಹಾವೇರಿ, ಯಲ್ಲಾಪುರ, ಭದ್ರಾವತಿ, ಕೊಪ್ಪಳ, ಕುದುರೆ ಮುಖ, ಕುಂದಾಪುರ, ಮಂಗಳೂರು, ಸಾಗರ, ಶಿವಮೊಗ್ಗ (ವನ್ಯಜೀವಿ ವಲಯ). ಆನೆ- ಮಾನವ ಸಂಘರ್ಷದ ವ್ಯಥೆ 1. ಮೈಸೂರಿನಲ್ಲಿ ಜಮೀನುಗಳಿಗೆ ಲಗ್ಗೆ ಮೈಸೂರು ಜಿಲ್ಲೆಯ ಹುಣಸೂರು, ಎಚ್.ಡಿ ಕೋಟೆ, ನಂಜನಗೂಡು ಪಿರಿಯಾಪಟ್ಟಣದ ತಾಲೂಕಿನ ಕೆಲವು ಕಾಡಂಚಿನ ಗ್ರಾಮಗಳಲ್ಲಿ ಆನೆಗಳು ಲಗ್ಗೆ ಇಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಹುಣಸೂರು ತಾಲೂಕಿನ ಸುಮಾರು 20 ಕಿ.ಮೀ.ವರೆಗೆ ಕಾಡಂಚಿನ ಗ್ರಾಮಗಳು ಸಿಗುತ್ತವೆ. ಅಲ್ಲಿಗೆ ಆನೆಗಳು ರೈತರ ತೋಟ ಜಮೀನುಗಳಿಗೆ ಬಂದು ಹೋಗುತ್ತವೆ. ಕಡೆಮನುಗನಹಳ್ಳಿ, ಹೆಬ್ಬಳ್ಳ, ಅಯ್ಯನಕೆರೆಹಾಡಿ, ಉಡುವೇಪುರ, ನೇರಳಕುಪ್ಪೆ. ಕಾಳಬೂಚನಹಳ್ಳಿ, ಕೊಣನಹೊಸಹಳ್ಳಿ, ಮುದುಗನೂರು, ದೊಡ್ಡಹೆಜ್ಜೂರು, ಚಿಕ್ಕ ಹೆಜ್ಜೂರು, ಗುರುಪುರ, ವಾರಂಚಿ ಗ್ರಾಮಗಳಲ್ಲಿ ಕಾಡಾನೆ ದಾಳಿ ಬೆಳೆ ನಾಶ ಮಾಡಿವೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ, ಯಡಿಯಾಲ ವಲಯದ ವ್ಯಾಪ್ತಿಯ ನಂಜನಗೂಡು ತಾಲೂಕು ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕಾಡಾನೆ ದಾಳಿ ನಿರಂತರ. ಹೆಡಿಯಾಲ, ನಾಗಣಾಪುರ, ನಾಗನಾಪುರ ಕಾಲನಿ, ಹಾದನೂರು, ಒಡೆಯನಪುರ, ವೆಂಕಟಗಿರಿ ಕಾಲನಿ, ಅಂಜನಪುರ, ಇಂದ್ರನಗರ, ಹಂಚಿಪುರ, ಹೊಸವೀಡುಪುರ ಗ್ರಾಮಗಳಿಗೆ ಕಾಡಾನೆ ಲಗ್ಗೆ ಹಾಕುವುದು ಹೆಚ್ಚು. 2. ದಾಳಿ ಇಲ್ಲಿ ಮಾಮೂಲಿ ಚಾಮರಾಜನಗರ ಜಿಲ್ಲೆಯ ಭೂ ಪ್ರದೇಶದಲ್ಲಿ ಶೇ.49ರಷ್ಟು ಅರಣ್ಯ ಪ್ರದೇಶವೇ ಇದೆ. ಭೀಕರ ಬರ ತಲೆದೋರಿರುವ ಇಂಥ ಸನ್ನಿವೇಶದಲ್ಲಿ ಕಾಡಿಗೆ ಹೊಂದಿಕೊಂಡಿರುವ ಗಡಿನಾಡಿನತ್ತ ಯಥೇಚ್ಛ ಮೇವು, ನೀರು ಬಯಸುವ ಆನೆಗಳು ಲಗ್ಗೆ ಇಡುತ್ತಿವೆ. ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ) ವನ್ಯಧಾಮ, ಮಹಾದೇಶ್ವರಬೆಟ್ಟ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳು ಜಿಲ್ಲೆಯಲ್ಲಿದ್ದು, ಈ ಅರಣ್ಯಗಳಲ್ಲಿ ಅಂದಾಜು ಎರಡು ಸಾವಿರ ಆನೆಗಳಿರಬಹುದು ಎಂದು ಅಂದಾಜಿಸಲಾಗಿದೆ. ಬಂಡೀಪುರದ ಓಂಕಾರ ಅರಣ್ಯ ವಲಯದ ಕಣಿಯನಪುರ, ಶ್ರೀಕಂಠಪುರ ಸೇರಿದಂತೆ ಈ ಭಾಗದಲ್ಲಿ ಕಾಡಾನೆಗಳು ಹಾವಳಿ ಹೆಚ್ಚಾಗಿದೆ. ಬಿಆರ್ಟಿಯ ಪುಣಜೂರು ವಲಯದ ಚಿಕ್ಕಹೊಳೆ, ಸುವರ್ಣಾವತಿ ಜಲಾಶಯದ ಹಿನ್ನೀರು ಪ್ರದೇಶದ ಗ್ರಾಮಗಳ ರೈತರಿಗೂ ಆನೆಗಳ ಲಗ್ಗೆ ಹೊಸದೇನಲ್ಲ. ಇವು ಹೊಲ, ಜಮೀನಿಗೆ ನುಗ್ಗಿ ದಾಂಧಲೆ ನಡೆಸುವುದನ್ನು ತಡೆಯುವುದೇ ರೈತರಿಗೆ ದೊಡ್ಡ ತಲೆ ನೋವಾಗಿದೆ. ಇನ್ನು ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯ ಹನೂರು ಭಾಗದಲ್ಲೂ ಆನೆಗಳ ಹಾವಳಿ ಶಾಶ್ವತ ಸವಾಲು. 3. ಕಾಫಿ ತೋಟದಲ್ಲಿ ಕಾಡಾನೆ ಹಿಂಡು ಕಾಫಿ ನಾಡು ಕೊಡಗಿನಲ್ಲಿ ಸುಮಾರು 500 ಕ್ಕೂ ಹೆಚ್ಚು ಕಾಡಾನೆಗಳು ಇರುವ ಬಗ್ಗೆ ಅಂದಾಜಿಸಲಾಗಿದೆ. ಇದರಲ್ಲಿ ಕಾಡಾನೆ ಸಂತತಿಯಲ್ಲಿ ಸುಮಾರು 60 ಆನೆಗಳು ಇರಬಹುದು ಎನ್ನಲಾಗಿದೆ. ಈ ಆನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆæ. ಒಂದು ಕಡೆಯಿಂದ ಮತ್ತೊಂದೆಡೆಗೆ ಸುತ್ತಾಡುತ್ತಿರುತ್ತವೆ. ಕಾಡಿಗೆ ಓಡಿಸಲು ಯತ್ನಿಸಿದ ಪ್ರಯತ್ನವೆಲ್ಲ ವಿಫಲವಾಗಿವೆ. ಇವುಗಳಲ್ಲದೇ ಸುಮಾರು 150 ಆನೆಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ಕಾಡಿನಿಂದ ಆಗಿಂದಾಗ್ಗೆ ನಾಡಿಗೆ ಬಂದು ಉಪಟಳ ನೀಡಿ ಮತ್ತೆ ಮರಳುತ್ತವೆ. ಕೊಡಗಿನಲ್ಲಿ ಕಾಡಾನೆ ದಾಳಿಯೇ ಪ್ರಮುಖ ಸಮಸ್ಯೆಯಾಗಿದೆ. ಈ ತೋಟದ ಮಾಲೀಕರು ಕಾಡಾನೆಗಳಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಮಿಕರು ತೋಟಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ. ಹಲವು ಕಾರ್ಮಿಕರು ಕೂಡ ಆನೆ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದಾರೆ. ಈ ಆನೆಗಳು ತೆಂಗು, ಬಾಳೆ, ಅಡಿಕೆಗಳನ್ನು ನಾಶ ಪಡಿಸುತ್ತಿವೆ. ಕಾಫಿ ಹಣ್ಣಾಗುವ ಸಮಯದಲ್ಲಿ ಕಾಫಿಯನ್ನೇ ತಿನ್ನುತ್ತಿರುವುದು ಹೊಸ ತಲೆ ನೋವಾಗಿದೆ. ಈ ಆನೆಗಳ ಲದ್ದಿಯಲ್ಲಿ ಕಾಫಿ ಬೀಜಗಳೇ ಕಂಡು ಬರುತ್ತಿವೆ. ಇಂಥ ನಾಲ್ಕು ಆನೆಗಳನ್ನು ಈಗಾಗಲೇ ಹಿಡಿಯಲಾಗಿದೆ. ಈ ಆನೆಗಳು ರಾತ್ರಿ ವೇಳೆ ಸಿದ್ದಾಪುರ ಹಾಗೂ ಪಾಲಿಬೆಟ್ಟದ ಮುಖ್ಯ ರಸ್ತೆಯಲ್ಲಿ ಸುತ್ತಾಡುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ಕಾಡಾನೆಗೆ ಬಲಿ: 2014-15ರಲ್ಲಿ 8, 2015-16ರಲ್ಲಿ 13, 2016-17ರಲ್ಲಿ 7 ಮಂದಿ ಕಾಡಾನೆಗೆ ಬಲಿಯಾಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕಾಡು ಪ್ರಾಣಿಗಳಿಗೆ 70 ಜಾನುವಾರುಗಳು ಬಲಿಯಾಗಿವೆ. 2014-15ರಲ್ಲಿ ಆಗಿರುವ ಒಟ್ಟು ನಷ್ಟ 1.99 ಕೋಟಿ ರೂ, 2015-16ರಲ್ಲಿ 1.96 ಕೋಟಿ ರೂ, 2016ರ ಅಂತ್ಯದವರೆಗೆ 1.38 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 4. ಆನೆಗೆ ಹೆದರಿ ಶಾಲೆಗೆ ಬೀಗ ಹಾಸನ ಜಿಲ್ಲೆಗೆ ಹೊಂದಿಕೊಂಡಂತಿರುವ ಪಶ್ಚಿಮಘಟ್ಟದಲ್ಲಿ ಎತ್ತಿನಹೊಳೆ ಕಾಮಗಾರಿ ಆರಂಭದ ಬಳಿಕ ಸಕಲೇಶಪುರ-ಆಲೂರು ತಾಲೂಕಿನಲ್ಲಿ ಕಾಡಾನೆ ಉಪಟಳ ಮಿತಿಮೀರಿದೆ. 45ರಿಂದ 50ಕ್ಕೂ ಹೆಚ್ಚು ಆನೆಗಳು ಈ ಭಾಗದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಲೇ ಇರುತ್ತವೆ. ಆಲೂರು-ಸಕಲೇಶಪುರ ತಾಲೂಕಿನಲ್ಲಿ 45ರಿಂದ 50 ಆನೆಗಳು ತಮ್ಮ ಮರಿಗಳೊಂದಿಗೆ ಬೀಡುಬಿಟ್ಟಿದ್ದು, ಮಾನವ ಮತ್ತು ಕಾಡಾನೆ ಸಂಘರ್ಷಕ್ಕೆ 56 ಜನ ಕಳೆದ ಹತ್ತು ವರ್ಷದಲ್ಲಿ ಜೀವ ಕಳೆದುಕೊಂಡಿದ್ದಾರೆ. 86.90 ಲಕ್ಷ ರೂ. ಬೆಳೆ ಪರಿಹಾರ ನೀಡಲಾಗಿದೆ. ಕಾಡಾನೆ ದಾಳಿ ನಿಯಂತ್ರಣಕ್ಕಾಗಿ ಈವರಗೆ 22 ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿದೆ. ಸಕಲೇಶಪುರ ಭಾಗದಲ್ಲಿ ಹಾಡಹಗಲೇ ಕಾಡಾನೆಗಳು ರಸ್ತೆಗೆ ಬಂದು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರೆ. ಹೆತ್ತೂರು, ಕೊತ್ತನಹಳ್ಳಿ ಭಾಗದಲ್ಲಿ ಐದು ಸರಕಾರಿ ಶಾಲೆಗಳು ಮುಚ್ಚಿವೆ. ಪೂರಕ ಮಾಹಿತಿ: ಫಾಲಲೋಚನ ಆರಾಧ್ಯ,ಐತಿಚಂಡ ರಮೇಶ್ ಉತ್ತಪ್ಪ, ಪ್ರಕಾಶ್ ಜಿ., ಫೋಟೊಗಳು: ನಾಗೇಶ್ ಪಾಣತ್ತಲೆ
ಆನೆಗೂ ಫ್ಯಾಮಿಲಿ ಪ್ಲ್ಯಾನಿಂಗ್!
ಆನೆಗಳ ಸಂಖ್ಯೆ ವೃದ್ಧಿಸುವುದನ್ನು ತಡೆಯಲು 'ಕುಟುಂಬ ಯೋಜನೆ' ಜಾರಿಗೆ ಅರಣ್ಯ ಇಲಾಖೆ ಪರಿಶೀಲಿಸುತ್ತಿದ್ದು, ಅನುಮತಿಗಾಗಿ ಸರಕಾರಕ್ಕೆ ಕೋರಿಕೆ ಸಲ್ಲಿಸಿದೆ. ಮಲೆನಾಡು ಹಾಗೂ ಅರಣ್ಯದ ಗಡಿ ಭಾಗಗಳಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಿವೆ. ಅರಣ್ಯಪ್ರದೇಶದ ಸಾಂದ್ರತೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಕರ್ನಾಟಕದಲ್ಲಿವೆ. ಇದರಿಂದಾಗಿ ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮೈಸೂರಿನ ಕೆಲವು ತಾಲೂಕುಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಫಲಕೊಟ್ಟಿಲ್ಲ. ಆದ್ದರಿಂದ ಸಂತಾನಶಕ್ತಿ ನಿಯಂತ್ರಣ ಚಿಕಿತ್ಸೆಯಿಂದ ಆನೆಗಳ ಸಂಖ್ಯೆಯನ್ನು ನಿಯಂತ್ರಿಸುವ ಆಲೋಚನೆ ಅರಣ್ಯ ಇಲಾಖೆಯದ್ದು. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಗೆ ಅಲ್ಲಿನ ಸರಕಾರ ಮುಂದಾಗಿತ್ತು. ಆದರೆ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಆದರೆ, ಕಾಡಾನೆಗಳಿಗೆ ಫ್ಯಾಮಿಲಿ ಪ್ಲ್ಯಾನಿಂಗ್ ವಿದೇಶಗಳಲ್ಲಿ ಜನಪ್ರಿಯವಾಗಿದೆ. ಹಲವು ದೇಶಗಳಲ್ಲಿ ಫ್ಯಾಮಿಲಿ ಪ್ಲ್ಯಾನಿಗ್ ಮೂಲಕ ಕಾಡಾನೆಗಳ ಸಂಖ್ಯೆಯನ್ನು ನಿಯಂತ್ರಿಸಲಾಗಿದೆ.
ತೋಟದಾನೆಗಳು!
ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಕಾಡಾನೆಗಳು ಕಾಫಿ ತೋಟದಲ್ಲಿ ಸೇರಿಕೊಂಡು ಅಲ್ಲಿಯೇ ಮರಿ ಹಾಕಿವೆ. ಈ ಮರಿಗಳು ಕಾಡನ್ನೇ ನೋಡದ ಕಾರಣ ಕಾಫಿ ತೋಟ ಬಿಟ್ಟು ಕದಲುತ್ತಿಲ್ಲ. ಹಾಗಾಗಿ, ಇವುಗಳನ್ನು ತೋಟದ ಆನೆಗಳು ಎಂದೇ ಗುರುತಿಸಲಾಗುತ್ತಿದೆ. ಈ ಆನೆಗಳ ಸಂತತಿ ಕೂಡ ಏರುತ್ತಿದ್ದು, ಮುಂದೆ ಪ್ರಮುಖ ಸಮಸ್ಯೆಯಾಗುವ ಆತಂಕವಿದೆ. ಹಾಗಾಗಿ, ಇವುಗಳ ಮೇಲೆಯೂ ಫ್ಯಾಮಿಲಿ ಪ್ಲ್ಯಾನಿಂಗ್ ಪ್ರಯೋಗ ನಡೆಸುವ ಚಿಂತನೆಯೂ ಇದೆ ಎನ್ನುತ್ತಾರೆ ಅಧಿಕಾರಿಗಳು.
ಆನೆ- ಮಾನವ ಸಂಘರ್ಷ
913: ಕಳೆದ ಆರೂವರೆ ವರ್ಷ(2015ಕ್ಕೆ)ದಲ್ಲಿ ಸತ್ತ ಆನೆಗಳ ಸಂಖ್ಯೆ
194 :ಕಾಡಾನೆ ದಾಳಿಗೆ ಬಲಿಯಾದವರು
80887: ಬೆಳೆ ಹಾನಿಯ ಒಟ್ಟು ಪ್ರಕರಣಗಳು
ಮೋದಿ ಹಾದಿಗೆ ಬಂದ ರಾಷ್ಟ್ರಪತಿ ಗಾದಿ
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ರಾಷ್ಟ್ರಪತಿ ಆಯ್ಕೆಯ ರಾಜಕಾರಣ ಗರಿಗೆದರುತ್ತಿದೆ. ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರಗಳ ಗೆಲುವಿನಿಂದ ಬಲಿಷ್ಠರಾಗಿರುವ ಪ್ರಧಾನಿ ಮೋದಿ, ಮುಂದಿನ ಜುಲೈ ವೇಳೆಗೆ ರಾಷ್ಟ್ರಪತಿ ಆಯ್ಕೆಯನ್ನು ತಮಗನುಕೂಲವಾಗಿ ಮಾಡಿಕೊಳ್ಳಲಿದ್ದಾರೆ. ಎಲೆಕ್ಟೋರಲ್ ಕಾಲೇಜ್ನಲ್ಲಿ ಬಹುಮತಕ್ಕೆ ಸ್ವಲ್ಪವೇ ಸ್ವಲ್ಪ ಅಂತರ ಉಳಿಸಿಕೊಂಡಿರುವ ಎನ್ಡಿಎ, ಅದನ್ನು ತುಂಬಿಕೊಳ್ಳಲಿದೆ. ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬಂದಿದ್ದೇ ತಡ, ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಮಾತುಕತೆಗಳು ಆರಂಭವಾಗಿವೆ. ಆದರೆ ಈ ಸಲದ ಆಯ್ಕೆ ಮಾತ್ರ ನಿಸ್ಸಂಶಯವಾಗಿಯೂ ಪ್ರಧಾನಿ ನರೇಂದ್ರ ಮೋದಿಯವರ ಮೂಗಿನ ನೇರಕ್ಕೇ ನಡೆಯಲಿದೆ ಎಂಬುದರಲ್ಲಿ ಮಾತ್ರ ಯಾರಿಗೂ ಸಂಶಯವಿಲ್ಲ. ಬಿಜೆಪಿಯದ್ದೇ ವ್ಯಕ್ತಿ ಈ ಬಾರಿ ರಾಷ್ಟ್ರಪತಿಯಾಗಲಿದ್ದಾರೆ ಎಂದು ಅನುಮಾನವಿಲ್ಲದೆ ಹೇಳಿಬಿಡಬಹುದು. ಅದಕ್ಕೆ ಕಾರಣ, ಉತ್ತರಪ್ರದೇಶ ಹಾಗೂ ಉತ್ತರಾಖಂಡಗಳ ಮತದಾರರು ಮೋದಿಗೆ ಕೊಟ್ಟ ಬಹುಮತ. ಈ ಸಲದ ಪಂಚರಾಜ್ಯಗಳ ಚುನಾವಣೆ ಒಟ್ಟಾರೆ ರಾಷ್ಟ್ರಪತಿ ಚುನಾವಣೆಯ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಒಂದು ವೇಳೆ ಉತ್ತರಪ್ರದೇಶದಲ್ಲಿ ಕಡಿಮೆ ಸ್ಥಾನಗಳನ್ನು ಪಡೆದು ಬಿಜೆಪಿ ಸೋತಿದ್ದರೆ, ರಾಷ್ಟ್ರಪತಿಯನ್ನು ಆರಿಸಬೇಕಾದ ಎಲೆಕ್ಟೋರಲ್ ಕಾಲೇಜ್ನಲ್ಲಿ ಬಹುಮತ ಸಾಧಿಸಲು ಎನ್ಡಿಎ ತಿಣುಕಾಡಬೇಕಾಗಿ ಬರುತ್ತಿತ್ತು. ಚುನಾವಣೆಗೆ ಮುನ್ನ ಎಲೆಕ್ಟೋರಲ್ ಕಾಲೇಜಿನ ಬಹುಮತಕ್ಕೆ ಎನ್ಡಿಎ 75,000 ಮತಗಳಷ್ಟು ದೂರವಿತ್ತು. ತಮ್ಮ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡುವ ಬಿಜೆಪಿ ಕನಸಿಗೆ ಯುಪಿಎ ಸುಲಭವಾಗಿ ಕಲ್ಲು ಹಾಕಿಬಿಡಬಹುದಿತ್ತು. ಆದರೆ ಈಗ, ಉತ್ತರಪ್ರದೇಶದ ಬಹುತೇಕ ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡ ಬಳಿಕ, ಈ ಅಂತರ 20,000ಕ್ಕಿಳಿದಿದೆ. ಈಗ ಮೋದಿ ಮಾಡಬೇಕಾಗಿರುವುದೆಂದರೆ, ಅಷ್ಟು ಮೌಲ್ಯದ ಮತಗಳನ್ನು ಕೊಡಬಲ್ಲ ಸಣ್ಣ ಪಕ್ಷವೊಂದರ ಸಖ್ಯವನ್ನು ಸಾಧಿಸುವುದು. ಮೋದಿಯವರಿಗೆ ಅದೇನೂ ಕಷ್ಟವಲ್ಲ. ಈ ಹಿಂದೆ ಎನ್ಡಿಎ ಎರಡು ಬಾರಿ ಗದ್ದುಗೆ ಏರಿದ್ದರೂ ರಾಷ್ಟ್ರದ ಅತ್ಯುನ್ನತ ಪದವಿಗೆ ತನ್ನದೇ ಆದ ವ್ಯಕ್ತಿಯೊಬ್ಬರನ್ನು ನೇಮಿಸುವ ಅದರ ಕನಸು ಈಡೇರಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದಾಗಲೂ ಎಲೆಕ್ಟೋರಲ್ ಕಾಲೇಜ್ನಲ್ಲಿ ಸಾಕಷ್ಟು ಬಹುಮತ ಪಡೆಯಲು ಸಾಧ್ಯವಾಗದೆ, ಅಬ್ದುಲ್ ಕಲಾಂರಂಥ ರಾಜಕೀಯೇತರ, ಅಲಿಪ್ತ, ನಿರ್ವಿವಾದಿತ ಹಾಗೂ ದೇಶ ಮೆಚ್ಚುವ ಅರ್ಹತೆಗಳುಳ್ಳ ವ್ಯಕ್ತಿಯನ್ನು ಕರೆದು ಕೂರಿಸಬೇಕಾಯಿತು. ಆ ಮೂಲಕ ಅವರು ವಿರೋಧಿಗಳ ಬಾಯಿ ಮುಚ್ಚಿಸಿದ್ದರು. ಕಲಾಂ ರಾಷ್ಟ್ರಪತಿ ಪದವಿಗೆ ಘನತೆ ಹಾಗೂ ಉಲ್ಲಾಸದ ವಾತಾವರಣವನ್ನು ತಂದುಕೊಟ್ಟಿದ್ದರು. ಆದರೆ ಅದರ ನಂತರ ಪ್ರತಿಭಾ ಪಾಟೀಲ್ ಹಾಗೂ ಪ್ರಣಬ್ ಮುಖರ್ಜಿಯವರಂಥ ಸಂಪೂರ್ಣ ಕಾಂಗ್ರೆಸ್ ವ್ಯಕ್ತಿಗಳನ್ನು ಯುಪಿಎ ಆಡಳಿತ ಆಯ್ಕೆ ಮಾಡಿಕೊಂಡು ಕೂರಿಸಿದೆ. ಈಗ ಎನ್ಡಿಎ ಸರದಿ. ಮೋದಿಯವರು ತಮ್ಮ ಆಯ್ಕೆಯಲ್ಲಿ ಯಶಸ್ವಿಯಾದರೆ, ದೇಶ ಇದೇ ಮೊದಲ ಬಾರಿಗೆ ಒಬ್ಬ ಬಿಜೆಪಿ ನಾಯಕನನ್ನು ರಾಷ್ಟ್ರಪತಿ ಪದವಿಯಲ್ಲಿ ಕಾಣಲಿದೆ. ತಮ್ಮ ಆಡಳಿತದ ಹಾದಿಯಲ್ಲಿ ವಿಘ್ನಗಳನ್ನು ಒಡ್ಡದಂಥ, ತಾನು ಕಳುಹಿಸಿದ ವಿಧೇಯಕಗಳನ್ನು ಕಣ್ಣು ಮುಚ್ಚಿ ಸಹಿ ಮಾಡಿ ಕಳುಹಿಸುವಂಥ ವ್ಯಕ್ತಿಯೊಬ್ಬ ಆ ಪದವಿಯಲ್ಲಿ ಇರಬೇಕು ಎಂದು ಮೋದಿ ಬಯಸಿದರೆ ತಪ್ಪೇನಲ್ಲ. ಅಂಥ ವ್ಯಕ್ತಿಗಳೂ ಸಾಕಷ್ಟಿದ್ದಾರೆ. ಅವರನ್ನು ಆಯ್ಕೆ ಮಾಡುವಂಥ ವಾತಾವರಣವೂ ದೇಶದಲ್ಲಿದೆ. ಮೋದಿಯವರ ಕನಸಿನ ಹಲವಾರು ಮಹತ್ವಾಕಾಂಕ್ಷಿ ವಿಧೇಯಕಗಳು ಕಾಯಿದೆಯಾಗಲು ಕಾಯುತ್ತಿದ್ದು, ರಾಜ್ಯಸಭೆಯಲ್ಲಿ ಬಹುಮತ ಹಾಗೂ ಸಹಿ ಹಾಕಲು ತಮ್ಮವರೇ ರಾಷ್ಟ್ರಪತಿಯೊಬ್ಬರು ಬರಬೇಕಾಗಿದೆ. ಕೆಲವರು ಹೆಸರುಗಳು ಕೇಳಿಬರುತ್ತಿವೆ. ಮುಖ್ಯವಾಗಿ ಮುತ್ಸದ್ದಿ ಎಲ್.ಕೆ.ಆಡ್ವಾಣಿಯವರ ಹೆಸರು ಮುಂಚೂಣಿಯಲ್ಲಿದೆ. ಪ್ರಧಾನಿಯಾಗಬೇಕೆಂಬ ಆಡ್ವಾಣಿಯವರ ಕನಸು ಕಳೆದ ಬಾರಿ ನುಚ್ಚುನೂರಾಗಿತ್ತು. ಬಿಜೆಪಿಯಲ್ಲಿ ವಾಜಪೇಯಿ ಬಿಟ್ಟರೆ ಈಗ ಇರುವ ಅತ್ಯಂತ ಹಿರಿಯ ನಾಯಕ ಅವರೇ. ಪಕ್ಷವನ್ನು ದೇಶದಲ್ಲಿ ದೃಢವಾಗಿ ಕಟ್ಟಿ ಬೆಳೆಸಿದ ಗರಿಮೆ ಅವರದು. ಸಹಜವಾಗಿ, ಆಡ್ವಾಣಿಯವರೇ ರಾಷ್ಟ್ರಪತಿ ಆಗಲೆಂದು ಬಿಜೆಪಿಯ ಮುಖಂಡರು, ಜತೆಗೆ ಸಂಘ ಪರಿವಾರ ಕೂಡ ಬಯಸುವ ಸಾಧ್ಯತೆ ಇದೆ. ಆಡ್ವಾಣಿಗೆ ಇತರ ಪಕ್ಷಗಳಲ್ಲೂ ಸಾಕಷ್ಟು ಮಿತ್ರರಿದ್ದಾರೆ. ಇದರಿಂದ ಅವರ ಗೆಲುವಿನ ಹಾದಿ ಸುಗಮವಾಗಬಹುದು.
ನಾಲ್ಕು ರಾಷ್ಟ್ರಗಳಲ್ಲಿ ಹಸಿವಿನ ಹಾಹಾಕಾರ
ಯೆಮೆನ್, ನೈಜೀರಿಯಾ, ದಕ್ಷಿಣ ಸೂಡಾನ್ ಮತ್ತು ಸೊಮಾಲಿಯ ರಾಷ್ಟ್ರಗಳು ಬೃಹತ್ ಮಾನವ ನಿರ್ಮಿತ ಬಿಕ್ಕಟ್ಟಿಗೆ ಸಾಕ್ಷಿಯಾಗುತ್ತಿವೆ. ಜಗತ್ತು 1945ರ ನಂತರ ಎದುರಿಸುತ್ತಿರುವ ಅತಿ ದೊಡ್ಡ ಬಿಕ್ಕಟ್ಟಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ತಕ್ಷ ಣಕ್ಕೆ ಪರಿಹಾರ ಒದಗಿಸದಿದ್ದರೆ ಲಕ್ಷಾಂತರ ಜನರು ಹಸಿವಿನಿಂದ ಸಾಯಲಿದ್ದಾರೆಂದು ಎಚ್ಚರಿಸಿದೆ. ಈ ಮಾನವ ನಿರ್ಮಿತ ಬಿಕ್ಕಟ್ಟಿನ ಬಗ್ಗೆ ಇಲ್ಲಿದೆ ಮಾಹಿತಿ. ಜಗತ್ತು ಮತ್ತೊಮ್ಮೆ ಅತಿ ದೊಡ್ಡ ಮಾನವ ನಿರ್ಮಿತ ಬಿಕ್ಕಟ್ಟಿನತ್ತ ಸಾಗುತ್ತಿದೆಯೇ? ವಿಶ್ವಸಂಸ್ಥೆಯ ಹ್ಯೂಮನಿಟೇರಿಯನ್ ವಿಭಾಗದ ಮುಖ್ಯಸ್ಥ ಸ್ಟಿಫನ್ ಒಬ್ರೇನ್ ಅವರ ಪ್ರಕಾರ ಹೌದು. ಎರಡನೇ ಜಾಗತಿಕ ಯುದ್ಧದ ಬಳಿಕ ಜಗತ್ತು ಮತ್ತೊಂದು ಬೃಹತ್ ಮಾನವ ನಿರ್ಮಿತ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾಲ್ಕು ದೇಶಗಳಲ್ಲಿ 2 ಕೋಟಿಗಿಂತಲೂ ಹೆಚ್ಚು ಜನರು ಹಸಿವು ಮತ್ತು ಬರದಿಂದ ತತ್ತರಿಸುತ್ತಿದ್ದಾರೆ. ಈಶಾನ್ಯ ನೈಜೀರಿಯಾ, ಸೊಮಾಲಿಯಾ, ದಕ್ಷಿಣ ಸೂಡಾನ್ ಮತ್ತು ಯೆಮೆನ್ ರಾಷ್ಟ್ರಗಳು ವ್ಯಾಪಕ ಬರಗಾಲಕ್ಕೆ ತುತ್ತಾಗಿದ್ದು, ಜುಲೈ ವೇಳೆಗೆ ಸುಮಾರು 4.4 ಶತಕೋಟಿ(287 ಶತಕೋಟಿ ರೂ.) ಡಾಲರ್ನಷ್ಟು ನೆರವು ನೀಡದಿದ್ದರೆ, ಭಾರೀ ಪ್ರಮಾಣದಲ್ಲಿ ಸಾವುಗಳು ಸಂಭವಿಸಲಿದೆ ಎಂಬುದು ಒಬ್ರೇನ್ ಅವರ ಅಭಿಪ್ರಾಯವಾಗಿದೆ. ಒಂದೊಮ್ಮೆ ತಕ್ಷ ಣಕ್ಕೆ ಪರಿಹಾರ ಕಾರ್ಯಾಚರಣೆ ಕೈಗೊಳ್ಳದಿದ್ದರೆ, 14 ಲಕ್ಷ ಮಕ್ಕಳು ಈ ವರ್ಷವೇ ತೀವ್ರ ಹಸಿವಿನಿಂದ ಸಾಯಬಹುದು ಎಂದು ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಎಚ್ಚರಿಸಿದ್ದಾರೆ. ಜಗತ್ತಿನಲ್ಲಿ ಒಂದೆಡೆ ಸಂಪತ್ತು ಕ್ರೋಡೀಕರಣವಾಗುತ್ತಿದ್ದರೆ, ಮತ್ತೊಂದೆಡೆ ಜನರು ಒಂದು ಹೊತ್ತಿನ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಇಂಥ ಅಸಮಾನತೆಗೆ ನೈಸರ್ಗಿಕ ವಿಕೋಪಗಳು ಕಾರಣವಲ್ಲ. ಬದಲಾಗಿ ಇವೆಲ್ಲವೂ ಮಾನವ ನಿರ್ಮಿತ ಬಿಕ್ಕಟ್ಟುಗಳು. ಆಯಾ ದೇಶಗಳಲ್ಲಿ ನಡೆಯುವ ನಾಗರಿಕ ಸಂಘರ್ಷ, ಭ್ರಷ್ಟಾಚಾರ, ಕಳಪೆ ಆಡಳಿತ, ಶ್ರೀಮಂತ ದೇಶಗಳ ಲಾಲಸೆ ಇದಕ್ಕೆಲ್ಲ ಕಾರಣ ಎಂದು ಹೇಳಬಹುದು. ಅದರಲ್ಲೂ ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಇಲ್ಲಿನ ಮಕ್ಕಳು ಅಪೌಷ್ಟಿಕಾಂಶದಿಂದ ಬಳಲುತ್ತಿವೆ. ತಮ್ಮ ಕಣ್ಣ ಮುಂದೆಯೇ ಹಸುಗೂಸುಗಳು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಏನೂ ಮಾಡದಂಥ ಅಸಹಾಯಕ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದಾರೆ. ನೆರವಿಗೆ ಬರಬೇಕಿದ್ದ ಸರಕಾರಗಳು ಭ್ರಷ್ಟಾಚಾರ ಮತ್ತು ಯುದ್ಧದಲ್ಲಿ ನಿರತವಾಗಿವೆ. ಇಂಥ ಕಡೆಗಳಲ್ಲಿ ನೆರವಿನ ಹಸ್ತದೊಂದಿಗೆ ಮುನ್ನುಗ್ಗುವ ವಿಶ್ವಸಂಸ್ಥೆಯೂ ಪೂರ್ಣ ಪ್ರಮಾಣದಲ್ಲಿ ತನ್ನ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಬೇಕಾದ ಹಣಕಾಸು ಬೆಂಬಲ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ವಿಶ್ವ ಸಮುದಾಯಕ್ಕೆ ಕರೆ ನೀಡುತ್ತಿದ್ದು, ಜುಲೈ ಹೊತ್ತಿಗೆ ಸಾಕಷ್ಟು ಪ್ರಮಾಣದಲ್ಲಿ ಧನ ಸಹಾಯ ಮಾಡಿದಿದ್ದರೆ ಕೋಟ್ಯಂತರ ಜನರು ಹಸಿವಿನಿಂದ ಸಾಯುವುದು ಶತಃಸಿದ್ಧ. ಗಂಡಾಂತರ ಎದುರಾಗಲಿದೆ: ''ಸಾಮೂಹಿಕ ಮತ್ತು ಜಾಗತಿಕ ಸಮನ್ವಯದ ಪ್ರಯತ್ನ ಫಲಕೊಡದಿದ್ದರೆ ಅತಿ ದೊಡ್ಡ ಗಂಡಾಂತರ ಎದುರಾಗಲಿದೆ. ಹಸಿವಿನಿಂದ ಜನರು ತಮ್ಮ ಪ್ರಾಣ ಕಳೆದುಕೊಳ್ಳಲಿದ್ದಾರೆ. ಮತ್ತೊಂದಿಷ್ಟು ಜನರು ಅನೇಕ ಕಾಯಿಲೆಗಳಿಗೆ ಬಲಿಯಾಗಲಿದ್ದಾರೆ. ಮಕ್ಕಳು ಶಾಲೆ ತೊರೆಯಲಿದ್ದಾರೆ. ಒಟ್ಟಿನಲ್ಲಿ ಜನರ ಬದುಕು ಮತ್ತು ಅವರ ಭವಿಷ್ಯ ಪೂರ್ತಿ ಕೊನೆಯಾಗಲಿದೆ,'' ಎನ್ನುತ್ತಾರೆ ಒಬ್ರೇನ್ ಅವರು. ಯೆಮೆನ್ನಲ್ಲಿ ಅತಿ ಕೆಟ್ಟ ಮಾನವ ನಿರ್ಮಿತ ಬಿಕ್ಕಟ್ಟು ಎದುರಾಗಿದೆ. ಅಲ್ಲಿಯ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಅಥವಾ 18.8 ದಶಲಕ್ಷ ಜನರು ಸಂಕಟದಲ್ಲಿದ್ದು, ಅವರಿಗೆ ನೆರವಿನ ಅಗತ್ಯವಿದೆ. 70 ಲಕ್ಷ ಕ್ಕೂ ಹೆಚ್ಚು ಜನರಿಗೆ ನಿತ್ಯ ಆಹಾರವೂ ದೊರೆಯುತ್ತಿಲ್ಲ. ಯೆಮೆನ್ನಲ್ಲಿ ಸಂಘರ್ಷದಿಂದಾಗಿ 7,400 ಜನರು ಮೃತಪಟ್ಟಿದ್ದರೆ, 40,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆ. ಕಳೆದ ಎರಡು ತಿಂಗಳಲ್ಲಿ 48,000 ಜನರು ದೇಶವನ್ನು ತೊರೆದಿದ್ದಾರೆ. ದಕ್ಷಿಣ ಸೂಡಾನ್ನಲ್ಲಿ ಕಳೆದ ಮೂರು ವರ್ಷಗಳಿಂದ ನಾಗರಿಕ ಸಂಘರ್ಷ ಜಾರಿಯಲ್ಲಿದೆ. ಇಲ್ಲಿ ಉಂಟಾಗಿರುವ ಬರ ಸಂಪೂರ್ಣವಾಗಿ ಮಾನವ ನಿರ್ಮಿತದ್ದಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆಯಿಂದ ಪರಿಹಾರ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ. ನೈಜೀರಿಯಾದಲ್ಲಿ ಇಸ್ಲಾಮಿಕ್ ಉಗ್ರವಾದಿ ಸಂಘಟನೆ ಬೋಕೊ ಹರಾಮ್ 20 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದು ಹಾಕಿದ್ದು, ಲಕ್ಷಾಂತರ ಜನರು ದೇಶಬಿಟ್ಟು ಹೋಗುವಂತೆ ಮಾಡಿದೆ. ನೈಜೀರಿಯಾ ಕೂಡ ಭಾರಿ ಪ್ರಮಾಣದಲ್ಲಿ ಆಹಾರದ ಕೊರತೆಯನ್ನು ಎದುರಿಸುತ್ತಿದ್ದು ಶೀಘ್ರವೇ ಪರಿಹಾರವನ್ನು ಕೈಗೊಳ್ಳದಿದ್ದರೆ ಲಕ್ಷಾಂತರ ಜನರು ಹಸಿವಿನಿಂದ ಸಾಯಲಿದ್ದಾರೆ. ಸೊಮಾಲಿಯಾದಲ್ಲೂ ಇದೇ ಪರಿಸ್ಥಿತಿ ಇದೆ. ಈ ದೇಶದ 62 ಲಕ್ಷ ಜನರಿಗೆ ಆಹಾರ ಸಿಗುತ್ತಿಲ್ಲ. ಈ ಪೈಕಿ 29ಲಕ್ಷ ಜನರಿಗೆ ತಕ್ಷ ಣದ ನೆರವಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಸಮುದಾಯ ಈ ರಾಷ್ಟ್ರಗಳ ಜನರ ರಕ್ಷ ಣೆಗೆ ಮುಂದಾಗಬೇಕಿದೆ. ಇಲ್ಲದಿದ್ದರೆ, ಜಗತ್ತು ಬಹುದೊಡ್ಡ ಮಾನವ ನಿರ್ಮಿತ ವಿಪತ್ತಿಗೆ ಕಾರಣವಾಗಲಿದೆ. ಬರಗಾಲದ ವ್ಯಾಖ್ಯಾನ ಬರಗಾಲದ ವ್ಯಾಖ್ಯಾನ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ ಎಂಬುದು ವಿಶ್ವಸಂಸ್ಥೆ ಮತ್ತು ಪರಿಹಾರ ನಿರತ ಸಂಸ್ಥೆಗಳ ಅಂಬೋಣ. ಅಂತಾರಾಷ್ಟ್ರೀಯ ಮಾನದಂಡವನ್ನಿಟ್ಟುಕೊಂಡು ಹೇಳುವುದಾದರೆ, ಶೇ.20ರಷ್ಟು ಕುಟುಂಬಗಳು ಸಂಪೂರ್ಣವಾಗಿ ಆಹಾರ ಕೊರತೆಯನ್ನು ಎದುರಿಸುತ್ತಿದ್ದರೆ ಮತ್ತು ಅಪೌಷ್ಟಿಕಾಂಶದ ಪ್ರಮಾಣ ಶೇ.30ಕ್ಕಿಂತಲೂ ಹೆಚ್ಚಾಗಿದ್ದರೆ ಅದು ಬರಗಾಲದ ಸ್ಥಿತಿಯನ್ನು ಸೂಚಿಸುತ್ತದೆ. ಇದೇ ವೇಳೆ, ಹಸಿವಿನಿಂದ ಪ್ರತಿ 10 ಸಾವಿರ ಜನರಲ್ಲಿ ನಿತ್ಯ ಇಬ್ಬರು ಜನರು ಸಾಯುತ್ತಿದ್ದರೆ ಅದನ್ನು ಬರಗಾಲದ ವ್ಯಾಖ್ಯಾನಕ್ಕೆ ಸೇರಿಸಲಾಗುತ್ತದೆ. ಇದೀಗ ಯೆಮೆನ್, ದಕ್ಷಿಣ ಸೂಡಾನ್, ಸೊಮಾಲಿಯಾ ಮತ್ತು ಈಶಾನ್ಯ ನೈಜೀರಿಯಾದಲ್ಲಿ ಇಂಥದ್ದೇ ಪರಿಸ್ಥಿತಿ ಉದ್ಭವವಾಗಿದೆ. ಯೆಮೆನ್ನಲ್ಲಿ ಯಮಯಾತನೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಯೆಮೆನ್ನಲ್ಲಿ ನಾಲ್ಕು ವರ್ಷದ ಮಗು, ಆಗತಾನೇ ಜನಿಸಿದ ಮಗುವಿಗಿಂತ ದೊಡ್ಡದಿಲ್ಲ. ಅಂದರೆ, ಮಗುವಿನ ಬೆಳವಣಿಗೆಗೆ ಬೇಕಾದ ಆಹಾರ ಪೂರೈಕೆಯಾಗುತ್ತಿಲ್ಲ. ತನ್ನ ಕಣ್ಣಮುಂದೆ ಸಾಯುತ್ತಿರುವ ಮಗುವನ್ನು ಬದುಕಿಸಿಕೊಳ್ಳುವ ಸ್ಥಿತಿಯಲ್ಲಿ ಅಲ್ಲಿನ ತಾಯಿಂದಿರು ಇಲ್ಲ. ಎಂಥ ಪರಿಸ್ಥಿತಿ ಇದೆ ಎಂದರೆ; ಗುಣಪಡಿಸಬಹುದಾದ ಕಾಯಿಲೆಗಳಿಂದಾಗಿ ಪ್ರತಿ 10 ನಿಮಿಷಕ್ಕೆ ಒಂದು ಮಗು ತನ್ನ ಪ್ರಾಣಕಳೆದುಕೊಳ್ಳುತ್ತಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 5 ಲಕ್ಷ ಕ್ಕೂ ಹೆಚ್ಚು ಮಕ್ಕಳು ತೀವ್ರತರ ಅಪೌಷ್ಟಿಕಾಂಶದಿಂದ ಬಳಲುತ್ತಿದ್ದಾರೆ. ಹೌಥಿ ಬಂಡುಕೋರರು ಮತ್ತು ಸ್ಥಳೀಯ ಸರಕಾರದ ನಡುವಿನ ಸಂಘರ್ಷದಿಂದಾಗಿ ಕಳೆದ ಎರಡು ವರ್ಷದಲ್ಲಿ ಅಲ್ಲಿನ ಜನ ಬಳಲಿ ಬೆಂಡಾಗಿದ್ದಾರೆ. ತಕ್ಷ ಣವೇ ಈ ಜನಕ್ಕೆ ನೆರವಿನ ಅಗತ್ಯವಿದೆ. ಮತ್ತೊಂದೆಡೆ, ಜಾಗತಿಕ ಸಮದಾಯದ ನೆರವು ಕೂಡ ಸರಿಯಾಗಿ ತಲುಪಿಸಲು ಇಲ್ಲಿ ಸಾಧ್ಯವಾಗುತ್ತಿಲ್ಲ. ಸ್ಥಳೀಯ ಕಾನೂನುಗಳ ವೈಫಲ್ಯ, ಕೆಟ್ಟ ಆಡಳಿತವೇ ಇದಕ್ಕೆ ಕಾರಣ. ಸುಡುತ್ತಿರುವ ಸೂಡಾನ್ ಮಾನವ ನಿರ್ಮಿತ ಬಿಕ್ಕಟ್ಟಿನಲ್ಲಿ ದಕ್ಷಿಣ ಸೂಡಾನ್ ಬೇಯುತ್ತಿದೆ. ಬಹಳಷ್ಟು ಜನರಿಗೆ ತಿನ್ನಲು ಅನ್ನ ಸಿಗುತ್ತಿಲ್ಲ. ಮಕ್ಕಳಲ್ಲಿ ಅಪೌಷ್ಟಿಕಾಂಶ ತಾಂಡವವಾಡುತ್ತಿದೆ. ವಿಶ್ವಸಂಸ್ಥೆಯ ಪ್ರಕಾರ, ಲಕ್ಷ ಕ್ಕೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಮತ್ತೆ ಒಂದು ಲಕ್ಷ ಜನರು ಬರದ ತೀವ್ರ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಇಡೀ ದೇಶಾದ್ಯಂತ ಆಹಾರ ಹಾಹಾಕಾರ ಎದ್ದಿದೆ. ದಕ್ಷಿಣ ಸೂಡಾನ್ನ ಒಟ್ಟು ಜನಸಂಖ್ಯೆಯ ಶೇ.40ರಷ್ಟು ಜನರಿಗೆ ತಕ್ಷ ಣಕ್ಕೆ ಆಹಾರದ ಪೂರೈಕೆ ಅಗತ್ಯವಿದೆ. ಜತೆಗೆ ಪೌಷ್ಟಿಕಾಂಶದ ನೆರವು ಬೇಕಿದೆ. 2013ರಿಂದ ಯುದ್ಧದ ನೆರಳಲ್ಲಿ ನರಳಾಡುತ್ತಿರುವ ದಕ್ಷಿಣ ಸೂಡಾನ್ ಅಕ್ಷ ರಶಃ ಅರಾಜಕತೆಯ ಪ್ರಯೋಗಾಲಯವಾಗಿದೆ. ಆ ದೇಶದ ಅಧ್ಯಕ್ಷ ರೇ ಕೆಲವು ಪ್ರದೇಶಗಳಿಗೆ ಪರಿಹಾರ ಕಾರ್ಯಾಚರಣೆ ಕೈಗೊಳ್ಳದಂತೆ ತಡೆಯುತ್ತಿದ್ದಾರೆ ಎಂಬುದು ವಿಶ್ವಸಂಸ್ಥೆಯ ಆರೋಪವಾಗಿದೆ. ಜತೆಗೆ, ಜಾಗತಿಕ ಸಮುದಾಯ ನೀಡಿರುವ ಆಹಾರವನ್ನು ಲೂಟಿ ಮಾಡುವಂಥ ಘಟನೆಗಳು ನಡೆಯುತ್ತಿವೆ. ಹೀಗಾಗಿ, ವಿಶ್ವಸಂಸ್ಥೆಯ ಪ್ರಯತ್ನಗಳು ಕೈಗೂಡುತ್ತಿಲ್ಲ. ನಲುಗುತ್ತಿದೆ ನೈಜೀರಿಯಾ ಈಶಾನ್ಯ ನೈಜೀರಿಯಾದಲ್ಲಿ ಮಾನವ ನಿರ್ಮಿತ ಬರಗಾಲ ತಾಂಡವವಾಡುತ್ತಿದೆ. ಹಾಗಾಗಿಯೇ, ವಿಶ್ವಸಂಸ್ಥೆ ಇದನ್ನು ಆಫ್ರಿಕಾ ಖಂಡದ ಅತಿ ದೊಡ್ಡ ಬಿಕ್ಕಟ್ಟು ಎಂದು ಬಣ್ಣಿಸಿದೆ. ಇಸ್ಲಾಮಿಕ್ ಉಗ್ರ ಸಂಘಟನೆ ಬೋಕೊ ಹರಾಮ್ ಸಾವಿರಾರು ಜನರನ್ನು ಕೊಂದು ಹಾಕಿದೆ. 20 ಲಕ್ಷ ಕ್ಕಿಂತ ಹೆಚ್ಚು ಜನರು ದೇಶ ತೊರೆಯುವಂತೆ ಮಾಡಿದೆ. ಇಷ್ಟೆಲ್ಲದರ ಮಧ್ಯೆಯೂ ಅಲ್ಲಿ ಬದುಕುತ್ತಿರುವ ಜನರಿಗೆ ಅರ್ಜೆಂಟಾಗಿ ನೆರವಿನ ಅಗತ್ಯವಿದೆ. ಕಳೆದ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆ ಅಂದಾಜಿಸಿದಂತೆ ಕನಿಷ್ಠ 75 ಸಾವಿರ ಮಕ್ಕಳು ಹಸಿವಿನಿಂದ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಇದಲ್ಲದೆ, 71 ಲಕ್ಷ ಜನರು ಭಾರೀ ಪ್ರಮಾಣದಲ್ಲಿ ಆಹಾರ ಕೊರತೆಯನ್ನು ಎದುರಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಪರಿಹಾರ ಕಾರ್ಯಾಚರಣೆಗೆ ಪ್ರಮುಖ ಅಡ್ಡಿಯಾಗಿರುವ ಬೋಕೊ ಹರಾಮ್ ಉಗ್ರ ಸಂಘಟನೆ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ. ನೈಜೀರಿಯಾದ ಇನ್ನೂ ಅನೇಕ ಪ್ರದೇಶಗಳು ಬೋಕೊ ಹರಾಮ್ ಹಿಡಿತದಲ್ಲಿದ್ದು, ಅಂಥ ಪ್ರದೇಶಗಳಲ್ಲಿ ಆಹಾರ ಪೂರೈಸುವುದು ಕಷ್ಟವಾಗುತ್ತಿದೆ. ಸೊಮಾಲಿಯಾ ಸಂಕಟ ಕೇವಲ 6 ವರ್ಷಗಳ ಹಿಂದಷ್ಟೇ ಭೀಕರ ಬರ ಎದುರಿಸಿದ್ದ ಸೊಮಾಲಿಯಾ ಇದೀಗ ಮತ್ತೊಂದು ಸಂಕಟಕ್ಕೆ ತೆರೆದುಕೊಂಡಿದೆ. ಆರು ವರ್ಷದ ಹಿಂದೆ 260,000 ಜನರು ಸತ್ತಿದ್ದರು. ಇದೀಗ ಮತ್ತೆ ಮಾನವ ನಿರ್ಮಿತ ಬಿಕ್ಕಟ್ಟಿಗೆ ತೆರೆದುಕೊಂಡಿರುವ ಸೊಮಾಲಿಯಾದಲ್ಲಿ ಮಾರ್ಚ್ನಲ್ಲಿ ಹಸಿವಿನಿಂದ 110 ಜನರು ಸತ್ತಿದ್ದಾರೆ. ಈ ಪ್ರಮಾಣ ಹೀಗೆಯೇ ಮುಂದುವರಿದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತದೆ ವಿಶ್ವಸಂಸ್ಥೆ. ಎಲ್ ನಿನೊ ಪರಿಣಾಮವಾಗಿ ಸೊಮಾಲಿಯಾದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿದೆ. ಇದರಿಂದಾಗಿ ಬೆಳೆ ಕೂಡ ನಷ್ಟವಾಗಿದ್ದು, 62 ಲಕ್ಷ ಜನರಿಗೆ ತಕ್ಷ ಣಕ್ಕೆ ನೆರವಿನ ಅಗತ್ಯವಿದೆ. ಇದರ ಮಧ್ಯೆಯೂ ವಿಶ್ವಸಂಸ್ಥೆ ಪರಿಹಾರಕ್ಕೆ ಮುಂದಾಗಿದೆ. ಆದರೆ, ಆಗಾಗ ನಡೆಯುವ ಇಸ್ಲಾಮಿಕ್ ಉಗ್ರ ಸಂಘಟನೆ ಅಲ್ ಷಬಾಬ್ನ ದಾಳಿ, ಸಡಿಲವಾದ ಕಾನೂನುಗಳಿಂದಾಗಿ ಸೂಕ್ತ ಪ್ರಮಾಣದಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಅಡ್ಡಿಯಾಗುತ್ತಿದೆ. - 4.4 ಶತಕೋಟಿ ಡಾಲರ್ ಜುಲೈ ವೇಳೆಗೆ ನಾಲ್ಕು ರಾಷ್ಟ್ರಗಳ ಪರಿಹಾರಕ್ಕೆ ಬೇಕಾಗುವ ಮೊತ್ತ - 14,00,000 ಸಮಯಕ್ಕೆ ಸರಿಯಾಗಿ ಪರಿಹಾರ ದೊರೆಯದಿದ್ದರೆ ಸಾಯಲಿರುವ ಮಕ್ಕಳ ಪ್ರಮಾಣ - 2,00,00,000 ನಾಲ್ಕು ರಾಷ್ಟ್ರಗಳು ಸೇರಿ ಆಹಾರ ಕೊರತೆ ಎದುರಿಸುತ್ತಿರುವವರ ಒಟ್ಟು ಸಂಖ್ಯೆ ಆಹಾರ ಬಿಕ್ಕಟ್ಟು ಎದುರಿಸುತ್ತಿರುವವರು ನೈಜೀರಿಯಾ - 18 ಲಕ್ಷ ಜನರು ದಕ್ಷಿಣ ಸೂಡಾನ್- 49 ಲಕ್ಷ ಜನರು ಯಮೆನ್- 1.41 ಕೋಟಿ ಜನರು ಸೊಮಾಲಿಯಾ- 29 ಲಕ್ಷ ಜನರು
ಸ್ಥಾಯಿ ಸಮಿತಿಗಳ ಕಾರ್ಯವೈಖರಿ ಸುಧಾರಣೆಯಾಗಲಿ
ವಿಧಾನ ಮಂಡಲದ ಸದಸ್ಯರು ಸದನದ ಕಾರ್ಯಕಲಾಪ ಹಾಗೂ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಂಬಂಧ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಗೂ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ್ ಅವರಿಗೆ ಮೇಲ್ಮನೆಯ ಹಿರಿಯ ಸದಸ್ಯರಾದ ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು ಬರೆದಿರುವ ಪತ್ರದ ಸಾರಾಂಶ ಇಲ್ಲಿದೆ. ಕರ್ನಾಟಕ ವಿಧಾನ ಮಂಡಲವು ದೇಶದ ಸಂಸದೀಯ ಇತಿಹಾಸ ಮತ್ತು ಪರಂಪರೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದು, ಪ್ರಜಾಪ್ರಭುತ್ವದ ಆಶಯಗಳಿಗೆ, ತತ್ವಗಳಿಗೆ ಅನುಸಾರವಾಗಿ ಉತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಹೊಂದಿದೆ. ನಮ್ಮ ವಿಧಾನ ಮಂಡಲದ ಉಭಯ ಸದನಗಳ ಚರ್ಚೆ, ನಡಾವಳಿಗಳು ಹಾಗೂ ನಿರ್ಣಯಗಳು ದೇಶದ ಗಮನವನ್ನು ಸೆಳೆದಿವೆ. ತಾವು ವಿಧಾನಸಭಾಧ್ಯಕ್ಷರಾದ ನಂತರ ವಿಧಾನ ಮಂಡಲದ ಕಾರ್ಯ ಕಲಾಪಗಳನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ನಡೆಸುವ ವಿಚಾರದಲ್ಲಿ ವಿಧಾನ ಪರಿಷತ್ತಿನ ಸಭಾಪತಿಯವರು ಮತ್ತು ತಾವು ಕೆಲವೊಂದು ನೂತನ ಬದಲಾವಣೆಗಳನ್ನು ತರುವ ಪ್ರಯತ್ನದಲ್ಲಿ ಮುನ್ನಡೆಯುತ್ತಿರುವುದು ಅಭಿನಂದನಾರ್ಹವಾದ ವಿಚಾರ. ತನ್ಮೂಲಕ ಅಧಿವೇಶನಗಳಲ್ಲಿ ವಿಧಾನ ಮಂಡಲದ ಸ್ಥಾಯಿ ಸಮಿತಿಗಳಲ್ಲಿ ನಡೆಯುವ ಕಾರ್ಯ ಕಲಾಪಗಳು ಹಾಗೂ ನಡವಳಿಕೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಸಮಸ್ಯೆಗಳನ್ನು ಪರಿಹರಿಸುವದಕ್ಕೆ ಅನುಕೂಲವಾಗುವಂತೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ವಿಧಾನ ಪರಿಷತ್ತಿನ ಸದಸ್ಯನಾಗಿ, ವಿವಿಧ ಸಮಿತಿಗಳ ಅಧ್ಯಕ್ಷ, ಸದಸ್ಯ ಹಾಗೂ ಸಚಿವನಾಗಿ 35 ವರ್ಷಗಳ ಕಾಲ ಸಂಸದೀಯ ಅನುಭವವನ್ನು ಹೊಂದಿರುವ ನಾನು, ಈ ವಿಚಾರದಲ್ಲಿ ಕೆಲವೊಂದು ಸಲಹೆಗಳನ್ನು ತಮ್ಮ ಅವಗಾಹನೆಗೆ ತರಲು ಇಚ್ಛಿಸುತ್ತೇನೆ. ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳು ಕಾರ್ಯನಿರ್ವಹಿಸುತ್ತಿರುವ ರೀತಿ, ಸಮಿತಿಯ ನಡವಳಿಕೆಗಳ ಬಗ್ಗೆ ಸಾರ್ವಜನಿಕರು/ಅಧಿಕಾರಿಗಳು ಅಷ್ಟೇ ಏಕೆ ಸಮಿತಿಯ ಸದಸ್ಯರು ಹೊಂದಿರುವ ಕೆಲವು ಋುಣಾತ್ಮಕ ಧೋರಣೆಗಳನ್ನು ಅತ್ಯಂತ ನೋವಿನಿಂದ ತಮ್ಮ ಗಮನಕ್ಕೆ ತರಬಯಸುತ್ತೇನೆ. ಈ ಹಿಂದೆ ಸಮಿತಿ ತಿಂಗಳಿಗೆ, ಎರಡು ತಿಂಗಳಿಗೆ ಒಮ್ಮೆ ಸಭೆ ಸೇರುತ್ತಿದ್ದರೂ, ಅವು ದಿನವಿಡೀ ಅತ್ಯಂತ ಅರ್ಥಪೂರ್ಣವಾಗಿ, ಘನತೆ ಗಾಂಭೀರ್ಯಗಳಿಂದ ನಡೆಯುತ್ತಿದ್ದವು. ಸದಸ್ಯರೂ, ಅಧಿಕಾರಿಗಳೂ ಸಮಿತಿ ಸಭೆಗಳಲ್ಲಿ ಚರ್ಚಿತವಾಗುವ ವಿಷಯಗಳ ಬಗ್ಗೆ ಸಂಪೂರ್ಣ ರೀತಿಯಲ್ಲಿ ತಯಾರಾಗಿ ಬಂದು, ಸಮಿತಿ ಮುಂದೆ ತಮ್ಮ ವಿಚಾರ ಮಂಡಿಸುತ್ತಿದ್ದರು. ಸಮಿತಿಯ ಮುಂದಿರುವ ಅತ್ಯಂತ ಗಹನವಾದ ಗುರುತರವಾದ ವಿಷಯಗಳಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ಪರಿಹಾರ ಸೂಚಿಸುತ್ತಿದ್ದರು. ಅವು ಅನುಷ್ಠಾನವಾಗುವಂತೆ ಮಾಡುತ್ತಿದ್ದರು. ಆದರೆ ಈಗ ಪ್ರತಿ ವಾರವೂ ಸಮಿತಿಗಳ ಸಭೆಗಳು ನಡೆದರೂ ಅವು ಹಿಂದಿನಷ್ಟು ಪರಿಣಾಮಕಾರಿಯಾಗಿಲ್ಲವೆಂದು ಹೇಳಬೇಕಾಗಿದೆ. ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳು ಪೂರ್ವಭಾವಿಯಾಗಿ ವಿಷಯಗಳನ್ನು ಪರಿಶೀಲಿಸಿಕೊಂಡು, ಸಂಬಂಧಪಟ್ಟ ಅಧೀನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪೂರ್ವ ತಯಾರಿಯೊಂದಿಗೆ ಸಭೆಗೆ ಹಾಜರಾಗದೆ ಇರುವುದರಿಂದ ಸಮಿತಿ ಸಭೆಗಳು ಅಷ್ಟೊಂದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಈ ಕಾರಣಕ್ಕಾಗಿ ಕೆಲವೊಮ್ಮೆ ಸಭೆಗಳನ್ನು ಮುಂದೂಡಿರುವ ಪ್ರಸಂಗಳೂ ಉಂಟು. ಸಮಿತಿ ಸದಸ್ಯರಾದ ಶಾಸಕರು ಸಹ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗುವ ವಿಷಯಗಳ ಬಗ್ಗೆ ಮೊದಲೇ ಅಧ್ಯಯನ ಮಾಡಿಕೊಂಡು ಬಂದು ಸಕ್ರಿಯವಾಗಿ ಪಾಲ್ಗೊಳ್ಳುವುದರ ಬಗ್ಗೆ ಗಮನಹರಿಸುತ್ತಿಲ್ಲ. ಸಮಿತಿ ಸಭೆಗಳ ನೋಟ್ಸ್ಗಳನ್ನು ಮುಂಚಿತವಾಗಿ ಸದಸ್ಯರಿಗೆ ಕಳುಹಿಸಿದ್ದರೂ, ಅದರ ಬಗ್ಗೆ ಗಮನಹರಿಸದೇ, ಪ್ರತಿ ಸಭೆಯಲ್ಲೂ ಸಭೆಗೆ ಬಂದಾಗ ಆ ನೋಟ್ಸ್ ಅನ್ನು ಮತ್ತೆ ಕೇಳುವುದು, ಅಲ್ಲೇ ಅದರ ಬಗ್ಗೆ ಕಣ್ಣಾಡಿಸುವುದು ಮಾಡುತ್ತಾರೆ. ವಿಷಯದ ಗಂಭೀರತೆಯನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯಾಂಗ ಮತ್ತು ಶಾಸಕಾಂಗವು ಪರಸ್ಪರ ಸಹಕಾರ ಮತ್ತು ಗೌರವಗಳೊಂದಿಗೆ ಕಾರ್ಯ ನಿರ್ವಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಸದನದ ಕಾರ್ಯಕಲಾಪಗಳು ಹಾಗೂ ಸಮಿತಿಯ ಕಾರ್ಯ ಕಲಾಪಗಳಲ್ಲಿ ಸದಸ್ಯರ ಹಾಜರಾತಿಯು ಪೂರ್ಣ ಪ್ರಮಾಣದಲ್ಲಿರಬೇಕು. ಸರಕಾರದ ಅಧಿಕಾರಿಗಳ ಜೊತೆಯಲ್ಲಿ ಸಮಿತಿಯಲ್ಲಿ ಪ್ರಸ್ತಾಪವಾಗುವ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿಗಳೊಂದಿಗೆ ಭಾಗವಹಿಸಬೇಕು, ಸಮಾಧಾನವಾಗಿ ವಿಷಯಗಳನ್ನು ಆಲಿಸಬೇಕು. ಈ ನಿಟ್ಟಿನಲ್ಲಿ ವಿಧಾನ ಮಂಡಲಗಳ ಸಮಿತಿಗಳು ನಡೆಯುವುದು ಅವಶ್ಯವಿರುವುದರಿಂದ ಈ ಕೆಳಗಿನ ಸಲಹೆಗಳ ಬಗ್ಗೆ ಪರಿಶೀಲಿಸುವಂತೆ ಕೋರುತ್ತೇನೆ. ಅ) ಇತ್ತೀಚೆಗೆ ಹೊಸದಾಗಿ ಅನೇಕ ಸದಸ್ಯರು ಶಾಸನಸಭೆಗಳಿಗೆ ಆಯ್ಕೆಯಾಗಿ ಬಂದು, ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಸುತ್ತಿರುವುದರಿಂದ ಈ ಬಗ್ಗೆ ತಾವು ದಯಮಾಡಿ ಗಮನಹರಿಸಿ, ವಿಷಯ ತಜ್ಞರು, ಸಂಸದೀಯ ತಜ್ಞರಿಂದ ಸಮಿತಿಗಳು ಹಾಗೂ ಅವುಗಳ ಮಹತ್ವದ ಬಗ್ಗೆ ಸದಸ್ಯರಿಗೆ ತರಬೇತಿ, ವಿಚಾರ ಸಂಕಿರಣಗಳನ್ನು ಏರ್ಪಡಿಸಬೇಕು. ಇದರಿಂದ ಸದಸ್ಯರಿಗೆ ಸಮಿತಿ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಬರಲು ಸಾಧ್ಯ. ಆ) ವಿಧಾನ ಮಂಡಲದ ಸಮಿತಿಗಳ ಸಭೆಗಳು ನಡೆದ ನಂತರ ಮಾಧ್ಯಮದವರನ್ನು ಆಹ್ವಾನಿಸಿ, ಅಂದಿನ ಸಮಿತಿ ಸಭೆಯಲ್ಲಿ ಚರ್ಚಿಸಿದ ವಿಷಯಗಳು ಅದಕ್ಕೆ ಸರಕಾರದ ಅಧಿಕಾರಿಗಳು ನೀಡಿದ ಉತ್ತರ, ಆ ಬಗ್ಗೆ ಸಮಿತಿ ಕೈಗೊಂಡ ಕ್ರಮ ಮೊದಲಾದ ಪ್ರಮುಖ ಅಂಶಗಳ ಬಗ್ಗೆ ವಿವರಿಸುವ ಒಂದು ವ್ಯವಸ್ಥೆ ಕಲ್ಪಿಸಿದರೆ, ಸಮಿತಿ ಸಭೆಗಳು ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಾಗಬಹುದು. ಇ) ವಿಧಾನ ಮಂಡಲದ ಸಮಿತಿಗಳು ನೀಡುವ ವರದಿಗಳ ಮೇಲೆ ಸರಕಾರ ಕೈಗೊಂಡ ಕ್ರಮಗಳ ವರದಿಗಳನ್ನು ಸಮಿತಿ ಮುಂದೆ ಮತ್ತು ವಿಧಾನ ಮಂಡಲದ ಮುಂದೆ ಮಂಡಿಸುವ ವ್ಯವಸ್ಥೆಯಾಗಿ, ಅವುಗಳ ಕುರಿತು ವಿಧಾನ ಮಂಡಲದಲ್ಲಿ ಕಡ್ಡಾಯವಾಗಿ ಚರ್ಚಿಸಲು ಅನುವು ಮಾಡಿಕೊಡುವುದು. ಇದರಿಂದ ಸಮಿತಿಗಳಿಗೆ ಒಂದು ವಿಶೇಷ ಮಹತ್ವ ಬರುತ್ತದೆ. ವಿಧಾನ ಮಂಡಲದ ಸಮಿತಿಗಳು ಮಿನಿ ಲೆಜಿಸ್ಲೇಚರ್ಗಳಂತೆ ಅಥವಾ ವಿಧಾನ ಮಂಡಲದ ಕಾವಲು ಸಮಿತಿಗಳಂತೆ ಕೆಲಸ ಮಾಡುತ್ತವೆ ಎಂಬ ಅಂಶ ಅಧಿಕಾರಿಗಳಿಂದ ಹಿಡಿದು ಎಲ್ಲರ ಗಮನಕ್ಕೆ ಬರಲು ಸಹಕಾರಿಯಾಗುತ್ತದೆ. ಈ) ಸಮಿತಿ ಶಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೂ ಕೂಡಾ ಈ ಬಗ್ಗೆ ತಜ್ಞರಿಂದ ತರಬೇತಿಯ ಅವಶ್ಯಕತೆ ಇರುತ್ತದೆ. ಅವರನ್ನು ಪದೇ ಪದೇ ಬದಲಾಯಿಸದೇ ಕನಿಷ್ಠ ಪಕ್ಷ ಐದು ವರ್ಷಗಳ ಕಾಲ ಒಂದೇ ಸಮಿತಿಯಲ್ಲಿ ಸೇವೆ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಸಮಿತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ, ಅವರು ಕಾರ್ಯನಿರ್ವಸುವ ಸಮಿತಿಯ ಕಾರ್ಯವಿಧಾನ ನಡವಳಿಕೆ, ಸಮಿತಿ ವ್ಯಾಪ್ತಿಯಲ್ಲಿ ಬರುವ ವಿಷಯಗಳು ಇವುಗಳ ಬಗ್ಗೆ ತರಬೇತಿಯನ್ನು ಪ್ರತಿ ವರ್ಷ ನಡೆಸುವುದು ಸೂಕ್ತವಾಗುತ್ತದೆ. ಉ) ವಿಧಾನ ಮಂಡಲದ ಸಮಿತಿಗಳ ಸಭೆಯಲ್ಲಿ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸುವುದು. ಊ) ಶಾಸಕರು ತಪ್ಪದೆ ಸಭೆಗಳಿಗೆ ಹಾಜರಾಗಿ ಸಭೆ ಮುಗಿಯುವರೆಗೆ ಹಾಜರಿರುವಂತೆ ನೋಡಿಕೊಳ್ಳುವುದು. ಋು) ವಿಧಾನ ಮಂಡಲದ ಸ್ಥಾಯಿ ಸಮಿತಿಗಳಿಂದ ಬರೆದ ಪತ್ರಗಳನ್ನು ಸರಕಾರ ಹಾಗೂ ಇಲಾಖೆ ಗಂಭೀರವಾಗಿ ಪರಿಗಣಿಸಿ, ಅವುಗಳಲ್ಲಿನ ಸೂಚನೆಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸುವುದು. ಸಮಿತಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಚಿವಾಲಯಗಳಲ್ಲಿ ಏಕಗವಾಕ್ಷಿಮಾದರಿಯ ಒಂದು ಪ್ರತ್ಯೇಕ ವಿಭಾಗ ಅಥವಾ ಕೋಶ ರಚಿಸುವುದು. ಎ) ವಿಧಾನ ಮಂಡಲದ ಸಮಿತಿಗಳ ನಿರ್ಣಯ ಹಾಗೂ ಸೂಚನೆಗಳನ್ನು ಅನುಷ್ಠಾನಗೊಳಿಸಿದ ಬಗ್ಗೆ ಸಮಿತಿಗಳ ವರದಿಗಳಲ್ಲಿ ಮಾಡಿರುವ ಶಿಫಾರಸುಗಳ ಬಗ್ಗೆ ಸಭಾಧ್ಯಕ್ಷರು ಮತ್ತು ಸಭಾಪತಿಗಳ ಅಧ್ಯಕ್ಷತೆಯಲ್ಲಿ ಪರಾಮರ್ಶನಾ ಸಮಿತಿ ರಚಿಸಿ ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲನೆ ನಡೆಸುವುದು, ಈ ಪರಿಶೀಲನಾ ಸಭೆಯ ನಡವಳಿಕೆಗಳ ಬಗ್ಗೆ ಮಿನಿಟ್ಸ್ ತಯಾರಿಸಿ ಸಂಬಂಧಪಟ್ಟ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು/ಆಯುಕ್ತರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸುವುದು. ನನ್ನ ಪತ್ರದ ಹಿಂದಿರುವ ಭಾವನೆಗಳನ್ನು ತಾವು ತೆರೆದ ಮನಸ್ಸಿನಿಂದ ಪರಿಶೀಲಿಸಲು ಕೋರಿಕೆ. ಒಟ್ಟಾರೆ ವಿಧಾನ ಮಂಡಲದ ಸಮಿತಿಗಳ ಸಭೆಗಳು ಅರ್ಥಪೂರ್ಣವಾಗಿ ನಡೆದು ನಾಡಿನ ಜನತೆಗೆ ಒಳ್ಳೆಯದಾಗಲೆಂಬುದೇ ನನ್ನ ಉದ್ದೇಶ.
ರೇಸರ್ ಅಶ್ವಿನ್ ಸಾವು: ವೀಡಿಯೋ ಮಾಡಿದವನ ವಿರುದ್ಧ ನೆಟ್ಟಿಗರ ಕಿಡಿ
ಮಾಜಿ ರಾಷ್ಟ್ರೀಯ ರೇಸ್ ಚಾಂಪಿಯನ್ ಅಶ್ವಿನ್ ಸುಂದರ್ ಮತ್ತು ಪತ್ನಿ ನಿವೇದಿತಾ ಚೆನ್ನೈನಲ್ಲಿ ಬಿಎಂಡಬ್ಲ್ಯು ಕಾರು ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದ ಬಳಿಕ ಬೆಂಕಿ ಹತ್ತಿಕೊಂಡಿತು. ಮರ ಮತ್ತು ಕಂಪೌಂಡ್ ಗೋಡೆ ನಡುವೆ ಸಿಲುಕಿದ್ದ ಕಾರಿನ ಬಾಗಿಲು ತೆಗೆಯಲು ಸಾಧ್ಯವಾಗದೆ ಕಾರಿನೊಳಗೆ ಅವರಿಬ್ಬರೂ ಸಜೀವ ದಹನಗೊಂಡಿದ್ದರು.
ಆದರೆ ಈ ದುರ್ಘಟನೆಯನ್ನು ಸಾಡ್ಡಿ ಸೇನಾ ಎಂಬ ಯುವಕ ಫೇಸ್ಬುಕ್ನಲ್ಲಿ ಲೈವ್ ಸೆರೆ ಹಿಡಿದಿದ್ದಾನೆ. ಕಾರು ಹೊತ್ತಿ ಉರಿಯುವ ದೃಶ್ಯವನ್ನು ಫೇಸ್ಬುಕ್ನಲ್ಲೇ ಲೈವ್ ಸ್ಟ್ರೀಮ್ ಮಾಡಿದ್ದಾನೆ. ಆದರೆ ವಿರ್ಯಾಸವೆಂದರೆ ಈ ಕಾರಿನಲ್ಲಿರುವುದು ರೇಸರ್ ಅಶ್ವಿನ್ ಹಾಗೂ ಅವರ ಪತ್ನಿ ನಿವೇದಿತಾ ಎಂಬು ಮಾತ್ರ ಗೊತ್ತಿರಲಿಲ್ಲ.
ಕೇವಲ ಲೈವ್ ಸ್ಟ್ರೀಮ್ನಲ್ಲೇ 99 ಸಾವಿರ ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಈ ವಿಡಿಯೋ ಕುರಿತು ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿದ್ದು. ಕೆಲವರು ಸೀನಾಗೆ ಮಾನವೀಯತೆ ಮರೆತಿದೆಯೇ ಎಂದು ಪ್ರಶ್ನಿಸಿದ್ದಾರೆ. 'ಇಂತಹ ಸನ್ನಿವೇಶದ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಡಿಯೋ ಮಾಡುವುದು ಈ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ, ಇದೊಂದು ಅತ್ಯಂತ ಕೀಳು ಮಟ್ಟದ ಬೆಳವಣಿಗೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ಈ ಕುರಿತು ವೀಡಿಯೋದಲ್ಲಿ ಕಾಮೆಂಟರಿ ನೀಡಿದ್ದ ಸೀನಾ, 'ನಾನು ಮತ್ತು ನನ್ನ ಸ್ನೇಹಿತ ಮರಿನಾ ಬೀಚ್ಗೆ ತೆರಳುತ್ತಿದ್ದ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದೇವೆ. ಆದರೆ ಬೆಂಕಿಯ ತೀವ್ರತೆಗೆ ಅದರ ಹತ್ತಿರ ಸುಳಿಯಲು ಸಾಧ್ಯವಾಗುತ್ತಿಲ್ಲ' ಎಂದಿದ್ದಾನೆ.
ಸೀನಾನ ನಡೆಯನ್ನು ಸಮರ್ಥಿಸಿಕೊಂಡಿರುವ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು, ಅಷ್ಟು ತೀವ್ರತೆಯ ನಡುವೆ ದಂಪತಿಗಳನ್ನು ಬದುಕಿಸಲು ಪ್ರಯತ್ನಿಸುವುದು ಸಾಧ್ಯವಾಗದ ಮಾತು. ಆದರೆ ಲೈವ್ ಸ್ಟ್ರೀಮ್ ಮಾಡಬಾರದಿತ್ತು ಎಂದು ಅಭಿಪ್ರಾಯ ಪಟ್ಟದ್ದಾರೆ.
ಎಂಆರ್ಸಿ ನಗರದ ಸಾಂತೋಮ್ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. 4 ಕಿಮೀ ದೂರದ ಮೈಲಾಪುರದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಸುಮಾರು ಅರ್ಧಗಂಟೆ ಕಾಲ ಶ್ರಮಿಸಿದರು. ಆದರೆ ಅಷ್ಟರಲ್ಲಾಗಲೇ ಸುಂದರ್ ದಂಪತಿ ಕಾರಿನೊಳಗೆ ಸಜೀವ ದಹನಗೊಂಡಿದ್ದರು.
ಬಂದಿದೆ ಗಾರ್ಬೇಜ್ ಎಟಿಎಂ: ಕಸ ಹಾಕಿ, ಹಣ ಪಡೆಯಿರಿ
ಈ ಯುವಕರ ತಂಡ ಕೆಆರ್ಆರ್ವೈಪಿ ಗಾರ್ಬೇಜ್ ಎಟಿಎಂ ಹೆಸರಿನ ಸ್ಮಾರ್ಟ್ ಸ್ವಯಂಚಾಲಿತ ಕಸದ ತೊಟ್ಟಿಯನ್ನು ನಿರ್ಮಿಸಿದೆ. ಈ ಪರಿಕಲ್ಪನೆ ಎರಡು ಕಸದ ತೊಟ್ಟಿ ಹಾಗೂ ಒಂದು ಎಲ್ಸಿಡಿ ಸ್ಕ್ರೀನ್ ಒಳಗೊಂಡಿದೆ. ಕಸದ ತೊಟ್ಟಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಬಳಕೆದಾರರಿಗೆ 'ಸ್ವೈಪ್' ಕಾರ್ಡ್ ಸಹ ನೀಡಲಾಗುತ್ತದೆ. ತ್ಯಾಜ್ಯ ವಿಲೇವಾರಿ ಮಾಡಲು ಕಾರ್ಡ್ ಸ್ವೈಪ್ ಮಾಡುವ ಬಳಕೆದಾರರನ್ನು ಎಲ್ಸಿಡಿ ಸ್ವಯಂಚಾಲಿತವಾಗಿ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಕೇಳುತ್ತದೆ. ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಬಳಕೆದಾರರಿಗೆ ಕೂಪನ್ ಅಥವಾ ನಗದು ಹಣವನ್ನು ಸಂದಾಯ ಮಾಡುವ ಪರಿಕಲ್ಪನೆ ಇದಾಗಿದೆ.
ಈ ಪರಿಕಲ್ಪನೆ ಪ್ರಾಯೋಗಿಕ ಹಂತದಲ್ಲಿದೆ. ಈ ಪರಿಕಲ್ಪನೆಯನ್ನು ಸಾರ್ವಜನಿಕ ಬಳಕೆ ತರಲು ಸಾಕಷ್ಟು ಜನ ಕಾಯುತ್ತಿದ್ದಾರೆ. ಈ ಉತ್ಪನ್ನವನ್ನು ಜಾರಿಗೊಳಿಸಲು ಪ್ರಾಯೋಜಕರನ್ನು ಹುಡುಕುತ್ತಿದ್ದೇವೆ' ಎಂದು ಕೆಆರ್ಆರ್ವೈಪಿ ಗಾರ್ಬೇಜ್ ಎಟಿಎಂ ಸಿದ್ದಪಡಿಸಿರುವ ಯುವಕರ ತಂಡ ಹೇಳಿಕೊಂಡಿದೆ.
ಇತ್ತೀಚೆಗೆ ಈ ಯುವಕರು ಡಿಪ್ಲೋಮಾದಲ್ಲಿ ವಿದ್ಯುತ್ಜಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಈ ಪರಿಕಲ್ಪನೆಯನ್ನು ದೊಡ್ಡ ಪ್ರಮಾಣದಲ್ಲಿ ಜಾರಿಗೊಳಿಸುವ ಕನಸು ಇವರದ್ದಾಗಿದೆ.
ಹುಲಿ ಸಾವಿಗೆ ಅರಿವಳಿಕೆ ಓವರ್ಡೋಸ್ ಕಾರಣ?
ಟೆರಾಯ್ ಪಶ್ಚಿಮ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಪರಾಗ್ ಮಧುಕರ್ ಧಕಾಟೆ ಈ ಕುರಿತ ವದಂತಿಗಳನ್ನುನಿರಾಕರಿಸಿದರು. 'ಹುಲಿಯ ಮರಣೋತ್ತರ ಪರೀಕ್ಷೆಯಲ್ಲಿ ಜೆಸಿಬಿಯಿಂದ ಆಳವಾದ ಗಾಯವಾಗಿರುವುದು ಪತ್ತೆಯಾಗಿಲ್ಲ. ಅದನ್ನು ಸೆರೆಹಿಡಿಯುವಾಗ ನೀಡಲಾದ ಅರಿವಳಿಕೆ ಮದ್ದು ಮಿತಿಮೀರಿದ ಪರಿಣಾಮ ಮೃತಪಟ್ಟಿರಬಹುದು. ಮೈಮೇಲಿನ ಗಾಯವು ಹುಲಿಗಳ ನಡುವಣ ಕಾದಾಟದ ಪರಿಣಾಮವಿರಬಹುದು. ಹುಲಿಯ ಸಾವಿನ ನಿಖರ ಕಾರಣ ತಿಳಿಯಲು ನಾವು ಈಗಾಗಲೇ ಆಂತರಿಕ ತನಿಖೆ ನಡೆಸುತ್ತಿದ್ದೇವೆ' ಎಂದು ತಿಳಿಸಿದರು.
ಹುಲಿಯನ್ನು ಸೆರೆಹಿಡಿಯುವ ವೇಳೆ ಕೆಲವು ಕಾರ್ಯಕರ್ತರು ವೀಡಿಯೋ ಚಿತ್ರೀಕರಣ ಮಾಡಿದ್ದು, ಸೆರೆ ಹಿಡಿಯುವಾಗ ಆದ ಗಾಯಗಳಿಂದ ಹಾಗೂ ಮಿತಿಮೀರಿದ ಅರಿವಳಿಕೆ ಚುಚ್ಚುಮದ್ದಿನಿಂದಾಗಿ ಹುಲಿ ಸತ್ತಿದೆ ಎಂದು ಆರೋಪಿಸಿದ್ದರು.
'ಹುಲಿಯನ್ನು ದೈತ್ಯ ಜೆಸಿಬಿ ಯಂತ್ರ ಬಳಸಿ ಸೆರೆಹಿಡಿಯಲಾಗಿತ್ತು. ಆಗ ಅದಕ್ಕೆ ಗಾಯವಾಗಿರಬಹುದು. ಅಲ್ಲದೆ ಹಲವು ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಅಲ್ಲದೆ 15ಕ್ಕೂ ಹೆಚ್ಚು ದಿನಗಳಿಂದ ಉಪವಾಸವಿರದಿದ್ದರೆ, ಹುಲಿ ಸೆರೆಹಿಡಿದ ಕೂಡಲೇ ಸಾಯುವುದಿಲ್ಲ' ಎಂದು ವನ್ಜಜೀವಿ ಕಾರ್ಯಕರ್ತರೊಬ್ಬರು ಹೇಳಿದರು.
Tiger dies in Nainital zoo, activists say anaesthesia overdose could have led to its death
NAINITAL: A day after the death of the tiger, which killed two people in Ramnagar's Bailpadav forest range, it is being suspected that the big cat may have died due to overdose of anaesthesia and injuries that it sustained while being captured.
ಫೀಸ್ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಕೂಡಿಹಾಕಿದ ಶಾಲೆ
ಹಯಾತ್ನಗರದ ಸರಿತಾ ವಿದ್ಯಾ ನಿಕೇತನ್ ಎಂಬ ಶಾಲೆಯಲ್ಲಿ ಕಲಿಯುತ್ತಿರುವ 19 ಮಂದಿ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕ ಪಾವತಿಸದ ಹಿನ್ನಲೆಯಲ್ಲಿ ಶಾಲೆಯ ಕೋಣೆಯಲ್ಲಿ ಕೂಡಿಹಾಕಿ ಶುಲ್ಕ ಪಾವತಿಸುವ ವರೆಗೂ ಮನೆಗೆ ಬಿಡುವುದಿಲ್ಲ ಎಂದು ತಾಕೀತು ಮಾಡಿದ್ದಾರೆ.
'ನನ್ನ ಮಗಳು ಶಾಲೆಗೆ ಶುಲ್ಕ ಪಾವತಿಸಲು ಬಂದಿದ್ದ ವ್ಯಕ್ತಿಯೊಬ್ಬರ ಮೊಬೈಲ್ ತೆಗೆದುಕೊಂಡು ನನಗೆ ಕರೆ ಮಾಡಿದ್ದಾಳೆ. ಶುಲ್ಕ ಪಾವತಿಸದ ಮಕ್ಕಳನ್ನು ಕೂಡಿ ಹಾಕಿರುವುದಾಗಿ ಆಕೆ ನನಗೆ ತಿಳಿಸಿದಳು. ನಾನು ಶಾಲೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲು ಪ್ರಯತ್ನಿಸಿದರೂ ಅವರು ಅದಕ್ಕೆ ಸಮ್ಮತಿಸಲಿಲ್ಲ. ನಮ್ಮ ಮಕ್ಕಳ ಮೇಲೆ ಮಾನವೀಯತೆ ಮರೆತು ದೌರ್ಜನ್ಯ ಎಸಗಿದ್ದಾರೆ' ಎಂದು ಪೋಷಕರು ದೂರಿದ್ದಾರೆ.
'ಶಾಲಾ ಶುಲ್ಕ ಕಟ್ಟಿಲ್ಲವೆಂಬದು ನಮಗೂ ತಿಳಿದಿದೆ. ನಾವು ಕಟ್ಟುವುದಾಗಿ ಒಪ್ಪಿದ್ದೇವೆ. ಈ ಕುರಿತು ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದೇವೆ. ಆದರೂ ಅವರು ನಮ್ಮ ಮಕ್ಕಳನ್ನು ಬಂಧಿಸಿ, ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ನಮ್ಮ ಮಕ್ಕಳೂ ಸೇರಿದಂತೆ 5 ರಿಂದ 14 ವರ್ಷದೊಳಗಿನ ಮಕ್ಕಳನ್ನು ಕೂಡಿ ಹಾಕಿದ್ದಾರೆ. ಈ ಕುರಿತು ನಾವು ಪೊಲೀಸ್, ಮಕ್ಕಳ ಹಕ್ಕು ಹೋರಾಟಗಾರರು ಸೇರಿದಂತೆ ಎಲ್ಲರಿಗೂ ಮಾಹಿತಿ ರವಾನಿಸಿದ್ದೇವೆ' ಎಂದು ತಂದೆಯೊಬ್ಬರು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪೋಷಕರು ನೀಡಿದ ದೂರಿನ ಮೇಲೆ ನಾವು ಶಾಲೆಗೆ ಭೇಟಿ ನೀಡಿದ್ದ ವೇಳೆ, ಹಲವಾರು ಮಕ್ಕಳನ್ನು ಶಾಲಾ ಸಿಬ್ಬಂದಿ ಬಂಧನದಲ್ಲಿಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರನ್ನು ಬಿಡಲು ಕೇಳಿಕೊಂಡರೂ ಶಾಲಾ ಆಢಳಿತ ವರ್ಗ ಶುಲ್ಕ ಪಾವತಿಸಿದ ಬಳಿಕವಷ್ಟೇ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಹಯಾತ್ನಗರ ಪೊಲೀಸ್ ಇನ್ಸ್ಪೆಕ್ಟರ್ ಜೆ ನರೇಂದರ್ ಗೌಡ್.
ಬಿಹಾರದ ಹಳ್ಳಿಯಲ್ಲಿ ಐಸಿಸ್ ಪೋಸ್ಟರ್ ಪತ್ತೆ
ಇಂಗ್ಲಿಷ್ನಲ್ಲಿ ಬರೆಯಲಾದ ಈ ಪೋಸ್ಟರ್ಗಳನ್ನು ವಿದ್ಯುತ್ ಕಂಬಗಳಿಗೆ ಅಂಟಿಸಿದ್ದು, ಬಿಹಾರವೂ ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲಿ ಐಸಿಸ್ ಅಸ್ತಿತ್ವವಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪೋಸ್ಟರ್ಗಳಲ್ಲಿ ಐಸಿಸ್ನ ಲಾಂಛನ ಹಾಗೂ ಫೋಟೋಗಳೂ ಇವೆ. ಅವುಗಳ ಸಾಚಾತನ ಪರೀಕ್ಷಿಸಲು ಪೊಲೀಸರು ಹಾಗೂ ಗುಪ್ತಚರ ಸಿಬ್ಬಂದಿ ಆ ಹಳ್ಳಿಗೆ ಧಾವಿಸಿದ್ದಾರೆ.
ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಪೋಸ್ಟರ್ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ನೌಹಟ್ಟಾ ಠಾಣಾಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.
'ಪೋಸ್ಟರ್ಗಳನ್ನು ದೂರದ ಹಳ್ಳಿಯಲ್ಲಿ ಅಂಟಿಸಲಾಗಿದೆ. ಹೋಳಿ ಹಬ್ಬದ ಸಂದರ್ಭ ಯಾರಾದರೂ ಅಪರಿಚಿತರು ಹಳ್ಳಿಗೆ ಆಗಮಿಸಿದ್ದರೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಈ ಬಗ್ಗೆ ಗ್ರಾಮಸ್ಥರನ್ನು ಪ್ರಶ್ನಿಸಲಾಗುತ್ತಿದೆ. ಅಪರಿಚಿತ ವ್ಯಕ್ತಿಯ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಈ ಪೋಸ್ಟರ್ಗಳನ್ನು ಮುದ್ರಿಸಲು ಮನೆಬಳಕೆಯ ಕಂಪ್ಯೂಟರ್ ಪ್ರಿಂಟರ್ ಬಳಸಲಾಗಿದೆ' ಎಂದು ರೋಹ್ಟಾಸ್ ಎಸ್ಪಿ ಎಂಎಸ್ ಧಿಲ್ಲೋನ್ ಹೇಳಿದ್ದಾರೆ.
ಪೋಸ್ಟರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜನರಲ್ಲಿ ಗೊಂದಲ ಮೂಡಿಸಲು ಸಮಾಜದ್ರೋಹಿ ಶಕ್ತಿಗಳು ಈ ಕೆಲಸ ಮಾಡಿರಬಹುದು ಎಂದು ದೆಹ್ರಿಯ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಅನ್ವರ್ ಜಾವೇದ್ ಅನ್ಸಾರಿ ಹೇಳಿದ್ದಾರೆ.
Three ISIS posters found in Rohtas village in Bihar
PATNA: Three posters carrying the name of ISIS and asking youths in Bihar to join the terror organisation were found pasted on electric poles at Maoist-infested Sikrauli Bihga village under Nauhatta police station in Rohtas district, around 150km from here, on Saturday.
ಇಬ್ಬರು ಡಿಸಿಎಂಗಳನ್ನು ಕೇಳಿದ್ದ ಯೋಗಿ
ಉತ್ತರ ಪ್ರದೇಶ ಅತ್ಯಂತ ದೊಡ್ಡ ರಾಜ್ಯವಾಗಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಉಪ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಂತೆ ಸ್ವತಃ ಆದಿತ್ಯನಾಥ್ ಕೇಳಿರುವುದಾಗಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಶನಿವಾರದಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕೇಶವ್ ಪ್ರಸಾದ್ ಮೌರ್ಯ ಹಾಗೂ ದಿನೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿತ್ತು. ಉತ್ತರ ಪ್ರದೇಶದ ಪ್ರಗತಿಗೆ ಈ ಮೂವರು ವ್ಯಕ್ತಿಗಳು ಒಟ್ಟಾಗಿರಬೇಕು' ಎಂದು ನಾಯ್ಡು ಹೇಳಿದರು.
ಇನ್ನು ಆದಿತ್ಯನಾಥ್ ಕುರಿತು ಅವರ ಕುಟುಂಬಸ್ಥರು ಸಂತಸ ವ್ಯಕ್ತ ಪಡಿಸಿದ್ದು, 'ಆದಿತ್ಯನಾಥ್ಗೆ ಎಳೆಯ ವಯಸ್ಸಿನಲ್ಲೇ ಜನರ ಪರ ಕೆಲಸದಲ್ಲಿ ತೊಡಗಬೇಕು ಎಂಬ ಆಸೆಯಿತ್ತು. ಈಗ ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ. ಆತನ ಸಾಧನೆಗೆ ನಮಗೆ ಹೆಮ್ಮೆ ಎನಿಸುತ್ತದೆ' ಎಂದು ಆದಿತ್ಯನಾಥ್ ತಂದೆ ಹೇಳಿಕೊಂಡಿದ್ದಾರೆ.
ಕರ್ನಾಟಕದಲ್ಲೂ ಇಬ್ಬರು ಡಿಸಿಎಂಗಳಿದ್ರು:
ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಅಂದಿನ ಬಿಜೆಪಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಹಾಗೂ ಆರ್ ಅಶೋಕ್ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು.
ಯೋಗಿ ಆಯ್ಕೆಯಲ್ಲಿ ಪಾತ್ರವಿಲ್ಲ: ಆರೆಸ್ಸೆಸ್
ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಆದಿತ್ಯನಾಥ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಸಂಘಪರಿವಾರ ಶಿಫಾರಸು ಮಾಡಿದೆಯೇ ಎಂಬ ಪ್ರಶ್ನೆಗೆ, ಆರೆಸ್ಸೆಸ್ ಸಹಕಾರ್ಯವಾಹ ಭಾಗಯ್ಯ ಅದೊಂದು ರಾಜಕೀಯ ನಿರ್ಧಾರ ಎಂದು ಉತ್ತರಿಸಿದರು.
ಉತ್ತರಾಖಂಡ ಮುಖ್ಯಮಂತ್ರಿ ಹುದ್ದೆಗೇರಿದ ತ್ರಿವೇಂದ್ರ ಸಿಂಗ್ ರಾವತ್ ಕೂಡ ಆರೆಸ್ಸೆಸ್ ಕಾರ್ಯಕರ್ತರಲ್ಲವೆ ಎಂಬ ಪ್ರಶ್ನೆಗೆ, ಪ್ರಧಾನಿ ನರೇಂದ್ರ ಮೋದಿ ಕೂಡ ಸಂಘದ ಕಾರ್ಯಕರ್ತರು ಎಂದು ಅವರು ಉತ್ತರಿಸಿದರು.
ಮುಖ್ಯಮಂತ್ರಿಗಳ ಆಯ್ಕೆ ವಿಚಾರದಲ್ಲಿ ಆರೆಸ್ಸೆಸ್ ಯಾವುದೇ ಒತ್ತಡ ಹೇರುವುದಿಲ್ಲ ಎಂದು ಭಾಗಯ್ಯ ನುಡಿದರು.
ಅರ್ಚಕರಾಗಿದ್ದುಕೊಂಡು ರಾಜಕೀಯ ಸೇರಿದ ಕಡು ಹಿಂದುತ್ವವಾದಿ ಯೋಗಿ ಆದಿತ್ಯನಾಥ ಅವರನ್ನು ಉ.ಪ್ರ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಆಯ್ಕೆ ಮಾಡಿರುವುದು ಹಲವರ ಹುಬ್ಬೇರಿಸಿದೆ.
ಸಿಎಂ ರೇಸ್ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಕೇಶವ ಪ್ರಸಾದ್ ಮೌರ್ಯ, ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದ್ದರೂ ದಿಢೀರನೆ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡುವಲ್ಲಿ ಆರೆಸ್ಸೆಸ್ ಪಾತ್ರವೇ ಪ್ರಮುಖ ಎಂಬ ವದಂತಿಗಳು ಹರಡಿದ್ದವು.
After Yogi Adityanath elevation, RSS says it has no say in selection
COIMBATORE: Amid speculation that the Sangh pushed for Yogi Adityanath's candidature as UP CM, the RSS on Sunday said it was a political decision and it had no say in the selection of chief ministers in BJP-ruled states.