ಕಾರವಾರ: ತಾಲೂಕಿನ ಮುಡಗೇರಿ ವ್ಯಾಪ್ತಿಯ ಅಂಗಡಿ ಗ್ರಾಮದಲ್ಲಿ ಬಡ ಕುಟುಂಬದ ಎರಡು ಮನೆಗಳು ಸರಕಾರದ ಸಹಾಯಧನದೊಂದಿಗೆ ನಿರ್ಮಾಣವಾಗುತ್ತಿವೆ. ಇದರಲ್ಲೇನು ವಿಶೇಷ ಎಂದಿರಾ ? ಈ ಮನೆಗಳನ್ನು ನಿರ್ಮಿಸುತ್ತಿರುವ ಕಾರ್ಮಿಕರು ಅಮೇರಿಕಾದವರು ! ಇಲ್ಲಿ ಮೈ ಕೈ ಮಣ್ಣು ಮಾಡಿಕೊಂಡು ಅಕ್ಷರಶಃ ಕೂಲಿ ಕಾರ್ಮಿಕರಂತೆ ದುಡಿಯುತ್ತಿರುವ ಈ ವಿದೇಶಿಗರು ಅಲ್ಲಿ ಅತ್ಯಂತ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು. ಆದರೆ ಸಮಾಜ ಸೇವೆಯ ತುಡಿತ ಇವರನ್ನು ಭಾರತದ ಮುಡಗೇರಿಯಂತಹ ಗ್ರಾಮೀಣ ಭಾಗಕ್ಕೆ ಬಂದು ಕೆಲಸ ಮಾಡಲು ಪ್ರೇರೇಪಿಸಿದೆ. ಹ್ಯಾಬಿಟೇಟ್ ಆಫ್ ಹ್ಯುಮಾನಿಟಿ ಎಂಬ ಸ್ವಂಯ ಸೇವಾ ಸಂಸ್ಥೆ ಮನೆ ಇಲ್ಲದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಳ್ಳಲು ಸಹಾಯ ಒದಗಿಸುತ್ತದೆ. ಕೊಂಚ ಹಣವನ್ನು ಬಡ್ಡಿರಹಿತ ಸಾಲ ನೀಡುವುದರ ಜತೆಗೆ ಕಾರ್ಮಿಕರನ್ನೂ ನಿಯೋಜಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸ್ವಯಂ ಸೇವಕರಾದ ಅಮೇರಿಕದವರು ಮುಡಗೇರಿಗೆ ಬರುವಂತಾಗಿದೆ. ಸೋಮವಾರವಷ್ಟೇ ಮುಡಿಗೇರಿಗೆ ಬಂದಿಳಿದಿರುವ ಈ ಸ್ವಯಂ ಸೇವಕರು ಆಗಲೇ ಮನೆಗಳ ನಿರ್ಮಾಣಕ್ಕೆ ಅಡಿಪಾಯ ಹಾಕಲು ಪ್ರಾರಂಭಿಸಿದ್ದಾರೆ. ಯಾರಿಗೆ ಸಹಾಯ ?: ಇಲ್ಲಿನ ಲಕ್ಷ್ಮೀ ಶ್ರೀಪಾದ ಚಿಂಚೇಕರ ಹಾಗೂ ಚಂಪಾ ಚಂದ್ರಹಾಸ ಪೆಡ್ನೇಕರ ಅವರಿಗೆ ಸರಕಾರದ ಇಂದಿರಾ ಆವಾಸ್ ಯೋಜನೆಯಡಿ ಮನೆ ಮಂಜೂರಿಯಾಗಿದೆ. ಆದರೆ ಮನೆ ನಿರ್ಮಿಸಿಕೊಳ್ಳಲು ಸರಕಾರ ಒಟ್ಟು 1.40 ಲಕ್ಷ ರೂ. ಧನ ಸಹಾಯ ನೀಡುತ್ತದೆ. ಉಳಿದ ಹಣ ಹಾಗೂ ಕಾರ್ಮಿಕರ ಖರ್ಚನ್ನು ಫಲಾನುಭವಿಗಳೇ ಭರಿಸಿಕೊಳ್ಳಬೇಕು. ಆದರೆ ಉಳಿದ ವೆಚ್ಚ ಭರಿಸಿಕೊಳ್ಳಲು ಸಾಧ್ಯವಿಲ್ಲದ ತೀರ ಬಡವರಾಗಿರುವ ಈ ಇಬ್ಬರೂ ಮಹಿಳೆಯರಿಗೆ ಸಂಸ್ಥೆ ಸಹಾಯ ಒದಗಿಸಲು ಮುಂದಾಗಿದೆ. ಫಲಾನುಭವಿಗಳನ್ನು ಗುರುತಿಸುವುದು ಹೇಗೆ ?: ಹ್ಯಾಬಿಟೇಟ್ ಸಂಸ್ಥೆ ಜಗತ್ತಿನಾಧ್ಯಂತ ಹಲವು ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಸಂಪರ್ಕ ಇರಿಸಿಕೊಂಡಿದೆ. ಕಾರವಾರ ಮೂಲದ ಕೆಡಿಡಿಪಿ ಸಂಸ್ಥೆಯೂ ಇದರಲ್ಲಿ ಒಂದಾಗಿದೆ. ಕೆಡಿಡಿಸಿ ಸಂಸ್ಥೆ ಬಡವರನ್ನು ಹುಡುಕಿ ಅವರ ಮಾಹಿತಿಯನ್ನು ಹೆಬಿಟೇಟ್ ಸಂಸ್ಥೆಗೆ ಕಳುಹಿಸಿದೆ. ಇದರ ಆಧಾರದಲ್ಲಿ ಹೆಬಿಟೇಟ್ ತನ್ನ ಸ್ವಯಂ ಸೇವಕರನ್ನು ಮುಡಗೇರಿಗೆ ಕಳುಹಿಸಿದೆ. ಹ್ಯಾಬಿಟೇಟ್ ಸಂಸ್ಥೆ : ಹ್ಯಾಬಿಟೇಟ್ ಆಫ್ ಹ್ಯುಮಾನಿಟಿ ಸಂಸ್ಥೆ 1976ರಲ್ಲಿ ಅಮೇರಿಕದಲ್ಲಿ ಪ್ರಾರಂಭಗೊಂಡಿತು. ವಿಶ್ವದ 86 ರಾಷ್ಟ್ರಗಳಲ್ಲಿ ಒಟ್ಟು 7 ಲಕ್ಷ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಈಗಾಗಲೇ ಸಹಾಯ ಒದಗಿಸಿದೆ.
↧
ಕೂಲಿಯಾದ ಅಮೇರಿಕನ್ನರು !
↧